ಮಳೆ ಹಾನಿ: ಮಕ್ಕಳಿಗೆ ಕಲಿಕಾ ಸಾಮಗ್ರಿ ಒದಗಿಸಲು ನಿರಂಜನಾರಾಧ್ಯ ಆಗ್ರಹ
ಬೆಂಗಳೂರು, ಸೆಪ್ಟಂಬರ್ 09: ಕೋವಿಡ್ ನಂತರ ಚೇತರಿಕೆ ಕಾಣುತ್ತಿದ್ದ ಮಕ್ಕಳ ಶಿಕ್ಷಣಕ್ಕೆ ನಿರಂತರ ಸುರಿದ ಧಾರಾಕಾರ ಮಳೆಯಿಂದ ತೊಂದರೆ ಆಗಿದೆ. ಕೂಡಲೇ ಕಲಿಕಾ ಸಾಮಗ್ರಿ ಒದಗಿಸಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸುವಂತೆ ಬೆಂಗಳೂರಿನ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಗ್ರಹಿಸಿದೆ.
ಮಳೆಯಿಂದ ಸಂಭವಿಸಿದ ಅನಾಹುತ ಸರಿಪಡಿಸುವಲ್ಲಿ ಶಿಕ್ಷಣ ಇಲಾಖೆಯು ಯುದ್ಧೋಪಾದಿಯಲ್ಲಿ ಕ್ರಮವಹಿಸಬೇಕು ಎಂದು ಪ್ರಟಕಣೆ ಮೂಲಕ ವೇದಿಕೆಯ ಮಹಾಪೋಷಕರು ಮತ್ತು ಅಭಿವೃದ್ಧಿ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ.ವಿ.ಪಿ. ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಸರಿಸುಮಾರು ಒಂದು ತಿಂಗಳಿಂದ ಮುಂಗಾರು ಮಳೆ ಸುರಿಯುತ್ತಿದೆ. ಜೋರು ಮಳೆಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಇನ್ನಿತರೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ತಗ್ಗು ಪ್ರದೇಶದಲ್ಲಿ ಸಾಕಷ್ಟ ಸಮಸ್ಯೆ ಉಂಟಾಗಿದೆ. ಬೆಂಗಳೂರಿನ ಮಹಾದೇವಪುರ, ಸರ್ಜಾಪುರ, ಪೀಣ್ಯ, ಎಚ್ಎಎಲ್ ಭಾಗದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಸ್ಲಂ ನಿವಾಸಿಗಳು, ಅವಕಾಶ ವಂಚಿತ ಹಾಗೂ ದುರ್ಬಲ ವರ್ಗದ ಕುಟುಂಬದ ಮಕ್ಕಳ ಪಠ್ಯ ಸೇರಿದಂತೆ ಇನ್ನಿತರ ಪುಸ್ತಕಗಳು, ಪೆನ್, ಪೆನ್ಸಿಲ್ ಮತ್ತಿತರ ಕಲಿಕಾ ಸಾಮಗ್ರಿಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ ಎಂದು ಅವರು ವಿವರಿಸಿದರು.
ಬಡ, ದುರ್ಬಲ ವರ್ಗದ ಮಕ್ಕಳಿಗೆ ತೊಂದರೆ
ಇದರಿಂದ ಬಡ ದುರ್ಬಲ ವರ್ಗದವರ ಮಕ್ಕಳ ಶಿಕ್ಷಣ ಕಲಿಕೆಗೆ ತೀವ್ರ ತೊಂದರೆ ಉಂಟು ಮಾಡಿದೆ. ಹೀಗಾಗಿ ಇವರ ನೆರವಿಗೆ ಧಾವಿಸಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘವು(ಎಐಎಸ್ಎ) , ಸ್ಥಳೀಯ ಎಸ್ಡಿಎಂಸಿ ಹಾಗೂ ಶಾಲಾ ಸಿಬ್ಬಂದಿಯ ಜೊತೆ ಸೇರಿ ಮಕ್ಕಳ ಶಿಕ್ಷಣವನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸುತ್ತಿವೆ.
ಇದರ ಜತೆಗೆ ಶಿಕ್ಷಣ ಇಲಾಖೆ ಅತ್ಯಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳವ ಮೂಲಕ ಬೆಂಗಳೂರಿನ ಮಹಾದೇವಪುರ, ಸರ್ಜಾಪುರ, ಪೀಣ್ಯ, ಎಚ್ಎಎಲ್ ಭಾಗ ಸೇರಿದಂತೆ ರಾಜ್ಯದ ಇನ್ನಿತರೆ ನಗರ, ಗ್ರಾಮೀಣ ಪ್ರದೇಶಗಳ ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ಕಟ್ಟಿಕೊಡಬೇಕಿದೆ. ಕೂಡಲೇ ಇಲಾಖೆ ಅತೀವ ತೊಂದರೆಗೆ ಒಳಗಾದ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಅವರು ತಿಳಿಸಿದ್ದಾರೆ. ಈ ಸಂಬಂದ ಕೇವಲ ಬೇಡಿಕೆಗಳನ್ನು ಅವರು ಸರ್ಕಾರದ ಮುಂದೆ ಇಟ್ಟಿದ್ದಾರೆ. ಅವು ಹೀಗಿವೆ.
ಮಕ್ಕಳ ಕಲಿಕೆಗಾಗಿ ಅಗತ್ಯ ಕ್ರಮವಹಿಸಿ
1. ಸ್ಥಳಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಂಚಾಯತಿ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ಸಹಯೋಗದಲ್ಲಿ ಮಳೆಯಿಂದ ಶಾಲೆಗಳ ಭೌತಿಕ ಹಾಗು ಕಲಿಕಾ ಸಾಮಗ್ರಿಗಳ ನಷ್ಟವನ್ನು ಅಂದಾಜಿಸಬೇಕು.
2. ಶಿಕ್ಷಣ ಸಚಿವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಮಳೆಯಿಂದ ತೊಂದರೆಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ಅಲ್ಲಿನ ಮಕ್ಕಳಿಗೆ ಹಾಗೂ ಪಾಲಕರಿಗೆ ಸಾಂತ್ವನ ಹೇಳುವ ಜತೆಗೆ ವಿದ್ಯಾರ್ಥಿ ಶಿಕ್ಷಕರ ಕಲ್ಯಾಣ ನಿಧಿಯಿಂದ ತುರ್ತು ಪರಿಹಾರಕ್ಕೆ ಕ್ರಮವಹಿಸಬೇಕು.
3. ಮಳೆಯಿಂದ ತೀವ್ರ ಹಾನಿಗೆ ಒಳಗಾಗಿರುವ ಶಾಲೆಗಳನ್ನು ತಕ್ಷಣ ದುರಸ್ಥಿಗೊಳಿಸಿ ಕಲಿಕೆಗೆ ಅಣಿಗೊಳಿಸಬೇಕು. ಅಗತ್ಯ ಅನುದಾನಗಳನ್ನು ತುರ್ತಾಗಿ ಶಾಲಾ ಹಂತದ ಎಸ್ ಡಿಎಂಸಿಗಳಿಗೆ ಬಿಡುಗಡೆಗೊಳಿಸಬೇಕು.
4. ಕಲಿಕಾ ಸಾಮಗ್ರಿಗಳಾದ ಪಠ್ಯಪುಸ್ತಕ, ಕಾರ್ಯ ಪುಸ್ತಕ, ಪೂರಕ ಸಂಪನ್ಮೂಲ ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು.
5. ತೀವ್ರ ಮಳೆ, ಪ್ರವಾಹದಂತಹ ಸಂದರ್ಭದಲ್ಲಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಬಹುದಾದ ಹೆಣ್ಣು ಮಕ್ಕಳು ಮತ್ತು ಅಂಗವಿಕಲ ಮಕ್ಕಳ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು ಎಂದು ನಿರಂಜನಾರಾಧ್ಯ.ವಿ.ಪಿ. ಅವರು ಮನವಿ ಮಾಡಿಕೊಂಡಿದ್ದಾರೆ.