ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವ ಆರಂಭ
ಬೆಂಗಳೂರು, ಆಗಸ್ಟ್ 27: ಇಂದಿನಿಂದ (ಸೋಮವಾರ) ಆರಂಭವಾದ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವದಲ್ಲಿ ಎಲ್ಲ ಜಾತಿಯ ಮಂದಿ ಭಾಗವಹಿಸಿದ್ದು ಕಂಡುಬಂತು. ಬೆಂಗಳೂರಿನಲ್ಲಿರುವ ಹಲವು ರಾಯರ ಮಠಗಳಲ್ಲಿ ವೃಂದಾವನಕ್ಕೆ ವಿಶೇಷ ಅಲಂಕಾರವೂ ಸೇರಿದ ಹಾಗೆ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು.
ಮೂರು ದಿನಗಳ ಕಾಲ ಆರಾಧನಾ ಮಹೋತ್ಸವ ನಡೆಯಲಿದ್ದು, ಹಲವೆಡೆ ನಾಲ್ಕನೇ ದಿನದಂದು ಸ್ವಯಂಸೇವಕರಾಗಿ ದುಡಿದವರಿಗೆ ಸನ್ಮಾನ ಮತ್ತು ವಿಶೇಷ ಭೋಜನ ವ್ಯವಸ್ಥೆ ಮಾಡಲಾಗುತ್ತದೆ. ಎನ್.ಆರ್.ಕಾಲೋನಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಕೂಡ ಸೋಮವಾರದಂದು ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ಆಗಸ್ಟ್ 25ರಿಂದ ಏಳು ದಿನ ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ
ಹೊಸಕೆರೆಹಳ್ಳಿ, ಶ್ರೀನಗರ, ಎಜಿಎಸ್ ಲೇಔಟ್, ಕಲ್ಯಾಣಿ ರಾಯರ ಮಠ, ಬಸವನಗುಡಿಯ ನವ ಮಂತ್ರಾಲಯ ಮೃತ್ತಿಕಾ ವೃಂದಾವನ, ಕೆಂಗೇರಿ ಉಪನಗರ ರಾಯರ ಮಠ, ಜಯನಗರ ಐದನೇ ಬ್ಲಾಕ್ ನಲ್ಲಿರುವ ರಾಯರ ಮಠವೂ ಸೇರಿದಂತೆ ನಾನಾ ಕಡೆ ಉಚಿತವಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆಯಂತೂ ಸಂಜೆ ನಾಲ್ಕರ ಹೊತ್ತಿಗೂ ಪ್ರಸಾದ ಸ್ವೀಕರಿಸಲು ಜನರು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಧ್ಯಾರಾಧನೆಗೆ ವಿಶೇಷ ಮಹತ್ವ
ಮೂರು ದಿನಗಳ ಆರಾಧನಾ ಕಾರ್ಯಕ್ರಮವನ್ನು ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಎಂದು ಕರೆಯಲಾಗುತ್ತದೆ. ಅದರಲ್ಲಿ ಮಧ್ಯಾರಾಧನೆಗೆ ವಿಶೇಷ ಮಹತ್ವ ಇದೆ. ಏಕೆಂದರೆ, ಆ ದಿನದಂದೇ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದರು.
ಮೂರು ದಿನಗಳ ಕಾಲ ಉಚಿತವಾಗಿ ಪ್ರಸಾದ ವ್ಯವಸ್ಥೆ
ರಾಘವೇಂದ್ರ ಸ್ವಾಮಿಗಳು ಮಾಧ್ವ ಮಠದ ಪರಂಪರೆಗೆ ಸೇರಿದವರಾದರೂ ಅವರಿಗೆ ಇತರ ಜಾತಿ, ಧರ್ಮದವರೂ ಕೂಡ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಈ ಆರಾಧನೆ ವೇಳೆ ಮೂರು ದಿನಗಳ ಕಾಲ ಉಚಿತವಾಗಿ ಪ್ರಸಾದ ವ್ಯವಸ್ಥೆ ಇರುವುದರಿಂದ ಅದಕ್ಕೆ ಬೇಕಾದ ಆಹಾರ ವಸ್ತುಗಳು ಹಾಗೂ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡುತ್ತಾರೆ.
ದೂರದ ಕ್ಯಾಲಿಫೋರ್ನಿಯಾದಲ್ಲೂ ಮೊಳಗಿದ ಗುರುರಾಯರ ಮಂತ್ರಘೋಷ
ಸ್ವಯಂ ಸೇವಕರಾಗಿ ದುಡಿಯುತ್ತಾರೆ
ರಾಘವೇಂದ್ರ ಸ್ವಾಮಿಗಳು ಆರಾಧನೆ ನಡೆಯುವ ಮೂರು ದಿನಗಳ ಕಾಲ ಕೆಲವರು ಅಡುಗೆ ಬಡಿಸುವುದಕ್ಕೆ ಸೇರಿದಂತೆ ಇತರ ಕೆಲಸ-ಕಾರ್ಯಗಳಿಗೆ ಅಂತಲೇ ಸ್ವಯಂ ಸೇವಕರಾಗಿ ದುಡಿಯುತ್ತಾರೆ. ತಮ್ಮ ಇತರ ಕೆಲಸ-ಕಾರ್ಯಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಸೇವೆ ಸಲ್ಲಿಸುವವರೂ ಇದ್ದಾರೆ.
ಟೇಬಲ್ ಗಳ ಮೇಲೆ ಕೂಡ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ
"ಟೇಬಲ್ ಗಳ ಮೇಲೆ ಕೂಡ ಸಾರ್ವಜನಿಕರಿಗೆ ಪ್ರಸಾದ (ಊಟದ) ವ್ಯವಸ್ಥೆ ಮಾಡಲಾಗಿದೆ. ಸೋಮವಾರದಂದು ಐದಾರು ಸಾವಿರಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ನಾಳೆ ಹಾಗೂ ನಾಡಿದ್ದು ಇನ್ನೂ ಹೆಚ್ಚು ಮಂದಿ ಬರುವ ಸಾಧ್ಯತೆ ಇದೆ. ರಾಯರ ಕೃಪೆಗೆ ಪಾತ್ರರಾಗಲು ಸ್ವಯಂಸೇವಕರಾಗಿ ಕೂಡ ಸಾಕಷ್ಟು ಮಂದಿ ಬಂದಿದ್ದಾರೆ" ಎಂದು ನವ ಮಂತ್ರಾಲಯ ಎಂದು ಕರೆಸಿಕೊಳ್ಳುವ ಧರ್ಮಸ್ಥಳ ಛತ್ರದ ಎದುರಿಗೆ ಇರುವ ರಾಯರ ಮಠದಲ್ಲಿ ವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದವರ ಪೈಕಿ ಒಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.