ಫ್ಲ್ಯಾಟ್ ಖರೀದಿಸುವವರಿಗೆ ಸಿಹಿ ಸುದ್ದಿ ಕೊಟ್ಟ ಕಂದಾಯ ಸಚಿವ ಆರ್. ಅಶೋಕ್!
ಬೆಂಗಳೂರು, ಆ. 14: ಬೆಂಗಳೂರಿನಲ್ಲಿ ಮನೆ ಖರೀದಿಸುವವರಿಗೆ ರಾಜ್ಯ ಬಿಜೆಪಿ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಫ್ಲ್ಯಾಟ್ ಖರೀದಿಸುವವರಿಗೆ ನೋಂದಣಿ ಶುಲ್ಕದಲ್ಲಿ ಭಾರಿ ಕಡಿತ ಮಾಡಿ ಕಂದಾಯ ಸಚಿವ ಆರ್. ಅಶೋಕ್ ಆದೇಶ ಮಾಡಿದ್ದಾರೆ. ಕೆಳ ಹಾಗೂ ಮಧ್ಯಮದ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಮಾಡಲಾಗಿದೆ.
ಬೆಂಗಳೂರಿನಲ್ಲಿ ಮಧ್ಯಮ ವರ್ಗದವರು ಫ್ಲ್ಯಾಟ್ ಖರೀದಿಸುವುದನ್ನು ಉತ್ತೇಜಿಸಲು ಇಡೀ ರಾಜ್ಯದಲ್ಲಿ 35 ರಿಂದ 45 ಲಕ್ಷ ರು. ಮೌಲ್ಯದ ಫ್ಲ್ಯಾಟ್ಗಳ ಖರೀದಿಗೆ ನಿಗದಿ ಮಾಡಿದ್ದ ಶೇ. 5ರಷ್ಟು ಮುದ್ರಾಂಕ ಶುಲ್ಕವನ್ನು ಶೇ. 3ಕ್ಕೆ ಇಳಿಕೆ ಮಾಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು 20 ಲಕ್ಷ ರು.ವರೆಗಿನ ಮೌಲ್ಯದ ಫ್ಲ್ಯಾಟ್ಗಳ ಮೊದಲನೇ ನೋಂದಣಿ ವೇಳೆ ಶೇ.5ರಷ್ಟಿರುವ ಮುದ್ರಾಂಕ ಶುಲ್ಕವನ್ನು ಶೇ.2ಕ್ಕೆ ಹಾಗೂ 20ರಿಂದ 35 ಲಕ್ಷ ರು. ಮೌಲ್ಯದ ಫ್ಲ್ಯಾಟ್ಗಳ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 3ಕ್ಕೆ ಇಳಿಕೆ ಮಾಡಿತ್ತು. ಕಳೆದ ಮಾರ್ಚಲ್ಲಿ ಮಂಡಿಸಿದ 2021-22ನೇ ಸಾಲಿನ ಬಜೆಟ್ ವೇಳೆ 35ರಿಂದ 45 ಲಕ್ಷ ರು. ಮೌಲ್ಯದ ಫ್ಲ್ಯಾಟ್ಗಳ ನೋಂದಣಿ ವೇಳೆಯೂ ಮುದ್ರಾಂಕ ಶುಲ್ಕವನ್ನು 5ರಿಂದ ಶೇ.3ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಿತ್ತು. ಈಗ ಅದನ್ನು ಅನುಷ್ಠಾನಕ್ಕೆ ತಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
75 ಸಾವಿರ ಸಸಿ ನೆಡುವ ಕಾರ್ಯಕ್ರಮ: 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 75 ಸಾವಿರ ಸಸಿ ನೆಡುವ ಕಾರ್ಯಕ್ರಮವನ್ನು ಕೋಟಿ ವೃಕ್ಷ ಸೈನ್ಯ, ಆಹ್ವಾನ ಪ್ರತಿಷ್ಠಾನ, ವ್ಹಿ ಭಾರತಿ ಮತ್ತು ಇನ್ನಿತರ ಪ್ರತಿಷ್ಠಾನಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕುಮಾರ ಸ್ವಾಮಿ ಲೇ ಔಟ್ ನ ಕುಮಾರ ಗಿರಿ ಪಾರ್ಕ್ನಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟಿಸಿದರು.
ಜೊತೆಗೆ ಕುಮಾರ ಸ್ವಾಮಿ ಲೇ ಔಟ್ ವಾರ್ಡ್ನ ಕದಿರೇನಹಳ್ಳಿ ಆಕಾಂಕ್ಷೆ ಕಚೇರಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಕೋವಿಡ್ ನಿಂದ ರಕ್ಷಣೆ ನೀಡುವ ನಿಟ್ಟಿನಲ್ಲಿ ಸೋಂಕು ತಡೆಗಟ್ಟಲು ನೆರವಾಗಬಲ್ಲ ನ್ಯೂಟ್ರಿಷನ್ ಮತ್ತು ಹೆಲ್ತ್ ಕಿಟ್ ವಿತರಣೆಯನ್ನು ಆರ್ ಅಶೋಕ್ ಮಾಡಿದರು.
ನಂತರ ಕುಮಾರಸ್ವಾಮಿ ಲೇ ಔಟ್ನಲ್ಲಿನ ದೋಬಿಘಾಟ್ನಲ್ಲಿ ರಾಷ್ಟ್ರೀಯ ಯುವ ಪ್ರತಿಷ್ಠಾನದ ವತಿಯಿಂದ ಸ್ಮಾರ್ಟ್ ಪದ್ಮನಾಭನಗರ ಯೋಜನೆಯಡಿ ಶಾಲಾ ಮಕ್ಕಳಿಗೆ ಟ್ಯಾಬ್ ವಿತರಣೆಯನ್ನೂ ಕಂದಾಯ ಸಚಿವ ಆರ್. ಅಶೋಕ್ ಮಾಡಿದರು.
Recommended Video