ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ; ಆರ್. ಅಶೋಕ ದಿಢೀರ್ ಭೇಟಿ
ಬೆಂಗಳೂರು, ಜೂನ್ 28 : ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿವೆ. ಆಸ್ಪತ್ರೆಯಲ್ಲಿರುವ ರೋಗಿಗಳು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ಹತೋಟಿಗೆ ತರುವ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್. ಅಶೋಕಗೆ ವಹಿಸಲಾಗಿದೆ. ಸಚಿವರು ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು.
Exclusive: ಕೋವಿಡ್ ಹಾಟ್ಸ್ಪಾಟ್ ಆಗಲಿದೆಯಾ ವಿಕ್ಟೋರಿಯಾ ಆಸ್ಪತ್ರೆ? ಪ್ರತ್ಯಕ್ಷ ವರದಿ!
ಕೊರೊನಾ ವೈರಸ್ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಚಿವರು ಭೇಟಿ ನೀಡಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಹ ಜೊತೆಗಿದ್ದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊವಿಡ್ 19 ರೋಗಿ ಆತ್ಮಹತ್ಯೆ
ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಸಚಿವರು ರೋಗಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ರೋಗಿಗಳಿಗೆ ನೀಡುವ ಆಹಾರ, ನೀರು, ಹಣ್ಣು, ಔಷಧಿಗಳ ಪರಿಶೀಲನೆ ನಡೆಸಿ, ವೈದ್ಯರ ಜೊತೆ ಚರ್ಚೆ ನಡೆಸಿ, ಹಲವು ಸೂಚನೆಗಳನ್ನು ನೀಡಿದರು.
ಬೆಂಗಳೂರು ಲಾಕ್ಡೌನ್? ಅಥವಾ ಸೀಲ್ಡೌನ್? ಸಚಿವರ ಸ್ಪಷ್ಟನೆ
ವೈದ್ಯರ ಜೊತೆ ಮಧ್ಯಾಹ್ನದ ಊಟ
ಆರ್. ಅಶೋಕ ರೋಗಿಗಳಿಗೆ ನೀಡುವ ಮಧ್ಯಾಹ್ನದ ಊಟ ವೀಕ್ಷಣೆ ಮಾಡಿದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದರುಗಳ ಜೊತೆ ಊಟ ಸೇವಿಸಿದರು ಹಾಗೂ ಹಿರಿಯ ವೈದ್ಯಾಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಸೌಲಭ್ಯಗಳ ಬಗ್ಗೆ ಚರ್ಚೆ
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿನ ಚಿಕಿತ್ಸೆ ಹಾಗೂ ಇನ್ನಿತರೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಆರ್. ಅಶೋಕ ಜೊತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್, ಸಂಸದ ತೇಜಸ್ವಿ ಸೂರ್ಯ ಸಹ ಇದ್ದರು.
ವ್ಯವಸ್ಥೆ ಬಗ್ಗೆ ಹಲವು ದೂರುಗಳು
ರಾಜ್ಯದಲ್ಲಿಯೇ ಕೊರೊನಾ ವೈರಸ್ ಸೋಂಕಿತರಿಗೆ ಮೊದಲು ಚಿಕಿತ್ಸೆ ನೀಡಲು ಆರಂಭಿಸಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ. ಈಗ ಆಸ್ಪತ್ರೆಯಲ್ಲಿ ಯಾವುದೇ ಹಾಸಿಗೆಗಳು ಖಾಲಿ ಇಲ್ಲ. ಆಸ್ಪತ್ರೆಯಲ್ಲಿ ಆಹಾರ, ಸ್ವಚ್ಛತೆ ಸೇರಿದಂತೆ ಹಲವು ವ್ಯವಸ್ಥೆಗಳು ಸರಿ ಇಲ್ಲ ಎಂದು ಆರೋಪಿಸಲಾಗಿತ್ತು. ರೋಗಿಗಳೇ ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
ಮುಖ್ಯಮಂತ್ರಿಗಳ ಜೊತೆ ಸಭೆ
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ನಿಯಂತ್ರಣದ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಸಚಿವ ಆರ್. ಅಶೋಕ ಪಾಲ್ಗೊಂಡಿದ್ದರು. ಬೆಂಗಳೂರು ನಗರದಲ್ಲಿ ಶನಿವಾರ 596 ಪ್ರಕರಣಗಳು ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.