ಮಳೆ ನೀರು ಪ್ರವಾಹ: ದಾವೋಸ್ನಿಂದ ವಿಡಿಯೊ ಕಾನ್ಫರೆನ್ಸ್ ನಡೆಸಿದ ಅಶ್ವತ್ಥನಾರಾಯಣ
ಬೆಂಗಳೂರು, ಮೇ24: ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದ ಸಂದರ್ಭದಲ್ಲಿ ಸಂತ್ರಸ್ತರ ಸ್ಥಳಾಂತರಕ್ಕೆ ಸಮುದಾಯ ಭವನಗಳು ಸೇರಿದಂತೆ ಇತರ ಆಸರೆ ತಾಣಗಳನ್ನು ಗುರುತಿಸಿರುವ ಬಗ್ಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಳೆ ಅನಾಹುತ ನಿರ್ವಹಣೆಗಾಗಿ ನಗರದ ಪೂರ್ವ ವಲಯದ ಕಾರ್ಯಪಡೆ ಮುಖ್ಯಸ್ಥರಾಗಿರುವ ಅವರು ಮಂಗಳವಾರ ದಾವೋಸ್ ನಿಂದ ನಡೆಸಿದ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ವಲಯ ಆಯುಕ್ತ ರವೀಂದ್ರರವರಿಗೆ ಈ ಕುರಿತು ತಿಳಿಸಿದರು.
ಅಶ್ವತ್ಥನಾರಾಯಣ ಅವರು ಸೋಮವಾರ ನಡೆಸಿದ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಹವಾಮಾನ ಮುನ್ಸೂಚನೆಯನ್ನು ಆಧಾರವಾಗಿಟ್ಟುಕೊಂಡು ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆ ಪ್ರಕಾರವಾಗಿ ಮೇ26ರವರೆಗೆ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದರೆ, ನಂತರ ಮೇ29ರವರೆಗೆ ಒಣಹವೆ ಇರುವುದಾಗಿ ತಿಳಿದುಬಂದಿದೆ. ಈ ಮಧ್ಯೆ, ನಿರೀಕ್ಷೆ ಮೀರಿ ಮಳೆ ಸುರಿದರೆ ಉಂಟಾಗಬಹುದಾದ ಸಾಧ್ಯತೆ ಎದುರಿಸಲು ಕ್ರಮ ವಹಿಸಲಾಗಿದೆ ಎಂದು ಆಯುಕ್ತ ರವೀಂದ್ರರವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಹಾಜರಿದ್ದ ಶಾಸಕ ಕೆ.ಜೆ.ಜಾರ್ಜ್ ಅವರು, ಮಳೆ ನೀರು ಚರಂಡಿಗಳ ಒತ್ತುವರಿಯನ್ನು ತೆರವುಗೊಳಿಸುವ ಅಗತ್ಯದ ಬಗ್ಗೆ ಸಲಹೆ ಕೊಟ್ಟರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಶ್ವತ್ಥನಾರಾಯಣ ಅವರು, ಇದಕ್ಕೆ ಕಾರಣರಾದವರಿಗೆ ತಕ್ಷಣವೇ ನೋಟಿಸ್ ಕೊಟ್ಟು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಲಾ 25,000 ರೂಪಾಯಿ
ಕಳೆದ ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದ ನಷ್ಟಕ್ಕೊಳಗಾದ 691 ಕುಟುಂಬಗಳಿಗೆ ತಲಾ 25,000 ರೂಪಾಯಿಗಳನ್ನು ಬಿಡುಗಡೆ ಮಾಡುವ ಸಂಬಂಧವಾಗಿ ಕೇಂದ್ರ ಕಚೇರಿಗೆ ದಾಖಲೆಗಳನ್ನು ಕಳುಹಿಸಲಾಗಿದೆ. ಈ ಹಣ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಶೀಘ್ರವೇ ತಲುಪಲಿದೆ ಎಂದು ರವೀಂದ್ರ ಇದೇ ಸಂದರ್ಭದಲ್ಲಿ ತಿಳಿಸಿದರು.
ಡೀಸಿಲ್ಟಿಂಗ್ ಗುತ್ತಿಗೆ ವಹಿಸಲಾಗಿತ್ತು
ಚರಂಡಿಗಳಲ್ಲಿ ಹೂಳೆತ್ತುವ ಡೀಸಿಲ್ಟಿಂಗ್ ಕೆಲಸವನ್ನು ಗುತ್ತಿಗೆದಾರರಿಗೆ ಈ ಮುಂಚೆಯೇ ವಹಿಸಲಾಗಿತ್ತು. ಆದರೆ ಇದೀಗ ಗಮನಕ್ಕೆ ಬಂದಿರುವಂತೆ 7 ಕಡೆಗಳಲ್ಲಿ ಗುತ್ತಿಗೆದಾರರು ಡೀಸಿಲ್ಟಿಂಗ್ ಮಾಡಿಲ್ಲ ಎಂಬುದು ಗೊತ್ತಾಗಿದೆ. ಸಂಬಂಧಿಸಿದ ಈ ಗುತ್ತಿಗೆದಾರರಿಗೆ ತಕ್ಷಣವೇ ನೋಟಿಸ್ ಕೊಟ್ಟು ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ, 20 ದಿವಸಗಳೊಳಗೆ ಡೀಸಿಲ್ಟಿಂಗ್ ಮಾಡಿಸಿ ಚರಂಡಿಗಳಲ್ಲಿ ನೀರು ಅಡೆತಡೆ ಇಲ್ಲದಂತೆ ಹರಿಯುವಂತೆ ಮಾಡಬೇಕು ಎಂದು ಸಚಿವರು ಆದೇಶಿಸಿದರು.
ರೆಡ್ಜೋನ್
ಪೂರ್ವ ವಲಯದಲ್ಲಿ ನೀಲಸಂದ್ರ, ಫ್ರೇಜರ್ಟೌನ್, ಸಂಜಯನಗರ ಸೇರಿದಂತೆ 22 ಸ್ಥಳಗಳನ್ನು ‘ರೆಡ್ ಜೋನ್' ಎಂದು ಗುರುತಿಸಲಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ಅಧಿಕಾರಿಗಳು ತಗ್ಗಿನ ಪ್ರದೇಶಕ್ಕೆ ನೀರು ನುಗ್ಗಬಹುದಾದ ಸಾಧ್ಯತೆಯನ್ನು ನಿರ್ವಹಿಸಲು ಸ್ಥಳಾಂತರಕ್ಕಾಗಿ ಮೊದಲೇ ಯೋಜನೆ ಹಾಕಿಕೊಳ್ಳಬೇಕು. ಇದಕ್ಕಾಗಿ ಹತ್ತಿರದ ಶಾಲೆ ಮತ್ತಿತರ ಕಡೆಗಳಲ್ಲಿ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಿಗಳು ರೆಡ್ ಜೋನ್ ಗಳಲ್ಲಿ ವಾಸಿಸುತ್ತಿರುವ ಜನರ ಜೊತೆ ಸಂಪರ್ಕದಲ್ಲಿದ್ದು ಹವಮಾನ ಮುನ್ಸೂಚನೆ ಆಧಾರಿತವಾಗಿ ತಯಾರಿ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪೂರ್ವ ವಲಯ
ಪೂರ್ವ ವಲಯದಲ್ಲಿ ಎರಡು ದಿನಗಳ ಅವಧಿಯಲ್ಲಿ 11 ಸೆಂ.ಮೀ.ನಷ್ಟು ಹೆಚ್ಚಿನ ಮಳೆ ಸುರಿದಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ಕೊಟ್ಟರು. ದಾವೋಸ್ ನಿಂದ ಸಚಿವ ಡಾ. ಅಶ್ವಥ್ ನಾರಾಯಣರವರು ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಸಚಿವರ ಸೂಚನೆಗಳನ್ನು ಪಾಲಿಸುವುದಾಗಿ ತಿಳಿಸಿದ್ದಾರೆ.
Recommended Video