ಬೆಂಗಳೂರಿನಲ್ಲಿ ಹಲವು ಪ್ರಮುಖ ಕಾಮಗಾರಿಗಳ ಮುಕ್ತಾಯಕ್ಕೆ ಅಡ್ಡಿಯಾದ ಮಳೆ
ಬೆಂಗಳೂರು, ಆಗಸ್ಟ್ 14: ಮುಂಗಾರು ಆರಂಭದಿಂದ ರಾಜಧಾನಿ ಬೆಂಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಹಲವು ಅಭಿವೃದ್ಧಿ ಕಾಮಗಾರಿಗಳ ಮುಕ್ತಾಯ ವಿಳಂಬಕ್ಕೆ ಕಾರಣವಾಗಿದೆ. ಮುಕ್ತಾಯ ಹಂತದಲ್ಲಿದ್ದ ಹಲವು ಕಾಮಗಾರಿಗಳನ್ನು ಮಳೆಯ ಕಾರಣದಿಂದ ಸ್ಥಗಿತಗೊಳಿಸಲಾಗಿದೆ.
75 ನೇ ಸ್ವಾತಂತ್ರ್ಯ ದಿನಾಚರಣೆಯ ಸ್ಮರಣಾರ್ಥ ನಗರದಲ್ಲಿ ಎರಡು ಪ್ರಮುಖ ಯೋಜನೆಗಳನ್ನು ಉದ್ಘಾಟಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೋಜನೆ ಮಳೆಯಿಂದಾಗಿ ಹಾಳಾಗಿದೆ.
ಬೆಂಗಳೂರು: ಡಾಂಬರೀಕರಣಕ್ಕೆ ಮಳೆ ಅಡ್ಡಿ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಉದ್ಘಾಟನೆ ವಿಳಂಬ ಸಾಧ್ಯತೆ
ಕೋರಮಂಗಲ ಪ್ರದೇಶದ ಮಳೆ ನೀರು ಬೆಳ್ಳಂದೂರು ಕೆರೆಗೆ ಸೇರುವ ಜಲಮಾರ್ಗ ಯೋಜನೆ ಆಗಸ್ಟ್ 15ರಂದು ಉದ್ಘಾಟನೆಯಾಗಬೇಕಾಗಿತ್ತು. ಆದರೆ ಮಳೆಯ ಕಾರಣದಿಂದ ಎರಡು ತಿಂಗಳಿನಿಂದ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.
"9.2 ಕಿಲೋ ಮೀಟರ್ ಉದ್ದದ ಯೋಜನೆಯಲ್ಲಿ, ಶಾಂತಿನಗರ ಬಸ್ ಟರ್ಮಿನಲ್ ಬಳಿಯ ವಾಕ್ವೇ ಸೇರಿದಂತೆ ಎನ್ಆರ್ ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆ ನಡುವೆ ಕನಿಷ್ಠ 2.4 ಕಿಲೋ ಮೀಟರ್ ವ್ಯಾಪ್ತಿಯನ್ನು ಪೂರ್ಣಗೊಳಿಸಲು ನಾವು ಬಯಸಿದ್ದೇವೆ. ಆದರೆ, ಮಳೆಯಿಂದ ಯೋಜನೆ ಹಾಳಾಗಿದೆ ಮತ್ತು BWSSB ಕೊಳಚೆನೀರಿನ ಹರಿವನ್ನು ತಡೆಯಲು ಸಾಧ್ಯವಾಗಲಿಲ್ಲ. ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಕೂಡ ಕಷ್ಟಕರವಾಗಿತ್ತು, ಏಕೆಂದರೆ ನಾವು ಯಂತ್ರೋಪಕರಣಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ," ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಶೇಕಡ 62 ರಷ್ಟು ಕಾಮಗಾರಿ ಮಾತ್ರ ಪೂರ್ಣ
ಒಟ್ಟಾರೆ ಯೋಜನೆಯ ಪ್ರಗತಿ ಶೇಕಡ 62ರಷ್ಟಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ. ಎಸ್. ಪ್ರಹ್ಲಾದ್ ಹೇಳಿದ್ದಾರೆ. "ನಾವು ಯೋಜನೆಯ ಶೇಕಡ 62 ರಷ್ಟನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಮಳೆಯಿಂದಾಗಿ ಕಾಲುದಾರಿ ತೆರೆಯುವ ಯೋಜನೆಯನ್ನು ಮುಂದೂಡಲಾಗಿದೆ'' ಎಂದು ಹೇಳಿದರು.
ಯೋಜನೆಯು ಮಾರ್ಚ್ 2022 ರ ಆರಂಭಿಕ ಗಡುವನ್ನು ಹೊಂದಿದ್ದರೂ, ಆಗಸ್ಟ್ ವರೆಗೆ ಐದು ತಿಂಗಳ ವಿಸ್ತರಣೆಯನ್ನು ನೀಡಲಾಯಿತು. ಯೋಜನೆಯು ಮಾರ್ಚ್ 2023 ರವರೆಗೆ ಮುಂದುವರಿಯಬಹುದು ಎಂದು ಗುತ್ತಿಗೆದಾರರು ಹೇಳಿದ್ದಾರೆ.
ಬೆಂಗಳೂರು ಮಳೆ; ಲೇಔಟ್ ಮುಳುಗಡೆ: ಜನ ಸಂಚಾರಕ್ಕೆ ಟ್ರಾಕ್ಟರ್
ಸ್ಟೀಲ್ ಬ್ರಿಡ್ಜ್ ಉದ್ಘಾಟನೆ ವಿಳಂಬ ಸಾಧ್ಯತೆ
ಸ್ವಾತಂತ್ರ್ಯ ದಿನಾಚರಣೆಗೆ ಯೋಜಿಸಲಾಗಿದ್ದ ಶಿವಾನಂದ ಸರ್ಕಲ್ ಮೇಲ್ಸೇತುವೆಯ ಉದ್ಘಾಟನೆಯನ್ನು ಮುಂದೂಡುವ ಸಾಧ್ಯತೆಯಿದೆ. ''ಹೈಕೋರ್ಟ್ನಲ್ಲಿ ಪ್ರಕರಣ ಇದ್ದ ಕಾರಣ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಹೈಕೋರ್ಟ್ನಿಂದ ಹಸಿರು ನಿಶಾನೆ ದೊರೆತ ತಕ್ಷಣ ಕಾಮಗಾರಿ ಪುನರಾರಂಭಿಸಿದ್ದರೂ ಮಳೆಯಿಂದಾಗಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ" ಎಂದು ಬಿಬಿಎಂಪಿಯ ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ.
ಕಳೆದೆರಡು ದಿನಗಳಿಂದ ವಾತಾವರಣ ಸುಧಾರಿಸಿರುವುದರಿಂದ ಸೋಮವಾರದಂದು ಕನಿಷ್ಠ ಒಂದು ಬದಿಯನ್ನಾದರೂ ಮತ್ತು ಒಂದು ವಾರದೊಳಗೆ ಇನ್ನೊಂದು ಬದಿಯನ್ನು ತೆರೆಯಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.
ಮಳೆ ನಿಂತ ನಂತರ ಕಾಮಗಾರಿ ಚುರುಕು
''ರಸ್ತೆ ಡಾಂಬರೀಕರಣ ಮಾತ್ರ ಬಾಕಿ ಇದೆ. ಕಳೆದ ಎರಡು ದಿನಗಳಿಂದ ಮಳೆಗೆ ಬಿಡುವು ಇರುವ ಕಾರಣ, ಸೋಮವಾರದಂದು ಫ್ಲೈಓವರ್ನ ಕನಿಷ್ಠ ಒಂದು ಬದಿಯನ್ನು ಸಾರ್ವಜನಿಕರಿಗೆ ತೆರೆಯಲು ನಾವು ಶ್ರಮಿಸುತ್ತಿದ್ದೇವೆ" ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಎಂ ಹೇಳಿದರು.
ಮೂಲಗಳ ಪ್ರಕಾರ, ಬಸವೇಶ್ವರನಗರ ಮೇಲ್ಸೇತುವೆ ಮತ್ತು ಸುರಂಜನ್ ದಾಸ್ ಜಂಕ್ಷನ್ ಅಂಡರ್ಪಾಸ್ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಕನಿಷ್ಠ ಒಂದು ತಿಂಗಳು ವಿಳಂಬವಾಗಬಹುದು.
ಬೆಂಗಳೂರಿನಲ್ಲಿ ದಾಖಲೆ ಮಳೆ
ಆಗಸ್ಟ್ 1ರಿಂದ 8ರ ನಡುವೆ ಬೆಂಗಳೂರಿನಲ್ಲಿ ಸಾಮಾನ್ಯವಾಗಿ 28 ಮಿಲಿ ಮೀಟರ್ ವಾಡಿಕೆ ಮಳೆಯಾಗುತ್ತದೆ ಆದರೆ ಈ ಬಾರಿ ಇದೇ ವೇಳೆಯದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಯ 143 ಮಿಲಿ ಮೀಟರ್ ಮಅಂದರೆ ವಾಡಿಕೆ ಮಳೆಗಿಂದ ಶೇಕಡಾ 410ರಷ್ಟು ಹೆಚ್ಚು ಮಳೆ ಬಿದ್ದಿದೆ.
ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಮಳೆಯಿಂದಾಗುವ ಹಾನಿ ತಡೆಯಲು ಬಿಬಿಎಂಪಿ ಹಲವು ಕ್ರಮಗಳನ್ನು ತೆಗೆದುಕೊಂಡರೂ ಪ್ರತಿ ಬಾರಿ ಮಳೆಯಾದಾಗಲೂ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ.