"ವೈದ್ಯರ ನಡೆ ಹಳ್ಳಿ ಕಡೆ" ವಿಶಿಷ್ಟ ಕಾರ್ಯಕ್ರಮಕ್ಕೆ ಆರ್. ಅಶೋಕ ಚಾಲನೆ
ಬೆಂಗಳೂರು, ಜೂನ್ 16: ಕೊರೊನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸಬಹುದು ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ವೈದ್ಯರು ಹಳ್ಳಿಹಳ್ಳಿಗೆ ಹೋಗಿ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಆರ್ ಅಶೋಕ ಹೇಳಿದರು.
ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲ್ಲೂಕು ಕಚೇರಿ ಆವರಣದಲ್ಲಿ "ಮಕ್ಕಳ ವೈದ್ಯರ ನಡೆ ಹಳ್ಳಿಯ ಕಡೆ" ಎಂಬ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ 3ನೇ ಅಲೆ: 25 ಲಕ್ಷ ಮಕ್ಕಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ ತಜ್ಞರ ಕೊರತೆ, ಪೂರಕ ಕ್ರಮ
"ಇದೊಂದು ಪರೀಕ್ಷಾರ್ಥ ಯೋಜನೆ. ಮಕ್ಕಳ ವೈದ್ಯರು ಹಳ್ಳಿ ಹಳ್ಳಿಗೆ ಹೋಗಿ ಅಲ್ಲಿನ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳಿಗೆ ಪೌಷ್ಟಿಕಾಂಶಗಳ ಕಿಟ್ ನೀಡಲಿದ್ದಾರೆ. ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 18ಕ್ಕಿಂತ ಕಡಿಮೆ ವಯಸ್ಸಿನ 2,72,918 ಮಕ್ಕಳು ಹಾಗೂ ಅಂಗನವಾಡಿಯಲ್ಲಿ 6ಕ್ಕಿಂತ ಕಡಿಮೆ ವಯಸ್ಸಿನ 58,637 ಮಕ್ಕಳಿದ್ದಾರೆ. 860 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದಾಗಿ ಗುರುತಿಸಲಾಗಿದೆ. ಹಾಗೇ ಗಡಿ ಭಾಗದಲ್ಲಿಯೂ ಒಂದಿಷ್ಟು ಮಕ್ಕಳಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಸುಮಾರು 1200 ಇರಬಹುದು ಎಂದು ಅಂದಾಜಿಸಲಾಗಿದೆ. 20 ತಂಡಗಳಲ್ಲಿ ಮನೆ ಮನೆಗೆ ವೈದ್ಯರನ್ನು ಕಳುಹಿಸಲಾಗುವುದು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಇದರಲ್ಲಿ ಭಾಗಿಯಾಗುವರು," ಎಂದು ತಿಳಿಸಿದರು.
"ಮಕ್ಕಳ ಆರೋಗ್ಯವನ್ನು ಉತ್ತಮ ಪಡಿಸಲು ಪೌಷ್ಟಿಕಾಂಶಗಳ ಕಿಟ್ ತಯಾರಿಸಲಾಗಿದೆ. ಅದರಲ್ಲಿ ಬಮೂಲ್ ಉತ್ಪನ್ನಗಳಾದ ಬಾದಾಮಿ ಪೌಡರ್ 200 ಗ್ರಾಂ., ಹಾಲಿನ ಪುಡಿ ಮತ್ತು ಸಕ್ಕರೆ 500 ಗ್ರಾಂ., ಬಿಸ್ಕೆಟ್ ಗಳು, ಮಲ್ಟಿವಿಟಮಿನ್ ಸಿರಪ್, ಮಾಸ್ಕ್, ಡೆಟಾಲ್ ಸೋಪ್ ನೀಡಲಾಗುವುದು. ಈ ಮೂಲಕ ಮಕ್ಕಳು ಆದಷ್ಟು ಬೇಗ ಸದೃಢಗೊಂಡು ಕೊರೊನಾ ಸೋಂಕು ಬಂದರೂ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಮಾಡುವ ಉದ್ದೇಶವಿದೆ. ಹಾಗೆಯೇ ಜಿಲ್ಲೆಯಲ್ಲಿ ಆರು ಕಡೆಗೆ ಮಕ್ಕಳ ಆಸ್ಪತ್ರೆ ಸಿದ್ಧಪಡಿಸಲಾಗಿದೆ," ಎಂದು ವಿವರಿಸಿದರು.
"ಆಕಾಶ್ ಆಸ್ಪತ್ರೆಯಲ್ಲಿ 25 ಹಾಸಿಗೆಗಳು, ಸಿದ್ಧಾರ್ಥ ಆಸ್ಪತ್ರೆಯಲ್ಲಿ 50 ಹಾಸಿಗೆಗಳು, ಎಂಇಜೆ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಹಲವು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಮಕ್ಕಳ ಆರೈಕೆ ಕೇಂದ್ರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ನಿಧಿಯಿಂದ ಅಗತ್ಯವಿರುವಷ್ಟು ಅನುದಾನ ಬಿಡುಗಡೆ ಮಾಡಲಾಗುವುದು," ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ ಉಪಸ್ಥಿತರಿದ್ದರು.
Recommended Video