ಬೆಂಗಳೂರು ನಗರದಲ್ಲಿ ಮಳೆ ಅವಾಂತರ : ಡಿಸಿಎಂ ಸಿಟಿ ರೌಂಡ್ಸ್
ಬೆಂಗಳೂರು, ಮೇ 27 : ಎರಡು ದಿನದಿಂದ ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಗುಡುಗು, ಸಿಡಿಲು, ಗಾಳಿಯ ಆರ್ಭಟಕ್ಕೆ ಜನರು ಆತಂಕಗೊಂಡಿದ್ದಾರೆ. ಮುಂಗಾರು ಪೂರ್ವ ಮಳೆ ನಗರದಲ್ಲಿ ಇನ್ನೂ ಎರಡು ದಿನ ಸುರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಅವರು ಸೋಮವಾರ ನಗರ ಪ್ರದಕ್ಷಿಣೆ ನಡೆಸಿದರು. ಮಳೆ, ಗಾಳಿಯಿಂದಾಗಿ ಹಾನಿಯಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು. ಧರೆಗುರುಳಿದ ಮರಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು.
ಬೆಂಗಳೂರಲ್ಲಿ ಭಾರಿ ಮಳೆ, ಗಾಳಿ : ಧರೆಗುರುಳಿದ ಮರಗಳು
ಶನಿವಾರ ರಾತ್ರಿ ಮತ್ತು ಭಾನುವಾರ ನಗರದಲ್ಲಿ ಭಾರಿ ಮಳೆಯಾಗಿದೆ. ಮಳೆಯ ಜೊತೆ ಗಾಳಿಯ ಆರ್ಭಟಕ್ಕೆ ಮರಗಳು ಧರೆಗುರುಳಿವೆ. ಹಲವಾರು ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳಿಗೆ ಸಹ ಹಾನಿಯಾಗಿದೆ. ಆದ್ದರಿಂದ, ಪರಮೇಶ್ವರ ಅವರು ನಗರ ಪ್ರದಕ್ಷಿಣೆ ನಡೆಸಿದರು.
ಇನ್ನು ಎರಡು -ಮೂರು ದಿನ ಮಳೆ, ಬೆಂಗಳೂರಿಗರಿಗೆ ಎಚ್ಚರ! ಎಚ್ಚರ!
ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿಯ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮರದ ರೆಂಬೆಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಬಿಬಿಎಂಪಿ ಸಿಬ್ಬಂದಿ ಸಹ ಪ್ರಯತ್ನ ನಡೆಸುತ್ತಿದ್ದಾರೆ.
ಪರಮೇಶ್ವರ ಬೆಂಗಳೂರು ರೌಂಡ್ಸ್
ಬೆಂಗಳೂರು ನಗರದಲ್ಲಿ ಭಾರಿ ಮಳೆಯ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ವಿಜಯನಗರ, ಮಲ್ಲೇಶ್ವರ, ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು. ನೆಲಕ್ಕುರುಳಿರುವ ಮರದ ರೆಂಬೆಗಳನ್ನು ತೆರವು ಮಾಡಿ, ಕಡಿತಗೊಂಡಿರುವ ವಿದ್ಯುತ್ ಲೈನ್ ಸರಿಪಡಿಸುವಂತೆ ಸೂಚಿಸಿದರು.
61 ತಂಡಗಳಿಂದ ಕೆಲಸ
ಜನರೊಂದಿಗೆ ಮಾತನಾಡಿದ ಪರಮೇಶ್ವರ ಅವರು ಸಮಸ್ಯೆಗಳನ್ನು ಆಲಿಸಿದರು. ಮಳೆ ಹಾನಿ ಸರಿಪಡಿಸಲು ಬಿಬಿಎಂಪಿ, ಬೆಸ್ಕಾಂ ಸೇರಿ ಒಟ್ಟು 61 ತಂಡಗಳು ಕೆಲಸ ಮಾಡುತ್ತಿವೆ. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದೇ ನಮ್ಮ ಗುರಿಯಾಗಿದೆ ಎಂದು ಪರಮೇಶ್ವರ ಹೇಳಿದರು.
ಎಲ್ಲಿ ಎಷ್ಟು ಮಳೆ?
ಭಾನುವಾರ ನಗರದ ವಿವಿಧ ಪ್ರದೇಶಗಳಲ್ಲಿ ಹೆಚ್ಚು ಮಳೆ ಸುರಿದಿದೆ. ಆರ್.ಆರ್.ನಗರದಲ್ಲಿ ಹೆಚ್ಚು ಎಂದರೆ 112.5 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಳಿದಂತೆ ಸಂಪಂಗಿ ರಾಮನಗರದಲ್ಲಿ 50.5 ಮಿ.ಮೀ., ದಾಸರಹಳ್ಳಿಯಲ್ಲಿ 37.5 ಮಿ.ಮೀ. ರಾಧಾಕೃಷ್ಣ ವಾರ್ಡ್ನಲ್ಲಿ 35.5 ಮಿ.ಮೀ.ಮಳೆಯಾಗಿದೆ.
ಶನಿವಾರವೂ ಮಳೆ
ಶನಿವಾರವೂ ನಗರದಲ್ಲಿ ಭಾರಿ ಮಳೆಯಾಗಿತ್ತು. ಗುಡುಗು, ಮಿಂಚು ಮತ್ತು ಗಾಳಿಯ ಆರ್ಭಟ ಜೋರಾಗಿತ್ತು. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಶನಿವಾರ ರಾತ್ರಿ 9 ರಿಂದ 11 ಗಂಟೆಯ ತನಕ 27 ಮಿ.ಮೀ.ಮಳೆಯಾಗಿತ್ತು.