ಚಾಮರಾಜನಗರದ ಅರಣ್ಯ ಪ್ರದೇಶದಲ್ಲಿ ಎಸ್ಡಿಪಿಐ ತರಬೇತಿ ಶಿಬಿರ
ಬೆಂಗಳೂರು, ಜ. 17: ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಕಾರ್ಯಕರ್ತರ ಬಂಧನದ ಬೆನ್ನಲ್ಲೆ ಅನೇಕ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ಕೊಡುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಆರ್. ಅಶೋಕ್ ಸೂಚನೆ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಸಂಪುಟಸಭೆಗೆ ಮೊದಲು ಮಾಧ್ಯಮಗಳಿಗೆ ಆರ್. ಅಶೋಕ್ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಚಾಮರಾಜನಗರ ಸಮೀಪದ ಅರಣ್ಯದಲ್ಲಿ ಎಸ್ಡಿಪಿಐ ನಂತಹ ಸಂಘಟನೆಗಳ ಸದಸ್ಯರು ತರಬೇತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದರಿಂದ ತನಿಖೆ ನಡೆಸಿ ಸಂಪೂರ್ಣ ವರದಿ ಕೊಡುವಂತೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆಂದು ಅವರು ಹೇಳಿದ್ದಾರೆ. ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧ ಮಾಡಬೇಕು. ಅವು ದೇಶದ್ರೋಹಿ ಸಂಘಟನೆಗಳು. ಇಂತಹ ಸಂಘಟನೆಗಳನ್ನು ಬೇರೆ ರಾಜ್ಯದಲ್ಲಿಯೂ ನಿಷೇಧ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ. ಬಿಜೆಪಿ, ಆರ್ಎಸ್ಎಸ್ ಪ್ರಮುಖರನ್ನು ಗುರುತು ಮಾಡಿ ಅವರನ್ನು ಈ ಸಂಘಟನೆಗಳು ಟಾರ್ಗೆಟ್ ಮಾಡುತ್ತಿವೆ ಎಂದಿದ್ದಾರೆ.
ಸಂಸದ ತೇಜಸ್ವಿ , ಸೂಲಿಬೆಲೆ ಕೊಲೆಗೆ ಸಂಚು: ಪೊಲೀಸರಿಂದ ಬಂತು ಆಘಾತಕಾರಿ ಮಾಹಿತಿ
ಇಂದು ನಡೆದ ಸಂಪುಟ ಸಭೆಯಲ್ಲೂ ಕೂಡ ಮಂತ್ರಿಗಳು ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧ ಮಾಡಲು ಒತ್ತಾಯ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಕೊಡುವಂತೆ ಸಚಿವ ಅಶೋಕ್ ಕೇಳಿದ್ದಾರೆ. ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ರಾಜ್ಯ ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.