ಕಾಮಧೇನು ಕ್ಷೇತ್ರದಲ್ಲಿ ಮಾ.24ರಂದು ರಾಘವೇಂದ್ರ ಸ್ವಾಮಿ ಬೃಂದಾವನ ಪ್ರತಿಷ್ಠಾಪನೆ
ಬೆಂಗಳೂರು, ಮಾರ್ಚ್ 22 : ಮನ್ಮಥನಾಮ ಸಂವತ್ಸರ ಫಾಲ್ಗುಣ ಮಾಸದ ಕೃಷ್ಣಪಕ್ಷ ಪಾಡ್ಯದಂದು, ಮಾರ್ಚ್ 24ರ ಗುರುವಾರ ಬೆಳಿಗ್ಗೆ 11.33ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ, ಬೆಂಗಳೂರು ಉತ್ತರ ತಾಲೂಕಿನಲ್ಲಿರುವ 'ಕಾಮಧೇನು ಕ್ಷೇತ್ರ'ದಲ್ಲಿ ಸಾಲಿಗ್ರಾಮ ಶಿಲೆಯಲ್ಲಿಯೇ ನಿರ್ಮಾಣವಾಗಿರುವ ಭೂವರಾಹ ದೇವರು, ಮುಖ್ಯ ಪ್ರಾಣದೇವರು ಮತ್ತು ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಬೃಂದಾವನ ಪ್ರತಿಷ್ಠಾಪನೆ ಜರುಗಲಿದೆ.
ಗುರುರಾಯರ ಬೃಂದಾವನದ ಪ್ರತಿಷ್ಠಾಪನೆಯ ಅಂಗವಾಗಿ ನಡೆಯುವ ವಿವಿಧ ಪೂಜಾವಿಧಿಗಳಲ್ಲಿ ಶ್ರೇಷ್ಠವಾದ 'ಕಳಶಾಭಿಷೇಕ' ಜರುಗಲಿದ್ದು, 1008 ಕಳಶಾಭಿಷೇಕವನ್ನು ಮಾಡಲಾಗುತ್ತಿದೆ. ಪುಣ್ಯ ಪ್ರಾಪ್ತಿ ಮತ್ತು ಪಾಪ ಪರಿಹಾರಕ್ಕಾಗಿ ಭಕ್ತಾದಿಗಳು ಕಳಶ ಪೂಜೆಯನ್ನು ಮಾಡಬೇಕೆಂದು ಕಾಮಧೇನು ಕ್ಷೇತ್ರದ ವ್ಯವಸ್ಥಾಪಕ ಧರ್ಮದರ್ಶಿ ಎಸ್.ಎನ್. ಗುರುಶೇಷ್ ಅವರು ಕೇಳಿಕೊಂಡಿದ್ದಾರೆ. [ರಾಘವೇಂದ್ರ ಮಹಿಮೆ ಕುರಿತ ಸತ್ಯ ಕಥೆ]
ಸಾಲಿಗ್ರಾಮ ಶಿಲೆಯ ಬೃಂದಾವನ ಪ್ರತಿಷ್ಠಾಪನೆಗಾಗಿ ಈಗಾಗಲೆ 5 ಕೋಟಿ ರು. ವೆಚ್ಚದಲ್ಲಿ ಬೃಹತ್ ಮಂದಿರ ನಿರ್ಮಾಣವಾಗಿದೆ. ಶ್ರೀ ರಾಘವೇಂದ್ರಾಯ ನಮಃ ಲೇಖನ ಮಹಾಯಜ್ಞದ ಪುಸ್ತಕ ಬೃಂದಾವನವೂ ಇಲ್ಲಿ ನಿರ್ಮಾಣವಾಗಿರುವುದು ದೇಶದಲ್ಲಿಯೇ ಇದು ಪ್ರಥಮ. ಸಾವಿರಾರು ಭಕ್ತಾದಿಗಳು 'ಶ್ರೀ ರಾಘವೇಂದ್ರಾಯ ನಮಃ' ಎಂದು ಬರೆದು ಅರ್ಪಿಸಿರುವ ಪುಸ್ತಕಗಳಿಂದಲೇ ಬೃಂದಾವನ ನಿರ್ಮಾಣವಾಗಿದೆ.
ತುಪ್ಪದ ದೀಪದ ಅಪ್ಪನ ಕ್ಷೇತ್ರವೆಂದೇ ಖ್ಯಾತಿ ಗಳಿಸಿರುವ ಕಾಮಧೇನು ಕ್ಷೇತ್ರದಲ್ಲಿ ಬೃಂದಾವನ ಪ್ರತಿಷ್ಠಾಪನೆಯ ನಂತರ, ಏಪ್ರಿಲ್ 10ನೇ ತಾರೀಖು ಭಾನುವಾರದಿಂದ ಆಗಸ್ಟ್ 11 ಗುರುವಾರದ ವರೆಗೆ 108 ದಿನಗಳ ಕಾಲ ಪ್ರತಿದಿನವೂ ಯಜ್ಞ-ಯಾಗ, ಹೋಮ-ಹವನಗಳು ನಡೆಯಲಿವೆ. ಹೋಮ ನಡೆಯಲಿಚ್ಛಿಸುವ ಭಕ್ತರು ನಿಗದಿತ ಶುಲ್ಕ ನೀಡಿ ಇದರಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳನ್ನು ಕಾಮಧೇನು ಕ್ಷೇತ್ರದ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದು. [ನನ್ನ ಮಗನಿಗೆ ದರ್ಶನ ಕೊಟ್ಟರು ಶ್ರೀ ಗುರುರಾಯರು!]
ಕಾಮಧೇನು ಕ್ಷೇತ್ರದ ವಿಳಾಸ
ಕಾಮಧೇನು ಕ್ಷೇತ್ರ, ಶ್ರೀ ಗುರುರಾಘವೇಂದ್ರ ಸೇವಾಶ್ರಮ, ರಾಘವೇಂದ್ರ ಲೇಔಟ್, ವಡ್ಡರಹಳ್ಳಿ, ಕಡಬಗೆರೆ ಅಂಚೆ, ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು ನಗರ ಜಿಲ್ಲೆ - 562 130.
ಕಾಮಧೇನು ಕ್ಷೇತ್ರಕ್ಕೆ ಹೋಗುವುದು ಹೇಗೆ?
ಮಾಗಡಿ ರಸ್ತೆಯಲ್ಲಿ, ಸುಂಕದಕಟ್ಟೆಯ ಮೇಲಿಂದ ಸಾಗಿ, ಕಡಬಗೆರೆ ಕ್ರಾಸ್ ಬಳಿ ಬಲತಿರುವು ತೆಗೆದುಕೊಂಡು, ಸುಮಾರು 5 ಕಿ.ಮೀ. ಚಲಿಸಿದರೆ ಕಾಮಧೇನು ಕ್ಷೇತ್ರ ಸಿಗುತ್ತದೆ.
ಹಲವು ರೀತಿಯಲ್ಲಿ ಭಕ್ತರ ಕಾಣಿಕೆ
ಮಂದಿರ ನಿರ್ಮಾಣದಲ್ಲಿಯೂ ಭಕ್ತಾದಿಗಳು ಮನಃಪೂರ್ವಕವಾಗಿ ಕಾಣಿಕೆಗಳನ್ನು ನೀಡಿದ್ದಾರೆ. ಒಂದು ಇಟ್ಟಿಗೆಗೆ 30 ರು.ನಿಂದ ಹಿಡಿದು, ಸಿಮೆಂಟ್ ಚೀಲ, ಸೈಜು ಕಲ್ಲು, ಬೃಂದಾವನದ ಕಂಬ, ಕಿಟಕಿ, ದ್ವಾರಗಳ ನಿರ್ಮಾಣಕ್ಕಾಗಿ ಭಕ್ತರು ಕಾಯಾ ವಾಚಾ ಮನಸಾ ಕಾಣಿಕೆಗಳನ್ನು ನೀಡಿರುವುದು ವಿಶೇಷ.
ರಾಯರ ಪುಸ್ತಕ ಬೃಂದಾವನ
ಭಕ್ತಾದಿಗಳು ಬರೆದಿರುವ 'ಶ್ರೀ ರಾಘವೇಂದ್ರಾಯ ನಮಃ' ಪುಸ್ತಕಗಳಿಂದಲೇ ನಿರ್ಮಾಣವಾಗಿರುವ ಬೃಂದಾವನಕ್ಕೆ ಪ್ರತಿನಿತ್ಯವೂ ಪೂಜೆ ಜರುಗುತ್ತಿತ್ತು. ಈ ಪುಸ್ತಕಗಳನ್ನು ಮಂದಿರದಲ್ಲಿಯೂ ಬಳಸಲಾಗಿದೆ.
ಕ್ಷೇತ್ರದ ಧರ್ಮದರ್ಶಿ ಗುರುಶೇಷ
ಕ್ಷೇತ್ರದ ಅಭಿವೃದ್ಧಿ ಮತ್ತು ಮಂದಿರ ನಿರ್ಮಾಣದ ರೂವಾರಿ ಎಸ್.ಎನ್. ಗುರುಶೇಷ್ ಅವರು ಬೃಂದಾವನಕ್ಕೆ ಪೂಜೆ ಸಲ್ಲಿಸಿದ ನಂತರ ಪ್ರವಚನದಲ್ಲಿ ತೊಡಗಿರುವುದು.