ದೀಪಿಕಾ ವಿರುದ್ಧ ರಾಘವೇಂದ್ರ ಔರಾದ್ಕರ್ ಟ್ವೀಟ್ ಪ್ರಕರಣಕ್ಕೆ ಟ್ವಿಸ್ಟ್
Recommended Video
ಬೆಂಗಳೂರು, ಜನವರಿ 09: ನಟಿ ದೀಪಿಕಾ ಪಡುಕೋಣೆ ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಹಿಂಸೆ ಖಂಡಿಸಿ ಪ್ರತಿಭಟನೆ ನಡೆಸಿದ ಬಗ್ಗೆ ವ್ಯಂಗ್ಯವಾಗಿ ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಟ್ವೀಟ್ ಮಾಡಿದ್ದರು. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
ರಾಘವೇಂದ್ರ ಔರಾದ್ಕರ್ ಅವರ ಟ್ವಿಟ್ಟರ್ ಖಾತೆಯಿಂದ ದೀಪಿಕಾ ಪಡುಕೋಣೆಯನ್ನು ಹಿಯಾಳಿಸುವಂತಹಾ ಪೋಸ್ಟ್ ಮಾಡಲಾಗಿತ್ತು. ಆದರೆ ಅದರ ಬಗ್ಗೆ ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದು, ಟ್ವಿಟ್ಟರ್ ಹ್ಯಾಕ್ ಆಗಿದೆ ಎಂದಿದ್ದಾರೆ.
'ರಾಘವೇಂದ್ರ ಔರಾದ್ಕರ್ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ಈಗಾಗಲೇ ನಿಷ್ಕ್ರಿಯಗೊಳಿಸಿದ್ದಾರೆ. ಆದರೆ ಯಾರೋ ಅದನ್ನು ಹ್ಯಾಕ್ ಮಾಡಿ ಟ್ವೀಟ್ ಮಾಡುತ್ತಿದ್ದಾರೆ, ಈ ಬಗ್ಗೆ ಸಂಬಂಧಿತ ಪೊಲೀಸ್ ಘಟಕ ತನಿಖೆ ನಡೆಸುತ್ತಿದೆ' ಎಂದು ಹೇಳಿದ್ದಾರೆ.
ಟ್ವೀಟ್ ಮಾಡಿದ್ದ ರಾಘವೇಂದ್ರ ಔರಾದ್ಕರ್, 'ದೀಪಿಕಾ ಪಡುಕೋಣೆ ಬಿಎಸ್ಎನ್ಎಲ್ ಗೆ ಬೆಂಬಲ ನೀಡಿದರು ಅದು ನಷ್ಟಕ್ಕೆ ಹೋಯಿತು, ಆರ್ಸಿಬಿ ಜೊತೆ ನಿಂತರು ಅದು ಒಂದು ಬಾರಿಯೂ ಕಪ್ ಗೆಲ್ಲಲಿಲ್ಲ, ವಿಜಯ್ ಮಲ್ಯ ಮತ್ತು ಸಿದ್ಧಾರ್ಥ ಮಲ್ಯ ದೇಶಬಿಟ್ಟೇ ಪರಾರಿ ಆದರು. ಯುವರಾಜ್ ಸಿಂಗ್ ಜೊತೆ ಹೋದರು ಬಹು ಕಷ್ಟಪಟ್ಟು ಕ್ಯಾನ್ಸರ್ ಜೊತೆ ಹೋರಾಡಿ ಬದುಕಿದರು. ಈಗ ತುಕ್ಡೆ-ತುಕ್ಡೆ ಗ್ಯಾಂಗ್ ಸರದಿ, ದೀಪಿಕಾಳ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ, ಆಲ್ ದಿ ಬೆಸ್ಟ್ ಹೇಳೋಣ' ಎಂದಿದ್ದರು.
ರಾಘವೇಂದ್ರ ಔರಾದ್ಕರ್ ಅವರ ಈ ಟ್ವೀಟರ್ ಖಾತೆಯಿಂದ ಪೋಸ್ಟ್ ಆಗಿದ್ದ ಈ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಕೆಲವರು ಪ್ರಶಂಸಿದ್ದರೆ, ಇನ್ನು ಕೆಲವರು ವಿರೋಧಿಸಿದ್ದರು. ಕೊನೆಗೆ ಈಗ ಬೆಂಗಳೂರು ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಸ್ಪಷ್ಟನೆ ನೀಡಲಾಗಿದೆ.