ಪ್ರಯಾಣಿಕರ ಗಮನಕ್ಕೆ; ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ರೈಲು
ಬೆಂಗಳೂರು, ಮೇ 26; ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ರೈಲು ಸಂಚಾರ ಕಲ್ಪಿಸಬೇಕೆಂಬ ಇಲಾಖೆಯ ಯೋಜನೆ ಸರಿಯಾಗಿ ಕೈಗೂಡಲೇ ಇಲ್ಲ. ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರೂ ಪ್ರಯಾಣಿಕರ ಕೊರತೆ ಕಾರಣ ರೈಲು ಸಂಚಾರ ಸ್ಥಗಿತಗೊಂಡಿತು.
ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಕಲ್ಪಿಸುವ ಇಲಾಖೆಯ ಮಹತ್ವದ ಉದ್ದೇಶಕ್ಕೆ ವಿಮಾನ ನಿಲ್ದಾಣವೂ ಕೈ ಜೋಡಿಸಿತು. ಇದಕ್ಕಾಗಿ ಮೂರು ಕೋಟಿ ರೂ. ವೆಚ್ಚದಲ್ಲಿ ಏರ್ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್ ಸಹ ನವೀಕರಣಗೊಂಡಿತು. ಆದರೆ ಪ್ರಯಾಣಿಕರ ಕೊರತೆ ಕಾಡಿತು.
ಕೆಐಎ ಸಂಪರ್ಕಿಸುವ ಮೆಟ್ರೋ ಕಾಮಗಾರಿಗೆ ರಸ್ತೆ ಅಗಲೀಕರಣದ ತೊಂದರೆ
ಈಗ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದಿಂದ ಹೆಚ್ಚುವರಿ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಮತ್ತೆ ಮುಂದೆ ಬಂದಿದೆ. ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. ಜೂನ್ ಮೊದಲ ವಾರದಿಂದ ಹೆಚ್ಚುವರಿ ರೈಲುಗಳು ಸಂಚಾರ ನಡೆಸುವ ನಿರೀಕ್ಷೆ ಇದೆ.
ಬೆಂಗಳೂರು ಏರ್ಪೋರ್ಟ್ಗೆ ರೈಲು ಸಂಚಾರ ರದ್ದು!
ರೈಲಿನ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಗರದಿಂದ ಅತಿ ಕಡಿಮೆ ದರದಲ್ಲಿ ತಲುಪಬಹುದಾಗಿದೆ. ಪ್ರಯಾಣಿಕರು ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಸಾಗಲು ಬಸ್ ವ್ಯವಸ್ಥೆಯನ್ನು ಸಹ ವಿಮಾನ ನಿಲ್ದಾಣವೇ ಮಾಡಿದೆ. ಆದರೂ ಸಹ ಈ ಯೋಜನೆ ಪ್ರಯಾಣಿಕರನ್ನು ಕೈ ಬೀಸಿ ಕರೆಯಲು ವಿಫಲವಾಗಿದೆ.
ವಿಶ್ವಮಾನವ ರೈಲು ರದ್ದು, ಪ್ರಯಾಣಿಕರ ಪರದಾಟ
ರೈಲ್ವೆ ಇಲಾಖೆ ಅಧಿಕಾರಿಗಳ ಭರವಸೆ
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ಕಳೆದ ವಾರ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ವಿವಿಧ ಕಾಮಗಾರಿಗಳ ಬಗ್ಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ರೈಲು ಸಂಚಾರ ಕಲ್ಪಿಸಬೇಕು ಎಂಬ ಪ್ರಯಾಣಿಕರ ಬೇಡಿಕೆ ಕುರಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಹೆಚ್ಚಿನ ರೈಲುಗಳನ್ನು ವಿಮಾನ ನಿಲ್ದಾಣದ ಮಾರ್ಗದಲ್ಲಿ ಓಡಿಸುವ ಭರವಸೆಯನ್ನು ನೀಡಿದ್ದಾರೆ.
ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆ ಸಭೆ
ಸಂಸದ ಪಿ. ಸಿ. ಮೋಹನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ರೈಲು ಸಂಚಾರ ಆರಂಭಿಸುವ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಜೂನ್ ತಿಂಗಳಿನಿಂದ ಹೆಚ್ಚುವರಿ ರೈಲುಗಳು ಓಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ರೈಲು ಸಂಚಾರಕ್ಕೆ ಪ್ರಯಾಣಿಕರ ಕೊರತೆ
ಬೆಂಗಳೂರು ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) 2021ರ ಜನವರಿ 4ರಂದು ನೈಋತ್ಯ ರೈಲ್ವೆ ರೈಲು ಸಂಚಾರ ಆರಂಭಿಸಿತ್ತು. ಬೆಂಗಳೂರು ನಗರದಿಂದ 10 ರೈಲುಗಳು ಸಂಚಾರ ನಡೆಸುತ್ತಿದ್ದವು. ಪ್ರಯಾಣಿಕರ ಪ್ರತಿಕ್ರಿಯೆ ಸಮಾಧಾನಕರವಾಗಿತ್ತು. ಆದರೆ ಕೋವಿಡ್ ಪರಿಸ್ಥಿತಿ ಬಳಿಕ ಪ್ರಯಾಣಿಕರ ಕೊರತೆ ಕಾಡಿದ ಕಾರಣ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಈಗ ಪುನಃ ಹೆಚ್ಚುವರಿ ರೈಲುಗಳನ್ನು ಓಡಿಸುವ ಮೂಲಕ ಪ್ರಯಾಣಿಕರನ್ನು ಸೆಳೆಯಲು ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ.
3 ಕೋಟಿ ರೂ. ನಿಲ್ದಾಣ ನಿರ್ಮಾಣ
ಬಿಐಎಎಲ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಏರ್ ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್ ನಿರ್ಮಾಣ ಮಾಡಿತು. ಕೇಂದ್ರ ರೈಲ್ವೆ ಸಚಿವರು ಸಹ ಇದು ಬೆಂಗಳೂರಿಗೆ ದೊಡ್ಡ ಕೊಡುಗೆ ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಪ್ರಯಾಣಿಕರು ರೈಲು ಮೂಲಕ ವಿಮಾನ ನಿಲ್ದಾಣ ತಲುಪಲು ಆಸಕ್ತಿ ತೋರಲಿಲ್ಲ. ಇದಕ್ಕೆ ರೈಲುಗಳ ವೇಳಾಪಟ್ಟಿಯೇ ಕಾರಣ ಎಂಬ ಆರೋಪವೂ ಇದೆ.
Recommended Video
ಅತಿ ಕಡಿಮೆ ದರದಲ್ಲಿ ಪ್ರಯಾಣ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದಿಂದ 10, 15 ರೂ.ಗಳಲ್ಲಿ ಸಂಚಾರ ನಡೆಸಬಹುದಾಗಿತ್ತು. ಏರ್ ಪೋರ್ಟ್ ಹಾಲ್ಟ್ ಸ್ಟೇಷನ್ನಿಂದ ವಿಮಾನ ನಿಲ್ದಾಣಕ್ಕೆ ಬಿಐಎಎಲ್ ಬಸ್ ವ್ಯವಸ್ಥೆ ಮಾಡಿತ್ತು. ಆದರೆ ರೈಲುಗಳಿಗೆ ಬೇಡಿಕೆ ಬರಲೇ ಇಲ್ಲ. ಅಂತಿಮವಾಗಿ ರೈಲು ಸಂಚಾರ ಸ್ಥಗಿತಗೊಂಡಿತು. ಈಗ ಹೊಸ ಉತ್ಸಾಹದಲ್ಲಿ ರೈಲ್ವೆ ಇಲಾಖೆ ವಿಮಾನ ನಿಲ್ದಾಣಕ್ಕೆ ರೈಲು ಓಡಿಸಲು ಯೋಜನೆ ರೂಪಿಸಿದೆ. ಈ ಹೊಸ ಪ್ರಯತ್ನಕ್ಕೆ ಪ್ರಯಾಣಿಕರು ಹೇಗೆ ಸ್ಪಂದಿಸಲಿದ್ದಾರೆ? ಎಂದು ಕಾದು ನೋಡಬೇಕಿದೆ.