ರಾಯರ 349ನೇ ಆರಾಧನೆ: ಬೆಂಗಳೂರಿನಲ್ಲಿ ಶ್ರದ್ದಾ, ಭಕ್ತಿಯ ಸರಳ ಆಚರಣೆ
ಬೆಂಗಳೂರು, ಆ 5: ಕಲಿಯುಗದ ಕಾಮಧೇನು ಗುರು ರಾಘವೇಂದ್ರರ 349ನೇ ಆರಾಧನಾ ಮಹೋತ್ಸವ ಆಗಸ್ಟ್ 4ರಿಂದ ಆರಂಭವಾಗಿದೆ. ಮೂರು ದಿನಗಳ ಕಾಲ ನಡೆಯುವ ಆರಾಧನೆಯನ್ನು ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಎಂದು ಕರೆಯಲಾಗುತ್ತದೆ.
ಮೂಲ ವೃಂದಾವನವಿರುವ ಮಂತ್ರಾಲಯದಲ್ಲಿ ಮತ್ತು ರಾಜ್ಯದೆಲ್ಲಡೆ ಈ ಬಾರಿ ಕೊರೊನಾ ಕಾರಣದಿಂದಾಗಿ ಅತ್ಯಂತ ಸರಳವಾಗಿ ಆರಾಧನೆಯನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲೂ, ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಭಕ್ತರು ರಾಯರ ದರ್ಶನ ಮಾಡಿಕೊಂಡು ಹೋಗುತ್ತಿದ್ದಾರೆ.
ನಗರದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಈ ಬಾರಿ ಇರುವುದಿಲ್ಲ ಎಂದು ರಾಯರ ಮಠಗಳು ಈಗಾಗಲೇ ಸ್ಪಷ್ಟ ಪಡಿಸಿದ್ದವು. ಧ್ವಜಾರೋಹಣ, ಗೋಪೂಜೆ, ಧನ-ಧಾನ್ಯಪೂಜೆಯ ಮೂಲಕ, ಆರಾಧನೆ ಕಾರ್ಯಕ್ರಮದ ವಿಧಿವತ್ತಾಗಿ ಆರಂಭವಾಗಿತ್ತು.
ಹೊಸಕೆರೆಹಳ್ಳಿ, ಶ್ರೀನಗರ, ಎಜಿಎಸ್ ಲೇಔಟ್, ಕಲ್ಯಾಣಿ ರಾಯರ ಮಠ, ಬಸವನಗುಡಿಯ ನವ ಮಂತ್ರಾಲಯ ಮೃತ್ತಿಕಾ ವೃಂದಾವನ, ಕೆಂಗೇರಿ ಉಪನಗರ ರಾಯರ ಮಠ, ಜಯನಗರ ಐದನೇ ಬ್ಲಾಕ್ ನಲ್ಲಿರುವ ರಾಯರ ಮಠವೂ, ಎನ್.ಆರ್.ಕಾಲೋನಿ ಮಠ ಸೇರಿದಂತೆ ನಾನಾ ಕಡೆ ಸರಳವಾಗಿ ಆರಾಧನೆ ಆಚರಿಸಲಾಗುತ್ತಿದೆ.
ಮೂರು ದಿನಗಳ ಆರಾಧನಾ ಕಾರ್ಯಕ್ರಮದಲ್ಲಿ ಮಧ್ಯಾರಾಧನೆಗೆ ವಿಶೇಷ ಮಹತ್ವ ಇದೆ. ಏಕೆಂದರೆ, ಆ ದಿನದಂದೇ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದರು.
ಇದೇ ಮೊದಲ ಬಾರಿಗೆ, ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.