ರೈಲಿನಲ್ಲಿ ಹೋಗಿ ನಂದಿ ಬೆಟ್ಟ, ಆದಿಯೋಗಿ ಪ್ರತಿಮೆ, ಕೆಂಪೇಗೌಡ ಪ್ರತಿಮೆ ನೋಡಿ; ರೈಲ್ವೆಯಿಂದ ಪ್ರವಾಸ ಪ್ಯಾಕೇಜ್
ಒಂದು ದಿನದಲ್ಲಿ ರೈಲಿನಲ್ಲಿ ಟ್ರಿಪ್ ಹೋಗಬೇಕು ಎಂಬ ಆಸೆಯಿದೆಯೇ..? ನಂದಿ ಬೆಟ್ಟದ ಮೇಲೆ ನಿಂತು ಸೂರ್ಯೋದಯ ನೋಡವ ಆಸೆಗೆ ರೆಕ್ಕೆ ಕಟ್ಟುತ್ತಿದೆ ರೈಲ್ವೇ....ಏನೆಂದು ಮುಂದೆ ಓದಿ.
ಬೆಂಗಳೂರು, ಜನವರಿ, 31: ಸಿಲಿಕಾನ್ ಸಿಟಿಯಿಂದ ಹತ್ತಿರದ ಸ್ಥಳಗಳಿಗೆ ಒಂದು ದಿನದ ಪ್ರವಾಸ ಹೋಗಬೇಕು ಎಂಬ ಕನಸಿಗೆ ರೆಕ್ಕೆ ಕಟ್ಟುತ್ತಿದೆ ನೈರುತ್ಯ ರೈಲ್ವೆ. ರಾಜಧಾನಿ ಸಮೀಪದ ಪಾರಂಪರಿಕ ತಾಣಗಳಿಗೆ ಒಂದು ದಿನದ ಪ್ರವಾಸ ಪ್ಯಾಕೇಜ್ ನೀಡಲು ಚಿಂತನೆ ನಡೆಸುತ್ತಿದೆ.
108 ವರ್ಷಗಳಷ್ಟು ಹಳೆಯದಾದ ಬೆಂಗಳೂರು-ದೇವನಹಳ್ಳಿ-ಚಿಕ್ಕಬಳ್ಳಾಪುರ ಪಾರಂಪರಿಕ ರೈಲು ಮಾರ್ಗದಲ್ಲಿ ಮೊದಲ ಬಾರಿಗೆ ನೈಋತ್ಯ ರೈಲ್ವೆ (ಎಸ್ಡಬ್ಲ್ಯುಆರ್) ಒಂದು ದಿನದ ಪ್ರವಾಸ ಪ್ಯಾಕೇಜ್ ಪರಿಚಯಿಸಲು ಯೋಜನೆ ನಡೆಸಿದೆ.
ಬೆಂಗಳೂರಿಂದ ವೀಕೆಂಡ್ಗೆ ಒಂದು ದಿನದ ಟ್ರಿಪ್ ಹೋಗಬೇಕೆ..? ಸಮೀಪದ ಐದು ಸ್ಥಳಗಳ ಪಟ್ಟಿ ಇಲ್ಲಿದೆ
ಈ ಉದ್ದೇಶಕ್ಕಾಗಿ ರೈಲನ್ನು ಮೀಸಲಿಡಲು ಯೋಜಿಸುತ್ತಿದ್ದೇವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅದರ ಯೋಜನೆಯ ಭಾಗವಾಗಿ, ಈ ರೈಲು ಮಾರ್ಗದ ಉದ್ದಕ್ಕೂ ಶಿಥಿಲಗೊಂಡ ಪಾರಂಪರಿಕ ನಿಲ್ದಾಣಗಳನ್ನು ಪುನಃಸ್ಥಾಪಿಸಲಾಗುತ್ತಿದೆ.
ನಂದಿ ಬೆಟ್ಟದಲ್ಲಿ ಸೂರ್ಯೋದಯ ಕಣ್ತುಂಬಿಕೊಳ್ಳಲು ರೈಲ್ವೆ ಸಹಾಯ
ಈ ಒಂದು ದಿನದ ಪ್ರವಾಸ ಪ್ಯಾಕೇಜ್ನಲ್ಲಿ ಪ್ರವಾಸಿಗರು ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬಹುದು. ಪ್ರಸ್ತುತ, ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ನೋಡಲು ಬೆಂಗಳೂರಿನಿಂದ ನಂದಿ ನಿಲ್ದಾಣಕ್ಕೆ ಯಾವುದೇ ಬೆಳಗಿನ ರೈಲುಗಳಿಲ್ಲ.
ಈ ಹಿನ್ನೆಲೆ ನೈರಯತ್ಯ ರೈಲ್ವೆ ಈ ಪ್ರವಾಸ ಪ್ಯಾಕೇಜ್ ಅನ್ನು ತಂದರೆ ಪ್ರವಾಸಿಗರು ಕುಟುಂಬ ಸಮೇತರಾಗಿ ಪ್ರಕೃತಿ ಮಡಿಲಿನಲ್ಲಿ ಬೆಳಗಿನ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬಹುದು. ಈಗಾಗಲೇ ನಂದಿ ನಿಲುಗಡೆ ನಿಲ್ದಾಣವನ್ನು ಪುನಃಸ್ಥಾಪನೆಗಾಗಿ ಯೋಜನೆ ಮಾಡಲಾಗುತ್ತಿದೆ.
ನಂದಿ ಬೆಟ್ಟದ ತಪ್ಪಲಿನಲ್ಲಿರುವ ನಂದಿ ನಿಲ್ದಾಣದ ಪುನಶ್ಚೇತನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದು ಸಿದ್ಧವಾದ ನಂತರ, ಅಲ್ಲಿ ರೈಲು ವಸ್ತುಸಂಗ್ರಹಾಲಯವನ್ನು ಸ್ಥಾಪಿಸುತ್ತೇವೆ. ವಸ್ತುಸಂಗ್ರಹಾಲಯದಲ್ಲಿ ಹಳೆಯ ಸಿಗ್ನಲಿಂಗ್ ವ್ಯವಸ್ಥೆ, ಪೀಠೋಪಕರಣಗಳು ಮತ್ತು ಇತರ ರೈಲ್ವೆ ಪಾರಂಪರಿಕ ವಸ್ತುಗಳು ಇರುತ್ತವೆ. ಅವುಗಳನ್ನು ಪ್ರದರ್ಶಿಸಲು ಪಾರಂಪರಿಕ ವಸ್ತುಗಳನ್ನು ಕೊಡುಗೆ ನೀಡುವಂತೆ ನಾವು ರೈಲು ಅಭಿಮಾನಿಗಳು ಮತ್ತು ನಿವೃತ್ತ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಪ್ರವಾಸದಲ್ಲಿ ಆದಿಯೋಗಿ ಪ್ರತಿಮೆ, ದೇವನಹಳ್ಳಿ ಕೋಟೆಗೆ ಭೇಟಿ ನೀಡಿ
ಈ ಒಂದು ದಿನದ ಪ್ರವಾಸ ಪ್ಯಾಕೇಜ್ನಲ್ಲಿ ದೇವನಹಳ್ಳಿ ಕೋಟೆಗೆ ಭೇಟಿ ನೀಡಬಹುದು. ಜೊತೆಗೆ ಇತ್ತಿಚೆಗೆ ಈಶಾ ಫೌಂಡೇಷನ್ ಪ್ರಾರಂಭಿಸಿರುವ ಚಿಕ್ಕಬಳ್ಳಾಪುರದ 112 ಅಡಿ ಆದಿಯೋಗಿ ಪ್ರತಿಮೆ, ಥೀಮ್ ಆಧಾರಿತ ಹೆರಿಟೇಜ್ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣದಲ್ಲಿ 108 ಅಡಿ ಕೆಂಪೇಗೌಡ ಪ್ರತಿಮೆಯ ಸ್ಥಳಗಳಿಗೆ ಭೇಟಿ ನೀಡಲು ರೈಲುಗಳನ್ನು ನಿಗದಿಪಡಿಸಲು ರೈಲ್ವೆ ಯೋಜಿಸುತ್ತಿದೆ.
ನೈರುತ್ಯ ರೈಲ್ವೇಯ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ. ನೈರುತ್ಯ ರೈಲ್ವೇ ಜೊತೆಗೆ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಈಗಾಗಲೇ ಈ ಮಾರ್ಗದಲ್ಲಿ ದೊಡ್ಡಜಾಲ, ದೇವನಹಳ್ಳಿ ಮತ್ತು ಆವತಿಹಳ್ಳಿ ಎಂಬ ಮೂರು ಪಾರಂಪರಿಕ ಕೇಂದ್ರಗಳನ್ನು ಪುನಃಸ್ಥಾಪಿಸಿದೆ. ನಾವು ಶೀಘ್ರದಲ್ಲೇ ನಂದಿ ನಿಲುಗಡೆ ನಿಲ್ದಾಣವನ್ನು ಪುನಃಸ್ಥಾಪನೆ ಮಡಲು ಕೆಲಸ ಮಾಡುತ್ತೇವೆ"ಎಂದು ಹೇಳಿದ್ದಾರೆ.
ಪ್ರವಾಸದಲ್ಲಿ ನೇಕಾರರ ರೇಷ್ಮೆ ಉತ್ಪನ್ನಕ್ಕೆ ಉತ್ತೇಜನ
"ನಾವು ಈಗ ಬೆಂಗಳೂರು-ದೇವನಹಳ್ಳಿ-ಚಿಕ್ಕಬಳ್ಳಾಪುರ ಪಾರಂಪರಿಕ ಮಾರ್ಗದಲ್ಲಿ ಪ್ರವಾಸಿಗರಿಗೆ ಗೋಲ್ಡನ್ ಚಾರಿಯಟ್ (ಕರ್ನಾಟಕ) ಮತ್ತು ಪ್ಯಾಲೇಸ್ ಆನ್ ವೀಲ್ಸ್ (ರಾಜಸ್ಥಾನ) ಮಾದರಿಯಲ್ಲಿ ಒಂದು ದಿನದ ಪ್ರವಾಸ ಪ್ಯಾಕೇಜ್ ಅನ್ನು ಪ್ರಾರಂಭಿಸಲು ಯೋಚಿಸುತ್ತಿದ್ದೇವೆ. ಪ್ರವಾಸಿಗರಿಗಾಗಿ ರೈಲ್ವೆ ನಿಲ್ದಾಣಗಳಿಂದ ಹತ್ತಿರದ ಪ್ರವಾಸಿ ತಾಣಗಳಿಗೆ ಬಸ್ಗಳನ್ನು ಒದಗಿಸಲು ಪ್ರವಾಸೋದ್ಯಮ ಇಲಾಖೆ ಮತ್ತು ಇತರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ" ಎಂದು ಕುಸುಮಾ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.
ನೈರಯತ್ಯ ರೈಲ್ವೇ ಥೀಮ್ ಆಧಾರಿತ ಹೆರಿಟೇಜ್ ಸ್ಟೇಷನ್ಗಳನ್ನು ಯೋಜಿಸುತ್ತಿದೆ. ಆವತಿಹಳ್ಳಿ ನಿಲ್ದಾಣದಲ್ಲಿ ರೇಷ್ಮೆ ವಸ್ತುಸಂಗ್ರಹಾಲಯವನ್ನು ಮಾಡಲು ಚಿಂತಿಸುತ್ತದೆ. "ಆವತಿಹಳ್ಳಿ ಮತ್ತು ಸುತ್ತಮುತ್ತ ಸಾಂಪ್ರದಾಯಿಕ ನೇಕಾರರಿದ್ದಾರೆ. ನಾವು ಆ ನೇಕಾರರನ್ನು ಮತ್ತು ಅವರ ರೇಷ್ಮೆ ಉತ್ಪನ್ನಗಳನ್ನು ಉತ್ತೇಜಿಸಲು ಬಯಸುತ್ತೇವೆ. ಪ್ರವಾಸಿಗರು ಅವರ ಆಚಾರ-ವಿಚಾರಗಳ ಬಗ್ಗೆ ಮಾಹಿತಿ ಪಡೆಯುವುದರ ಜೊತೆಗೆ ಅವರಿಂದ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ" ಎಂದು ತಿಳಿಸಿದ್ದಾರೆ.
ದೊಡ್ಡಜಾಲ ನಿಲ್ದಾಣದಲ್ಲಿ ರೈಲ್ವೆ ಕಲಾ ಗ್ಯಾಲರಿ
"ದೇವನಹಳ್ಳಿ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಹಾಗೂ ಇತಿಹಾಸ ವ್ಯಾಖ್ಯಾನ ಕೇಂದ್ರವನ್ನು ಮಾಡುತ್ತೇವೆ. ಹತ್ತಿರದಲ್ಲಿ ಅನೇಕ ಸರ್ಕಾರಿ ಶಾಲೆಗಳಿರುವುದರಿಂದ ವಿದ್ಯಾರ್ಥಿಗಳಿಗೆ ಗ್ರಂಥಾಲಯವನ್ನು ಸ್ಥಾಪಿಸಲು ಸಹಾಯ ಮಾಡಲು ನಾವು ಶೀಘ್ರದಲ್ಲೇ ರಾಜ್ಯ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸುತ್ತೇವೆ. ವಿಶಾಲವಾದ ಇತಿಹಾಸ ಹೊಂದಿರುವ ಪ್ರದೇಶವಾಗಿರುವ ಕಾರಣ ರೈಲ್ವೆ ಕೋಚ್ ಅನ್ನು ಐತಿಹಾಸಿಕ ವ್ಯಾಖ್ಯಾನ ಕೇಂದ್ರವನ್ನಾಗಿ ಪರಿವರ್ತಿಸುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.
" ದೊಡ್ಡಜಾಲ ನಿಲ್ದಾಣದಲ್ಲಿ ರೈಲ್ವೆ ಕಲಾ ಗ್ಯಾಲರಿ ಮಾಡುವ ಯೋಜನೆಯಿದೆ. ನೈರುತ್ಯ ರೈಲ್ವೇ ಇತಿಹಾಸಕ್ಕೆ ಸಂಬಂಧಿಸಿದ ಛಾಯಾಚಿತ್ರಗಳು, ಸ್ಲೈಡ್ಗಳು, ಟಿಪ್ಪಣಿಗಳು, ರೇಖಾಚಿತ್ರಗಳು, ಕರಪತ್ರಗಳು, ದಾಖಲೆಗಳು, ವೃತ್ತಪತ್ರಿಕೆ ತುಣುಕುಗಳು ಮತ್ತು ಇತರ ಕಲಾಕೃತಿಗಳನ್ನು ಅಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರಸ್ತುತ, ಕೆಎಸ್ಆರ್ ಬೆಂಗಳೂರು ನಗರ ನಿಲ್ದಾಣದ 5 ಪ್ಲಾಟ್ಫಾರ್ಮ್ ನಂ.ನಲ್ಲಿ ಕಲಾ ಗ್ಯಾಲರಿ ಇದೆ" ಎಂದು ಮಾಹಿತಿ ನೀಡಿದ್ದಾರೆ.
ಕೆಎಸ್ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಬೆಳಿಗ್ಗೆ 4 ಗಂಟೆಗೆ ರೈಲು ಸೇವೆಗಳನ್ನು ಪ್ರಾರಂಭಿಸಲು ಯೋಜಿಸಲಾಗುತ್ತಿದೆ. ರೈಲುಗಳ ಸುಗಮ ಕಾರ್ಯಾಚರಣೆಗಾಗಿ ನಾವು ಯಲಹಂಕ-ಚಿಕ್ಕಬಳ್ಳಾಪುರ ರೈಲು ವಿಭಾಗವನ್ನು ದ್ವಿಗುಣಗೊಳಿಸಬೇಕಾಗಿದೆ. ಮುಂದಿನ ಹಂತದಲ್ಲಿ ಊರ್ಗಾಂ, ಕೋರಮಂಡಲ್, ಚಾಂಪಿಯನ್, ಮತ್ತು ಚಿಂತಾಮಣಿ ಸೇರಿದಂತೆ ಇತರ ಪಾರಂಪರಿಕ ಕೇಂದ್ರಗಳನ್ನು ಮರುಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
*ಮಾಹಿತಿ ಕೃಪೆ: ಟೈಮ್ಸ್ ಆಫ್ ಇಂಡಿಯಾ*