ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ ಕೊಟ್ಟ ಬಿಎಂಟಿಸಿ
ಬೆಂಗಳೂರು, ಡಿಸೆಂಬರ್ 04 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಗಳು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದಿಲ್ಲ ಎಂಬ ಚಿಂತೆ ದೂರವಾಗಲಿದೆ. ರೈಲ್ವೆ ನಿಲ್ದಾಣದೊಳಗೆ ಬಸ್ ಪ್ರವೇಶಿಸಲು ಒಪ್ಪಿಗೆ ಸಿಕ್ಕಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದೊಳಗೆ ಬಿಎಂಟಿಸಿ ಬಸ್ ಸಂಚಾರ ನಡೆಸಲು ನೈಋತ್ಯ ರೈಲ್ವೆ ಒಪ್ಪಿಗೆ ಕೊಟ್ಟಿದೆ. ಬಿಎಂಟಿಸಿ ಇನ್ನು ಮುಂದೆ ರೈಲ್ವೆ ನಿಲ್ದಾಣದೊಳಗೆ ಹೋಗಿ ಪ್ರಯಾಣಿಕರನ್ನು ಇಳಿಸಲಿದೆ. ನಿಲ್ದಾಣದೊಳಗೆ ಪ್ರಯಾಣಿಕರು ಬಸ್ ಹತ್ತಬಹುದಾಗಿದೆ.
ಫಾಸ್ಟ್ಯಾಗ್ ಕಡ್ಡಾಯ; ಕೆಎಸ್ಆರ್ಟಿಸಿ, ಬಿಎಂಟಿಸಿ ಕಥೆ ಏನು?
ಮೆಜೆಸ್ಟಿಕ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 1.7 ಕೋಟಿ ವೆಚ್ಚದಲ್ಲಿ 3ನೇ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿದೆ. ಜೂನ್ನಲ್ಲಿ ಇದು ಉದ್ಘಾಟನೆಗೊಂಡಿದೆ. ಈ ಪ್ರವೇಶದ್ವಾರದ ಮೂಲಕ ಬಸ್ ರೈಲು ನಿಲ್ದಾಣ ತಲುಪಲಿದೆ.
ಪ್ರತ್ಯೇಕ ಬಿಎಂಟಿಸಿ ಬಸ್ ಪಥ; ಸಾಮಾನ್ಯ ಸೂಚನೆಗಳು
ಎಷ್ಟು ಬಸ್ ಸಂಚಾರ ನಡೆಸಬೇಕು?, ಯಾವ ಸಮಯದಲ್ಲಿ ಸಂಚಾರ ನಡೆಸಬೇಕು?, ಯಾವ-ಯಾವ ಬಡಾವಣೆಯಿಂದ ಸಂಚರಿಸಬೇಕು? ಎಂಬುದನ್ನು ಬಿಎಂಟಿಸಿ ತೀರ್ಮಾನಿಸಲಿದೆ. ಶೀಘ್ರವೇ ರೈಲು ನಿಲ್ದಾಣಕ್ಕೆ ಬಸ್ ಸಂಚಾರ ಆರಂಭವಾಗಲಿದೆ.
ಪ್ರತ್ಯೇಕ ಬಸ್ ಪಥ; ಬಿಎಂಟಿಸಿ ಬಸ್ಗೆ ಚೆಂದದ ಹೆಸರು
ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ ಫ್ಲಾಟ್ ಫಾರಂ ನಂಬರ್ 1ಕ್ಕೆ ನೇರ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿ ಟಿಕೆಟ್ ಕೌಂಟರ್ ಸಹ ತೆರೆಯಲಾಗಿದೆ. ಬಸ್ ಇಲ್ಲಿಗೆ ಆಗಮಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಸಂಚಾರ ದಟ್ಟಣೆ ಉಂಟಾಗುತ್ತದೆ, ಸ್ಥಳಾವಕಾಶದ ಕೊರತೆಯಿಂದ ರೈಲು ನಿಲ್ದಾಣದೊಳಗೆ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶವಿರಲಿಲ್ಲ. ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದಿಂದ ಸುರಂಗ ಮಾರ್ಗದ ಮೂಲಕ ಜನರು ರೈಲು ನಿಲ್ದಾಣ ತಲುಪಬೇಕಿತ್ತು.
ಬಿಎಂಟಿಸಿ ಬಸ್ ರೈಲ್ವೆ ನಿಲ್ದಾಣಕ್ಕೆ ಬರುವುದಿಲ್ಲ ಎಂಬ ಕಾರಣಕ್ಕಾಗಿಯೇ ಆಟೋ ಡ್ರೈವರ್ಗಳು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದರು. ತಡರಾತ್ರಿ, ಮುಂಜಾನೆ ಬರುವ ಪ್ರಯಾಣಿಕರು ಹೆಚ್ಚು ಹಣ ಪಾವತಿ ಮಾಡಿ ಸಂಚಾರ ನಡೆಸಬೇಕಿತ್ತು.