ಐಶ್ವರ್ಯಾ-ಅಮರ್ತ್ಯ ಹೆಗ್ಡೆ ಆರತಕ್ಷತೆ: ರಾಹುಲ್, ಪ್ರಿಯಾಂಕಾ ಭಾಗಿ
ಬೆಂಗಳೂರು, ಫೆಬ್ರವರಿ 17: ಭಾನುವಾರ ಸಾಂಸಾರಿಕ ಬದುಕಿಗೆ ಕಾಲಿರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಮತ್ತು ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿಜಿ ಸಿದ್ಧಾರ್ಥ ಹೆಗ್ಡೆ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರ ವಿವಾಹ ಆರತಕ್ಷತೆ ದೇವನಹಳ್ಳಿಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ಶೆಯರ್ ರೆಸಾರ್ಟ್ನಲ್ಲಿ ಇಂದು (ಫೆ. 17) ನಡೆಯಲಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹಾಗೂ ಇತರರು ಬುಧವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಗರದ ಹೊರವಲಯದ ದೇವನಹಳ್ಳಿಯಲ್ಲಿರುವ ರಾಜ್ ಹೋಟೆಲ್ನಲ್ಲಿ ಅವರು ತಂಗಲಿದ್ದಾರೆ. ಆರತಕ್ಷತೆ ಸಮಾರಂಭ ಮುಗಿಸಿ ಗುರುವಾರ ಬೆಳಿಗ್ಗೆ ಅಲ್ಲಿಂದಲೇ ದೆಹಲಿಗೆ ಮರಳಲಿದ್ದಾರೆ.
ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅಲ್ಲದೆ, ಗುಲಾಂ ನಬಿ ಆಜಾದ್, ಕೆಸಿ ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೇರಳ ಕಾಂಗ್ರೆಸ್ ನಾಯಕ ಉಮನ್ ಚಾಂಡಿ, ರಮೇಶ್ ಚೆನ್ನಿತ್ತಲ ಮುಂತಾದ ನಾಯಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಹ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಆರತಕ್ಷತೆ ಸಮಾರಂಭಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಲಾಗಿದೆ.