ಬಿಬಿಎಂಪಿ ಆಯುಕ್ತರ ವರ್ಗಾವಣೆಗೆ ಕಾರಣ ಬಿಚ್ಚಿಟ್ಟ ಆರ್ ಅಶೋಕ್
ಬೆಂಗಳೂರು, ಜುಲೈ 18: ಹೈ ಕೋರ್ಟ್ ತೀರ್ಪು, ಕೋವಿಡ್ ಸ್ಥಿತಿ ಆಧರಿಸಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ವರ್ಗಾವಣೆ ಮಾಡಲು ಸಿಎಂ ಆದೇಶಿಸಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.
'ಹೈಕೋರ್ಟ್ ನಲ್ಲಿ ಬಿಬಿಎಂಪಿ ಬಗ್ಗೆ ಕೆಲವು ಘಟನೆ ಆಗಿದೆ. ವರ್ಗಾವಣೆಗೆ ಅದೊಂದೇ ಕಾರಣ ಅಲ್ಲ. ಕೋರ್ಟ್ ತೀರ್ಪು, ಕೋವಿಡ್ ಸ್ಥಿತಿ ಆಧರಿಸಿ ಸಿಎಂ ಆದೇಶ ಮಾಡಿದ್ದಾರೆ. ಮಂಜುನಾಥ್ ಪ್ರಸಾದ್ ಹಿಂದೆ ಆಯುಕ್ತರಾಗಿ ಕಾರ್ಯನಿರ್ವಹಿಸಿ ಅನುಭವ ಇದೆ. ಅಧಿಕಾರಿಗಳಿಗೆ ಹುದ್ದೆ ಶಾಶ್ವತ ಅಲ್ಲ. ಯಾವ್ಯಾವ ಅಧಿಕಾರಿ ಎಲ್ಲಿ ಕೆಲಸ ಮಾಡಬೇಕು ಅನ್ನೋದು ಸಿಎಂ ವಿವೇಚನೆ. ಇದು ಎಲ್ಲರ ಸಹಮತದ ಪ್ರಶ್ನೆ ಅಲ್ಲ. ಅನಿಲ್ ಕುಮಾರ್ ಸಮರ್ಥರಿದ್ದರು, ಮಂಜುನಾಥ್ ಪ್ರಸಾದ್ ಕೂಡಾ ಸಮರ್ಥರಿದ್ದಾರೆ' ಎಂದು ಅಶೋಕ್ ಹೇಳಿದ್ದಾರೆ.
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಕಂದಾಯ ಸಚಿವರು 'ವೈದೇಹಿ ಕಾಲೇಜು ಸಭೆಗೆ ಗೈರಾದ ಕಾರಣ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ. ಆಕಾಶ್ ಮತ್ತು ಅಂಬೇಡ್ಕರ್ ಕಾಲೇಜುಗಳು ಪೂರ್ತಿ ಕಾಲೇಜು ನೀಡಲು ಒಪ್ಪಿದ್ದಾರೆ. ಇನ್ನೊಂದು ಮೀಟಿಂಗ್ ಕರೆಯಲು ಅವಕಾಶ ಕೊಡಬೇಡಿ ಎಂದು ಹೇಳಿದ್ದಾರೆ. ವಿಕ್ರಮ್ ಆಸ್ಪತ್ರೆಗೆ ನೋಟಿಸ್ ಕೊಟ್ಟ ಕಾರಣ ಅವರು ಬಂದು ಭೇಟಿ ಮಾಡಿ ಹೆಚ್ಚು ಬೆಡ್ ಕೊಡಲು ಒಪ್ಪಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎತ್ತಂಗಡಿ ಹಿಂದೆ ಬೃಹತ್ ಕಾರಣ
'ಇನ್ನು ಮುಂದೆ ಯಾರಾದರೂ ಆಸ್ಪತ್ರೆಗಳು ರೋಗಿಗಳನ್ನು ಅಲೆದಾಡಿಸಿದರೆ, ಬೆಡ್ ನೀಡದೇ ಇದ್ದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಲು ಸಿಎಂ ನನಗೆ ಸೂಚಿಸಿದ್ದಾರೆ' ಎಂದು ಅಶೋಕ್ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ವಲಯದಲ್ಲಿ ಪ್ರತಿ ಆಸ್ಪತ್ರೆಗೆ ಓರ್ವ ಕಾನ್ ಸ್ಟೇಬಲ್ ಹಾಕುವ ವ್ಯವಸ್ಥೆ ಮಾಡುತ್ತೇವೆ. ನಾರ್ಮಲ್ ಬೆಡ್ ಗಿಂತ ಆಕ್ಸಿಜನ್ ಬೆಡ್ ಕೊಡಲು ಖಾಸಗಿ ಕಾಲೇಜುಗಳಿಗೆ ಮನವಿ ಮಾಡಿದ್ದೇವೆ. ಮಾಧ್ಯಮದಲ್ಲಿ ಬರುವ ಸಮಸ್ಯೆಗಳ ವರದಿ ನೋಡಿ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಲಾಕ್ಡೌನ್ ವಿಚಾರವಾಗಿ ಮಾತನಾಡಿದ ಅಶೋಕ್ 'ಬೆಂಗಳೂರು ಲಾಕ್ ಡೌನ್ ಈವರೆಗೆ ಸಿಎಂ ಏನು ಹೇಳಿದ್ದಾರೋ ಅದೇ ಅಂತಿಮ. ಅಯಾಯ ಜಿಲ್ಲೆಗೆ ಸಂಬಂಧ ಪಟ್ಟಂತೆ ಸಿಎಂ ಮಾಹಿತಿ ಪಡೆಯುತ್ತಿದ್ದಾರೆ. ಅದನ್ನು ಆಧರಿಸಿ ಸಿಎಂ ನಿರ್ಧಾರ ಮಾಡುತ್ತಾರೆ' ಎಂದಿದ್ದಾರೆ.