ದೇಶಕ್ಕಾಗಿ ಸುತನೊಬ್ಬನನ್ನು ಸಂತ ಅಥವಾ ಸೈನಿಕನನ್ನಾಗಿಸಿ
ಬೆಂಗಳೂರು, ಆಗಸ್ಟ್ 15 : ಸಂತರು ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ನಿಶ್ಶಬ್ದದ ಆಂದೋಲನ ನಡೆಸಿ, ದೇಶ ಪ್ರೇಮವನ್ನು ತೋರುತ್ತಾರೆ. ಸೈನಿಕರು ಹೋರಾಡಿ ದೇಶ ಪ್ರೇಮ ಮೆರೆಯುತ್ತಾರೆ.
ಹಾಗಾಗಿ, ದೇಶಕ್ಕಾಗಿ ಪ್ರತೀ ಮನೆಯಲ್ಲಿ ಜನಿಸಿದ ಒಬ್ಬನನ್ನು ಸಂತ ಅಥವಾ ಸೈನಿಕನನ್ನಾಗಿಸಿ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಕರೆ ನೀಡಿದ್ದಾರೆ. (ಸೇವಕತ್ವದ ಆಳಕ್ಕಿಳಿಯಿರಿ)
ನಗರದಲ್ಲಿ ಗೋಚಾತುರ್ಮಾಸ್ಯದ ಅಂಗವಾಗಿ ಸೋಮವಾರ (ಆ 15) ಸ್ವಾತಂತ್ರ್ಯ ಸಂದೇಶ ನೀಡಿ ಮಾತನಾಡುತ್ತಿದ್ದ ಶ್ರೀಗಳು, ದೇವರ ಅವತಾರಗಳೇ ಇಲ್ಲದಾಗ ಗೋವುಗಳ ರೂಪದಲ್ಲಿ ದೇವರ ಸಂಚಾರ ಸನ್ನಿಹಿತವಾಗಿದೆ ಎಂದಿದ್ದಾರೆ.
ದೇವರ ಅವತಾರಗಳಿಗೆ ಪರ್ಯಾಯವಾಗಿ ಗೋವು ಎಂದೇ ನಂಬಲಾಗಿದೆ. ಗೋವು ನಿತ್ಯ ಸತ್ಯಾವತಾರ. ಪರ್ಷಿಯನ್ನರು, ಗ್ರೀಕರು, ಅರಬರು, ಫ್ರೆಂಚರು, ಪೋರ್ಚುಗೀಸರು ಈ ಮಣ್ಣಿನವರಲ್ಲ. ವೇದಗಳಲ್ಲಿ ಗೋವುಗಳಲ್ಲಿ ನಂಬಿಕೆಯಿದ್ದವರಲ್ಲ.
ಪರಕೀಯರ ಪಾದಾಘಾತದಿಂದ ಗೋ ಸಂಸ್ಕೃತಿಗೆ ಕಂಟಕ ಆರಂಭವಾಯಿತು. ಬ್ರಿಟಿಷರಿಗೆ ಭಾರತವನ್ನು ಪ್ರವೇಶಿಸಿ, ಚಿರಕಾಲ ಸಮಗ್ರ ಭಾರತವನ್ನು ಆಳಬೇಕೆಂಬ ಮನಸ್ಸಿತ್ತು. ಅವರಿಗೆ ಸಂಸ್ಕೃತಿ ಭಾರತದ ಶಕ್ತಿ ಎಂದು ತಿಳಿದಿತ್ತು ಎಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ಸಂಸ್ಕೃತಿಯ ತಳಹದಿ ಗೋವು, ಗೋವುಗಳ ನಾಶದಿಂದ ಸಂಸ್ಕೃತಿ ನಾಶವಾಗುತ್ತದೆ ಎಂಬ ಅರಿವಿದ್ದ ಅವರು ಅದಕ್ಕೆ ಮರ್ಮಾಘಾತ ನೀಡಲು ಆರಂಭಿಸಿದರು. (ಮನುಷ್ಯ ಕೃತಘ್ನನಾಗಬಾರದು)
ಅದಕ್ಕಾಗಿ 18ನೇ ಶತಮಾನದಲ್ಲಿ ಮಾಂಸಕ್ಕಾಗಿ ಗೋವುಗಳನ್ನು ಕತ್ತರಿಸಲು ನಿರ್ಣಯ ಕೈಗೊಂಡ ಬ್ರಿಟಿಷರು ದೇಶದಲ್ಲಿ 350 ಕಸಾಯಿಖಾನೆಗಳನ್ನು ಆರಂಭಿಸಿದರು ಎಂದು ಶ್ರೀಗಳು ವಿಷಾದ ವ್ಯಕ್ತ ಪಡಿಸಿದರು.
ಅಂತಹ ಕಸಾಯಿಖಾನೆಗಳು ಇಂದು ದೇಶದೆಲ್ಲೆಡೆ ಮರಿಯಿಟ್ಟು ಅಸಂಖ್ಯವಾಗಿವೆ. 1910ರಿಂದ 1940ರ ತನಕ 10 ಕೋಟಿ ಗೋವುಗಳನ್ನು ಕೊಲ್ಲಲಾಯಿತು ಎಂದು ರಾಘವೇಶ್ವರ ಶ್ರೀಗಳು ಈ ಸಂದರ್ಭದಲ್ಲಿ ಆಧಾರ ಸಹಿತ ವಿವರಿಸಿದರು.
ಆಗ ಭಾರತೀಯರು ಎಚ್ಚರವಾದರು. ಗೋವುಗಳ ಹತ್ಯೆಯನ್ನು ಭಾರತೀಯರು ವಿರೋಧಿಸಿದರು. ಭಾರತದ ಸ್ವರೂಪ ಸಿದ್ಧವಾಗಲು ಗೋವು ಕಾರಣವಾಯಿತು. ಈ ನಡುವೆ ಭಾರತೀಯ ಸೈನಿಕರನ್ನು ಮತಾಂತರ ಮಾಡುವ ಪ್ರಯತ್ನ ನಡೆಯಿತು.
ಗೋವು ಮತ್ತು ಧರ್ಮ ಬ್ರಿಟಿಷರ ಟಾರ್ಗೆಟ್ ಎಂದು ತಿಳಿದಾಗ, ಸಂತರು ಸೈನಿಕರನ್ನು ಎಚ್ಚರಿಸಿದರು. ಗಡಿಗಳಿಂದ ದೇಶ ನಿಶ್ಚಯವಾಗುವುದಲ್ಲ, ಧರ್ಮ ಮತ್ತು ಸಂಸ್ಕೃತಿಯಿಂದ ಎಂದು ಅರಿವು ಮೂಡಿಸಿದರು ಎಂದು ಶ್ರೀಗಳು ಹೇಳಿದರು.
ಈ ನಡುವೆ ಬ್ರಿಟಿಷರು ಗೋವಿನ ಕೊಬ್ಬಿನಿಂದ ಸಿಡಿಮದ್ದು ಕಂಡುಹಿಡಿದು ಭಾರತೀಯರು ಆ ಬಂದೂಕನ್ನು ಬಳಸುವಂತೆ ಮಾಡಿದರು. ಆಗ ಸಿಡಿದೆದ್ದ ಮಂಗಲ್ ಪಾಂಡೆ ಬ್ರಿಟಿಷರ ವಿರುದ್ಧ ಮೊದಲ ರಣಕಹಳೆಯನ್ನೂದಿದ.
ಸ್ವಾತಂತ್ರ್ಯದ ಕೆಚ್ಚನ್ನು ಭಾರತೀಯರ ನಾಡಿ ನಾಡಿಯಲ್ಲಿ ಎಬ್ಬಿಸಿದ ಆತನ ಬಲಿದಾನ ಶ್ರೇಷ್ಠ. ಅದೇ ರೀತಿ ಆತನ ಭಾವವೂ ಶ್ರೇಷ್ಠ ಎಂದು ಶ್ರೀಗಳು ವಿಶ್ಲೇಷಿಸಿದರು. (ನಾವೆಲ್ಲಾ ಆಂಜನೇಯರಾಗಬೇಕಿದೆ)
1917ರಲ್ಲಿ ಗಾಂಧೀಜಿಯವರ ಅಂಕಿ ಅಂಶಗಳ ಪ್ರಕಾರ ವರ್ಷಕ್ಕೆ 1.10 ಲಕ್ಷ ಗೋವುಗಳನ್ನು ಕೊಲ್ಲಲಾಗುತ್ತಿತ್ತು. ಗೋರಕ್ಷೆಯ ಹೇಳಿಕೆಗೆ ಬದ್ಧರಾಗಿದ್ದ ಅವರು ಅದನ್ನು ತಾನು ಪೂಜಿಸುತ್ತೇನೆ ಎಂದು 1927ರಲ್ಲಿ ಮತ್ತೆ ಗುಡುಗಿದ್ದರು. ಅವರ ಹತ್ಯೆಯ ಬಳಿಕ ಗೋರಕ್ಷೆಯ ಚಿಂತನೆಯ ಹತ್ಯೆಯೂ ಆಗಿದೆ ಎಂದು ಶ್ರೀಗಳು ವಿಷಾದಿಸಿದರು.
ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಇದಕ್ಕೂ ಮೊದಲು ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀ ಪ್ರಕಾಶನವು ಹೊರತಂದಿರುವ ವಿಚಾರ-ವಿಹಾರ ಎಂಬ ಪುಸ್ತಕವನ್ನು ಪೂಜ್ಯ ಶ್ರೀಗಳು ಹಾಗೂ ಸಾಧನಾಪಂಚಕ ದೃಶ್ಯಮುದ್ರಿಕೆಯನ್ನು ವಾಗ್ಮಿ ನಿಕೇತ್ ರಾಜ್ ಮೌರ್ಯ ಮತ್ತು ಶ್ರೀಕೃಷ್ಣ ಉಪಾಧ್ಯಾಯ ಅವರು ಲೋಕಾರ್ಪಣೆಗೊಳಿಸಿದರು.
ಸರ್ವ ಸೇವೆ ನೆರವೇರಿಸಿದ ಸಾಮಾಜಿಕ ಜಾಲತಾಣಿಗರ ಬಳಗವು ಮತ್ತು ಗೋಕಥಾ ಪ್ರಾಯೋಜಕತ್ವವನ್ನು ವಹಿಸಿತ್ತು. ಶ್ರೀಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.