ಕೆರೆಗಳನ್ನು ಮುಚ್ಚಿಸಿದ್ದೇ ಬೆಂಗಳೂರಿನ ಈ ದೈನೇಸಿ ಸ್ಥಿತಿಗೆ ಕಾರಣ!
ಬೆಂಗಳೂರಿನಲ್ಲಿ ಮಳೆ ನೀರಿನ ಅವಾಂತರ. ಕೆರೆಗಳನ್ನು ಕಾಲೋನಿಗಲಾಗಿ ಪರಿವರ್ತಿಸಿದ್ದೇ ಬೆಂಗಳೂರು ಮುಳುಗಡೆಗೆ ಕಾರಣ ಎನ್ನುವ ನಾಗರಿಕರು.
ಬೆಂಗಳೂರು, ಆಗಸ್ಟ್ 15: ಬೆಂಗಳೂರಿನಲ್ಲಿ ಆಯಾ ಕಾಲಘಟ್ಟದಲ್ಲಿ ಹಲವಾರು ಕೆರೆಗಳನ್ನು ಮುಚ್ಚಿಸಿದ್ದರಿಂದಲೇ ಬೆಂಗಳೂರಿನಲ್ಲಿ ದೊಡ್ಡ ಮಳೆ ಬಂದರೆ ಇಡೀ ನಗರವೇ ನೀರಿನಲ್ಲಿ ಮುಳುಗಲಿರುವ ದೋಣಿಯಂತಾಗಲು ಕಾರಣ ಎಂದು ಹಲವಾರು ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಲಾರಂಭಿಸಿದ್ದಾರೆ.
ಬೆಂಗಳೂರು: ಅಹೋರಾತ್ರಿ ಮಳೆಗೆ ಜನಜೀವನ ಅಸ್ತವ್ಯಸ್ತ
ಜವಾಬ್ದಾರಿಯುತ ಸಂಸ್ಥೆಯಾದ ಬಿಡಿಎ, ಇತ್ತೀಚಿನ ವರ್ಷಗಳಲ್ಲಿ ಸುಮಾರು 26 ಕೆರೆಗಳನ್ನು ಮುಚ್ಚಿ ಅಲ್ಲಿ ಬಡಾವಣೆಗಳನ್ನು ನಿರ್ಮಿಸಿದೆ ಎಂದು ಕೆಲ ಮೂಲಗಳು ಹೇಳುತ್ತವೆ.
ಕಾಚರಕನಹಳ್ಳಿ ಕೆರೆ, ಮಿಲ್ಲರ್ಸ್ ಟ್ಯಾಂಕ್ ಬಂಡ್, ಚೆನ್ನಮ್ಮ ಕೆರೆ ಅಚ್ಚುಕಟ್ಟು, ಡಾಲರ್ಸ್ ಕಾಲೋನಿ, ಜೆಪಿ ನಗರ, ವೆಂಕಟರಾಯನ ಕೆರೆ, ಚಿಕ್ಕಲ್ಲಸಂದ್ರ, ವಸಂತಪುರ ಜನಾರ್ದನ ಕೆರೆ, ಕೋಣನಕುಂಟೆ, ಹಲಗೆವಡೇರ ಹಳ್ಳಿಯ ಕೆರೆ ಸೇರಿದಂತೆ ಅನೇಕ ಕೆರೆಗಳನ್ನು ಮುಚ್ಚಿಸಿ ಅಲ್ಲೆಲ್ಲಾ ಜನ ವಸತಿ ಪ್ರದೇಶಗಳಾಗಿ ಪರಿವರ್ತಿಸಲಾಗಿದೆ.
ರಾಜ್ಯದಲ್ಲಿನ ದಾಖಲೆ ಮಳೆಗೆ ಒಂದು ಸಾವು; ಹಲವೆಡೆ ತೊಂದರೆ
ಇದರ ಜತೆಯಲ್ಲೇ, ರಾಜಕಾಲುವೆಗಳ ಒತ್ತುವರಿ ಆಗಿರುವುದು ಮಳೆ ಬಂದಾಗ ಹೀಗೆ ನೀರು ನುಗ್ಗಲು ಮತ್ತೊಂದು ಪ್ರಮುಖ ಕಾರಣ. ನಗರದ ಹಲವಾರು ಪ್ರದೇಶಗಳ ರಾಜಾ ಕಾಲುವೆಗಳ ಒತ್ತುವರಿ ಜತೆಗೆ, ಹಲವಾರು ರಾಜಾಕಾಲುಗಳ ಸಂಪರ್ಕ ಕಡಿದು ಹೋಗಿರುವುದು ಹೀಗೆ ನೀರು ಎಲ್ಲೆಂದರಲ್ಲಿ ಹರಿದಾಡಲು ಕಾರಣ ಎನ್ನಲಾಗಿದೆ.