'ಬಿಎಸ್ವೈ ಹೇಳಿದಂತೆ ಬೆಂಗಳೂರಿನ ಚಿತ್ರಣವೇ ಬದಲು': ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು, ಮೇ 20: ಮಳೆಯಿಂದ ತತ್ತರಿಸಿ ಹೋಗಿರುವ ನಗರದ ವಿವಿಧ ಭಾಗಗಳಿಗೆ ರಾಜಕೀಯ ಮುಖಂಡರು ಪ್ರದಕ್ಷಿಣೆ ಹಾಕುತ್ತಿದ್ದಾರೆ. ಅದರಂತೇ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗಾಂಧಿನಗರ, ಶಿವಾಜಿನಗರ, ಬ್ಯಾಟರಾಯನಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಮಳೆಯಿಂದ ಉಂಟಾಗಿರುವ ಹಾನಿಯನ್ನು ವೀಕ್ಷಿಸಿದ್ದಾರೆ.
ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಆದ್ಯತೆ ಮೇರೆಗೆ ಅವುಗಳನ್ನು ಪರಿಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ ಸಿದ್ದರಾಮಯ್ಯ, ಮಳೆಯಿಂದ ಇಷ್ಟೊಂದು ಆವಾಂತರವಾಗಲು ಸರಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿದರು.
ಸಿದ್ದರಾಮಯ್ಯಗೆ ಮಾತ್ರನಾ ಜವಾಬ್ದಾರಿ ಇರೋದು, ನಮ್ಗಿಲ್ವಾ?
"ಕುಮಾರಸ್ವಾಮಿ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಏಳು ಮುನ್ಸಿಪಾಲಿಟಿ ಮತ್ತು 110 ಹಳ್ಳಿಗಳನ್ನು ಬೆಂಗಳೂರು ನಗರದ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಯಿತು. ಸೇರ್ಪಡೆಗೊಳಿಸಿದ ನಂತರ ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯವನ್ನು ಕೊಡಿಸಬೇಕು. ಅದ್ಯಾವುದೂ ಆಗಿಲ್ಲ"ಎಂದು ಸಿದ್ದರಾಮಯ್ಯ ದೂರಿದರು.
"ರಾಜಾ ಕಾಲುವೆ ಒತ್ತುವರಿ ತೆರುವುಗೊಳಿಸುವ ಕೆಲಸವನ್ನು ನಮ್ಮ ಅವಧಿಯಲ್ಲಿ ಆರಂಭಿಸಲಾಯಿತು. ಬಿಜೆಪಿಯವರು ಅದನ್ನು ಮುಂದುವರಿಸಬೇಕಾಗಿತ್ತು, ಅದನ್ನು ಮಾಡಲಿಲ್ಲ. ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದಾಗ ಎರಡು ವರ್ಷಗಳಲ್ಲಿ ಬೆಂಗಳೂರಿನ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದರು. ಮಳೆಯ ಆವಾಂತರವನ್ನು ನೋಡಿದರೆ, ಅವರು ಹೇಳಿದಂತೆ ನಗರದ ಚಿತ್ರಣವೇ ಬದಲಾಗಿದೆ"ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
"ಬೆಂಗಳೂರು ನಗರದ ಚಿತ್ರಣ ಇನ್ನೂ ಹಾಳಾಯಿತೇ ಹೊರತು ಅಭಿವೃದ್ದಿಯಂತೂ ಆಗಿಲ್ಲ. ಪ್ರತೀ ಮಳೆಯಲ್ಲೂ ಮನೆಯೊಳಗೆ ನೀರು ನುಗ್ಗುತ್ತಿದೆ, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸಚಿವರ ನಡುವೆ ಸಂವಹನದ ಕೊರತೆಯಿದೆ"ಎಂದು ಸಿದ್ದರಾಮಯ್ಯ ಕಿಡಿಕಾರಿದರು.
"ಹಳೇ ಬೆಂಗಳೂರು ವ್ಯಾಪ್ತಿಯ ಪ್ರದೇಶಗಳಲ್ಲಿ ಚರಂಡಿಗಳು ಚಿಕ್ಕದಾಗಿವೆ, ಬಿಡಿಎ ಮತ್ತು ಒಳ ಚರಂಡಿಯವರು ರಸ್ತೆ ಅಗೆದರೆ ಅದನ್ನು ಮುಚ್ಚುವುದಿಲ್ಲ. ಇದರಿಂದಾಗಿ ಮಳೆಯ ವೇಳೆ ಸಮಸ್ಯೆಯಾಗುತ್ತಿದೆ. ನಾನು ಸಿಎಂ ಆಗಿದ್ದಾಗ 1,217 ಕೋಟಿ ರೂಪಾಯಿಯನ್ನು ಇದಕ್ಕಾಗಿ ಮೀಸಲಿಟ್ಟಿದ್ದೆ"ಎಂದು ಸಿದ್ದರಾಮಯ್ಯ ಹೇಳಿದರು.
Recommended Video