ಹೊಸಕೆರೆಹಳ್ಳಿ ಮಳೆ ಅವಘಡಗಳಿಗೆ ಅಶೋಕ್ ನೇರ ಕಾರಣ: ಎಎಪಿ
ದತ್ತಾತ್ರೇಯ ನಗರ, ಹೊಸಕೆರೆಹಳ್ಳಿ, ಸುಬ್ರಮಣ್ಯ ನಗರ ವಾರ್ಡ್ ಸೇರಿದಂತೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ಮಳೆಯಿಂದ ಆಗಿರುವ ಹಾನಿಗಳಿಗೆ ಸಚಿವ ಆರ್. ಅಶೋಕ್ ನೇರ ಹೊಣೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಪತ್ರಿಕಾ ಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಮಾಧ್ಯಮ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಮೂಲಕ 1997, 1999, 2004 ರಿಂದ 3 ಬಾರಿ ಹಾಗೂ ಪದ್ಮನಾಭನಗರವನ್ನು 3 ಬಾರಿ ಒಟ್ಟು 6 ಬಾರಿ ಪ್ರತಿನಿಧಿಸಿ ಶಾಸಕರಾಗಿದ್ದ ಆರ್.ಅಶೋಕ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಲ್ಡರ್ಗಳ ಜತೆ ಸೇರಿ ಹೊಸಕೆರೆಹಳ್ಳಿ, ಗೌಡಯ್ಯನ ಕೆರೆ, ಚಿಕ್ಕಲ್ಲಸಂದ್ರ ಕೆರೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳ ರಾಜಕಾಲುವೆ, ಕೆರೆ ಜಾಗ ಒತ್ತುವರಿ ಮಾಡಿಕೊಂಡು ಅಕ್ರಮ ಬಡಾವಣೆಗಳನ್ನು ನಿರ್ಮಿಸಿ ಅಮಾಯಕ ಜನಗಳಿಗೆ ಮಾರಾಟ ಮಾಡಿದ ಪರಿಣಾಮ ಪ್ರತಿ ವರ್ಷ ಜನರು ಮಳೆಗಾಲದಲ್ಲಿ ತೊಂದರೆ ಅನುಭವಿಸುವಂತಾಗಿದೆ.
ಭಾರಿ ಮಳೆಗೆ ಬೆಚ್ಚಿಬಿದ್ದ ಬೆಂಗಳೂರು; ಹಲವು ಪ್ರದೇಶ ಜಲಾವೃತ
ಆರ್. ಅಶೋಕ್ ಅವರ ಪಟಾಲಂನಲ್ಲಿ ಗುರುತಿಸಿಕೊಂಡಿರುವ ಮಾಜಿ ಮೇಯರ್ ಡಿ.ವೆಂಕಟೇಶಮೂರ್ತಿ, ಮಾಜಿ ಉಪ ಮೇಯರ್ ಶ್ರೀನಿವಾಸ್ ಸೇರಿದಂತೆ ಇನ್ನು ಮುಂತಾದವರು ಮಳೆ ನೀರು ಹರಿಯುವ ಪ್ರದೇಶಗಳಲ್ಲಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಿ ಅಮಾಯಕರಿಗೆ ದುಪ್ಪಟ್ಟು ಬೆಲೆಗೆ ಮಾರಿ ಈ ಅವಘಡಕ್ಕೆ ಕಾರಣರಾಗಿದ್ದಾರೆ.
ಅಶೋಕ್ ಅವರ ಆಸ್ತಿ ಮುಟ್ಟುಗೋಲು ಹಾಕಿ
ಕಷ್ಟಪಟ್ಟು ಮನೆ ಕಟ್ಟಿ ಬೀದಿಪಾಲಾಗಿರುವವರ ಪೈಕಿ ಬಹುತೇಕರು ಭೂಗಳ್ಳರಿಂದ ವಂಚನೆಗೆ ಒಳಗಾದ ಅಮಾಯಕರು, ಆದ ಕಾರಣ ಕಳೆದ 20 ವರ್ಷಗಳ ಭೂ ದಾಖಲೆಯನ್ನು ತೆಗೆದು ಮೂಲ ಒತ್ತುವರಿದಾರರ ಜತೆಗೆ ಬಿಲ್ಡರ್ಗಳ ಹಾಗೂ ಸಚಿವ ಆರ್. ಅಶೋಕ್ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಈ ದಗಾಕೋರರ ಮೇಲೆ ಐಟಿ ಹಾಗೂ ಇಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ದೇವರ ಶಾಪ ಕಾರಣವಲ್ಲ
ಪ್ರತಿ ಬಾರೀ ಮಳೆ ಬಂದಾಗಲೂಮಾನ್ಯ ಮುಖ್ಯಮಂತ್ರಿಗಳೇ ನಿಮ್ಮದೇ ಪಕ್ಷದ ಪುಡಾರಿಗಳಿಂದ ತೊಂದರೆಗೆ ಒಳಗಾಗಿರುವ ಸಂತ್ರಸ್ಥರಿಗೆ ಪುಡಿಗಾಸಿನ ಪರಿಹಾರ ನೀಡುವ ಬದಲು ಸರ್ಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ ಮನೆಗಳನ್ನು ನೀಡಬೇಕೆಂದು ಆಗ್ರಹಿಸುತ್ತದೆ.
ತೊಂದರೆಗೆ ಒಳಗಾದ ಜನರಿಗೆ ಪ್ರತ್ಯೇಕ ಸೂರು ಕಲ್ಪಿಸ ಬೇಕಾಗಿದೆ. ಕಣ್ಣೊರೆಸುವ ತಂತ್ರಗಾರಿಕೆಯ ರೂಪದಲ್ಲಿ ದಬ್ಬಾಳಿಕೆಯಿಂದ ಈ ಅಮಾಯಕರ ತೆರವು ಕಾರ್ಯಾಚರಣೆ ನಡೆಸಿದರೆ ಜೆಸಿಬಿಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಲಾಗುವುದು ಎಂದು ಹೇಳಿದರು.
ಈ ಅವಘಡಕ್ಕೆ ಮಳೆರಾಯನ ಅವಕೃಪೆ ದೇವರ ಶಾಪ ಕಾರಣವಲ್ಲ, ಕೆರೆ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ ಮನುಷ್ಯನ ದುರಾಸೆ ಕಾರಣ. ನಾವು ಮೇಲೆ ಆರೋಪಿಸಿರುವ ದುರಾಸೆಯ ಮನುಷ್ಯರೇ ಅವರುಗಳು, ಈ ದುರಾಸೆಯ ಜನರ ಮೇಲೆ ಕ್ರಮ ಕೈಗೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದಿಂದ 3,113 ಎಕರೆ ಒತ್ತುವರಿಯಾಗಿದೆ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 10,472 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿದೆ. ಖಾಸಗಿ ಸಂಸ್ಥೆಗಳಿಂದ 7,182 ಎಕರೆ, ಸರಕಾರದಿಂದ 3,113 ಎಕರೆ ಒತ್ತುವರಿಯಾಗಿದೆ.
ಈ ಪ್ರಭಾವಿಗಳ ಕೋಳಿವಾಡ ವರದಿ ತಯಾರಿಸುವಾಗ ಮೂಗು ತೂರಿಸಿ ತಮ್ಮ ಅಕ್ರಮಗಳನ್ನು ಮರೆಮಾಚಿರುವ ಇವರಿಗೆ ಕೂಡಲೇ ನೋಟಿಸ್ ನೀಡಿ ಒತ್ತುವರಿ ನಡೆಸಿರುವ ಮೂಲ ಅಪರಾಧಿಗಳನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೇ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ನ ಜನವಿರೋಧಿ ನೀತಿ
ಜನಸಾಮಾನ್ಯರ ಮೇಲೆ ಇಷ್ಟೆಲ್ಲಾ ದಬ್ಬಾಳಿಕೆ ನಡೆಯುತ್ತಿದ್ದರೂ ಪ್ರಭಾವಿ ಬಿಲ್ಡರ್ ಗಳ ಬೆಂಬಲಿಸುತ್ತಾ ಸರ್ಕಾರದ ಬಗ್ಗೆ ಮಾತನ್ನೂ ಬಿಚ್ಚದ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ನ ಜನವಿರೋಧಿ ನೀತಿಯನ್ನೂ ಖಂಡಿಸುತ್ತದೆ. ಪತ್ರಿಕಾ ಗೋಷ್ಠಿಯಲ್ಲಿ ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್, ಮುಖ್ಯ ವಕ್ತಾರ ಶರತ್ ಖಾದ್ರಿ ಇದ್ದರು.