ಅನಂತಕುಮಾರ್ ದಾರಿ ನಮಗೆಲ್ಲ ಆದರ್ಶನೀಯ: ಆರ್ ಅಶೋಕ್
ಬೆಂಗಳೂರು ನ 13: ದಿವಂಗತ ಅನಂತಕುಮಾರ್ ಅವರು ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ದಿಗೆ ಅನುಸಸರಿಸಿದ ದಾರಿ ನಮಗೆಲ್ಲ ಆದರ್ಶನೀಯ ಎಂದು ಕಂದಾಯ ಸಚಿವರಾದ ಆರ್ ಅಶೋಕ್ ಹೇಳಿದರು.
ದಿವಂಗತ ಅನಂತಕುಮಾರ್ 2 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಲಾಲ್ಬಾಗ್ ಬಳಿಯ ಅನಂತ ಸ್ಮೃತಿ ವನದಿಂದ ಆಯೋಜಿಸಲಾಗಿದ್ದ ಅನಂತ ಸೃತಿ ನಡಿಗೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರನ್ನು ಇನ್ನಷ್ಟು ಸುಂದರಗೊಳಿಸಲು ಹಲವಾರು ಕನಸುಗಳನ್ನು ಹೊತ್ತಿದ್ದ ಅನಂತಕುಮಾರ್ ನಡೆದ ದಾರಿ ನಮಗೆ ದಾರಿ ದೀಪವಾಗಿದೆ. ಅವರು ಹಾಕಿಕೊಟ್ಟ ಅಭಿವೃದ್ದಿಯ ಮಾರ್ಗದಲ್ಲಿ ನಡೆಯುವ ಮೂಲಕ ಬೆಂಗಳೂರನ್ನ ಇನ್ನಷ್ಟು ಸುಂದರಗೊಳಿಸೋಣ. ಅದಮ್ಯ ಚೇತನ ಸಂಸ್ಥೆಯ ಮೂಲಕ ಕೋಟ್ಯಾಂತರ ಜನರ ಹಸಿವನ್ನು ನೀಗಿಸುವ ಕಾರ್ಯವನ್ನು ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಮಾಡುತ್ತಿದ್ದಾರೆ. ದಿವಂಗತ ಅನಂತಕುಮಾರ್ ಅವರ ಆಶಯವನ್ನು ಸರಿಯಾದ ದಾರಿಯಲ್ಲಿ ನಡೆಸುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಅನಂತ ಸ್ಮೃತಿ ನಡಿಗೆ ಅಂಗವಾಗಿ ಪಂಜಿನ ಮೆರವಣಿಗೆಯಲ್ಲಿ ಸಾಗಿದ ಅಭಿಮಾನಿಗಳು ಪ್ರಮುಖರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡುತ್ತಾ ಸಾಗಿದರು. ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್, ಶಾಸಕ ಉದಯ ಗರುಡಚಾರ್, ರವಿ ಸುಬ್ರಮಣ್ಯ ಹಾಗು ಪಾಲಿಕೆಯ ಮಾಜಿ ಸದಸ್ಯರುಗಳು ಭಾಗವಹಿಸಿದ್ದರು. ಲಾಲ್ ಬಾಗ್ ವೆಸ್ಟ್ ಗೇಟ್ ಎದುರು ಇರುವ ಅನಂತ ಸ್ಮೃತಿ ವನದಿಂದ ಪ್ರಾರಂಭಿಸಿ ಅದಮ್ಯಚೇತನದವರೆಗೆ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು.