ಬೆಂಗಳೂರು ಭೀಕರ ಮಳೆ: ಬಿಬಿಎಂಪಿ ಕ್ರಮಗಳೇನು?
ಬೆಂಗಳೂರು, ಮೇ18: ಬೆಂಗಳೂರಿನಲ್ಲಿ ಮೇ 17ರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ರಸ್ತೆಗಳು ಜಲಾವೃಗೊಂಡಿದ್ದವು. ಮನೆಗಳಿಗೆ ನೀರು ನುಗ್ಗಿರುವ ಹಾಗೂ ಮರಗಳು ಧರೆಗುರುಳಿರುವ ದೂರುಗಳು ಬಿಬಿಎಂಪಿಗೆ ಬಂದಿದ್ದವು.
ಆಯಾ ವಲಯ ವ್ಯಾಪ್ತಿಯ ವಲಯ ಆಯುಕ್ತರುಗಳು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರುಗಳ ನೇತೃತ್ವದಲ್ಲಿ ಸಮಸ್ಯೆಗಳನ್ನು ಪರಿಹಾರ ನೀಡುವ ಸೂಚನೆಯನ್ನು ನೀಡಿದ್ದರು. ಬಿಬಿಎಂಪಿ ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಕೆಲವೊಂದು ಕ್ರಮವನ್ನು ಕೈಗೊಂಡಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ 1971ರಿಂದ ಮೇ ತಿಂಗಳೊಂದರಲ್ಲಿ ದಾಖಲೆಯ ಪ್ರಮಾಣದ ಮಳೆಯಾಗಿರುವುದು ಇದೇ ಮೊದಲು. (ಮೇ 1 ರಿಂದ ಮೇ 18 ರವರೆಗೆ 210 ಮಿ. ಮೀ ಮಳೆಯಾಗಿದೆ). ಆದರೆ ಮಂಗಳವಾರ ಕೇವಲ 2 ತಾಸಿನಲ್ಲಿಯೇ ನಗರದಾದ್ಯಂತ ಸರಾಸರಿ 75 ಮಿ. ಮೀ ಗೂ ಹೆಚ್ಚು ಮಳೆಯಾಗಿರುವುದರಿಂದ ನಗರದ ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
254 ದೂರುಗಳು ಬಂದಿವೆ; ಮೇ17ರಂದು ದಿನವಿಡೀ ಮೋಡಕವಿದ ವಾತಾವರಣವಿದ್ದು, ಕಳೆದ ರಾತ್ರಿ ಸುಮಾರು 8.30 ರಿಂದ ಶುರುವಾದ ಮಳೆಯು ನಿರಂತರವಾಗಿ ಸುರಿದ ಕಾರಣ ರಾಜಕಾಲುವೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಎಲ್ಲಾ ವಲಯ ವ್ಯಾಪ್ತಿಯಲ್ಲಿನ ತಗ್ಗು ಪ್ರದೇಶಗಳಲ್ಲಿರುವ ಸುಮಾರು 1,000 ಮನೆಗಳಿಗೆ ನೀರು ನುಗ್ಗಿತ್ತು.
ರಸ್ತೆಗಳಲ್ಲಿ ಕೂಡಾ ನೀರು ನಿಂತಿದ್ದು, ಪಾಲಿಕೆಯ ವಿಪತ್ತು ನಿರ್ವಹಣಾ ತಂಡಗಳು ಸಕ್ರಿಯವಾಗಿ ಅಹೋರಾತ್ರಿ ಕಾರ್ಯ ನಿರ್ವಹಿಸಿದ್ದಾರೆ. ಪಾಲಿಕೆಯ ನಿಯಂತ್ರಣ ಕೊಠಡಿಗೆ ಸುಮಾರು 254 ದೂರುಗಳು ಬಂದಿದ್ದು, 170 ಜಲಾವೃತವಾಗಿರುವ, 34 ಮರ ಧರೆಗುರುಳಿರುವ ಹಾಗೂ 60 ಇತರೆ ದೂರುಗಳು ವರದಿಯಾಗಿರುತ್ತದೆ. ಎಲ್ಲಾ ದೂರುಗಳನ್ನು ಆಯಾ ವಲಯ ವ್ಯಾಪ್ತಿಯ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಂಡಿರುತ್ತಾರೆ.
ಮಳೆಯಿಂದಾದ ಅನಾಹುತಗಳನ್ನು ಸರಿಯಾದ ಸಮಯದಲ್ಲಿ ಪರಿಹರಿಸಲು ಹಾಗೂ ಮುಂಬರುವ ಅನಾಹುತಗಳನ್ನು ಸಸನ್ನದ್ಧವಾಗಿ ಎದುರಿಸಲು ಪಾಲಿಕೆಯು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ಸೂಚಿಸಿದಂತೆ ವಲಯ ಮಟ್ಟದಲ್ಲಿ ವಲಯ ಆಯುಕ್ತರ ನಾಯಕತ್ವದಲ್ಲಿ ತಂಡಗಳನ್ನು ನಿಯೋಜಿಸಲಾಗಿರುತ್ತದೆ.
ಬಿಬಿಎಂಪಿ ಏನೇ ಕ್ರಮವನ್ನು ಕೈಗೊಂಡಿದ್ದರೂ ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳದ್ದಕ್ಕೆ ಜನರು ಮಾತ್ರ ಬಿಬಿಎಂಪಿಗೆ ಹಿಡಿಶಾಪವನ್ನು ಹಾಕುತ್ತಿದ್ದಾರೆ
ಬಿಬಿಎಂಪಿ ತಿಳಿಸಿರುವಂತೆ ತೆಗೆದುಕೊಂಡಿರುವ ಕ್ರಮಗಳು
1. ಬಿಬಿಎಂಪಿಯ ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರುಗಳು ಸೇರಿದಂತೆ 200ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗಳು ಅಹೋರಾತ್ರಿ ಕಾರ್ಯನಿರ್ವಹಿಸಿರುತ್ತಾರೆ.
2. ಬಿಬಿಎಂಪಿ, ರಾಜ್ಯ ವಿಪತ್ತು ನಿರ್ವಹಣಾ ದಳ, ಅಗ್ನಿ ಶಾಮಕ ದಳ, ಅರಣ್ಯ ವಿಭಾಗ, ಸಂಚಾರಿ ಪೊಲೀಸ್ ವಿಭಾಗ, ಬೆಸ್ಕಾಂ, ಜಲಮಂಡಳಿಇಲಾಖೆಗಳೊಂದಿಗೆ ಸಮನ್ವಯ ನಡೆಸಿ ತ್ವರಿತವಾಗಿ ಅಗತ್ಯವಿರುವ ಅಧಿಕಾರಿಗಳನ್ನು ತಡರಾತ್ರಿಯಲ್ಲಿ ನಿಯೋಜಿಸುತ್ತಾರೆ.
3. ಬಿಬಿಎಂಪಿಯ 8 ವಲಯ ನಿಯಂತ್ರಣ ಕೊಠಡಿ ಹಾಗೂ ಪಾಲಿಕೆ ಕೇಂದ್ರ ಕಛೇರಿಯ ಶಾಶ್ವತ ನಿಯಂತ್ರಣ ಕೊಠಿಡಿಯಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸಿರುತ್ತಾರೆ.
4. ರಾಜಕಾಲುವೆಯಲ್ಲಿ ಹೂಳೆತ್ತಲು 46 ಜೆಸಿಬಿ/ ಹಿಟಾಚಿ ಯಂತ್ರಗಳು (8 ರೊಬೋಟಿಕ್ ಯಂತ್ರಗಳು ಸೇರಿದಂತೆ), ಜಲಮಂಡಳಿಯ ಜೆಟ್ ಯಂತ್ರಗಳು, ಪಂಪ್ ಸೆಟ್ ಗಳನ್ನು ಬಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ.
5. ಅರಣ್ಯ ವಿಭಾಗದ 21 ಮರ ಕತ್ತರಿಸುವ ತಂಡಗಳು ರಾತ್ರಿ ಇಡೀ ಕಾರ್ಯ ನಿರ್ವಹಿಸಿ 34 ಮರಗಳನ್ನು ತೆರವುಗೊಳಿಸಲಾಗಿರುತ್ತದೆ.
6. ಎಲ್ಲಾ 8 ವಲಯಗಳಲ್ಲಿ ಬೆಸ್ಕಾಂ ಇಲಾಖೆಯು ವಿದ್ಯುತ್ ಸಂಬಂಧಿತ ದೂರುಗಳನ್ವಯ ಸಿಬ್ಬಂದಿಗಳನ್ನು ನಿಯೋಜಿಸಿ ಕ್ರಮ ಕೈಗೊಂಡಿರುತ್ತಾರೆ.
7. ಕಂದಾಯ ಅಧಿಕಾರಿಗಳು/ ಸಹಾಯಕ ಕಂದಾಯ ಅಧಿಕಾರಿಗಳು ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಸಮೀಕ್ಷೆ ನಡೆಸಿ ಸಂತ್ರಸ್ತರ ನಿಖರ ಮಾಹತಿಯನ್ನು 2 ದಿನಗಳೊಳಗಾಗಿ ಸಂಗ್ರಹಿಸಲು ಆದೇಶ ನೀಡಲಾಗಿದ್ದು, ಪರಿಶೀಲನೆ ನಡೆಸಿದ ನಂತರ ಅರ್ಹ ಸಂತ್ರಸ್ತರ ಬ್ಯಾಂಕ್ ಖಾತೆಗೆ ರೂ. 25,000 ಗಳನ್ನು ನೇರವಾಗಿ ಜಮೆ ಮಾಡಲಾಗುತ್ತದೆ.