ಸೂರು ಕಲ್ಪಿಸದೆ ಧನುರ್ಮಾಸದ ನೆಪ ಹೇಳಿದ ಅಧಿಕಾರಿಗಳು
ಬೆಂಗಳೂರು, ಜ. 29: ಧನುರ್ಮಾಸ ಹಾಗೂ ಪರಿಹಾರ ಸಾಮಗ್ರಿಗಳ ಕೊರತೆಯಿಂದ ನೆರೆ ಸಂತ್ರಸ್ತರಿಗೆ ಮನೆ ನಿರ್ಮಣ ವಿಳಂಬವಾಗಿದೆ ಎಂದು ನೆಪ ಹೇಳಲು ಮುಂದಾಗಿದ್ದ ಅಧಿಕಾರಿಗಳನ್ನು ಕಂದಾಯ ಸಚಿವ ಆರ್. ಅಶೋಕ್ ತರಾಟೆ ತೆಗೆದುಕೊಂಡಿದ್ದಾರೆ. ವಿಧಾನಸೌಧದಲ್ಲಿ ನೆರೆ ಪರಿಹಾರ ಕುರಿತು ಜಿಲ್ಲಾಧಿಕಾರಿಗಳ ಜೊತೆಗೆ ಕಂದಾಯ ಸಚಿವ ಆರ್. ಅಶೋಕ್ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಪ್ರವಾಹದಿಂದ ಹಾನಿಯಾಗಿದ್ದ ಮನೆಗಳ ಪುನರ್ ನಿರ್ಮಾಣ ಸೇರಿದಂತೆ ಪ್ರಗತಿ ಪರಿಶೀಲನೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಡಿದ್ದಾರೆ. ಜೊತೆಗೆ 'ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೀರಿ' ಎಂದು ಸೂಚಿಸಿದ್ದಾರೆ.
ಹಲವು ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಕಂದಾಯ ಸಚಿವ ಆರ್. ಅಶೊಕ್ ಮಾಡಿದ್ದಾರೆ.
3 ತಿಂಗಳ ಒಳಗೆ ಮನೆಗಳ ಕೆಲಸ ಪೂರ್ಣಗೊಳಿಸಲು ಸೂಚನೆ
ಪ್ರವಾಹ, ಅತಿವೃಷ್ಟಿಯಿಂದ ಸೂರು ಕಳೆದುಕೊಂಡವರಿಗೆ ಮುಂದಿನ ಮೂರು ತಿಂಗಳಲ್ಲಿ ಮನೆಗಳ ನಿರ್ಮಾಣ ಮಾಡಿಕೊಡುವ ಕೆಲಸ ಮುಗಿಸಬೇಕೆಂದು ಕಂದಾಯ ಸಚಿವ ಆರ್. ಅಶೋಕ್ ಸೂಚನೆ ಕೊಟ್ಟಿದ್ದಾರೆ.ಇನ್ನು 15 ದಿನಗಳ ಒಳಗೆ ಶೇಕಡಾ 50ರಷ್ಟು ಕಾಮಗಾರಿ ಪೂರ್ಣ ಆಗಿರಬೇಕು. ಒಟ್ಟು 9009 ಮನೆ ಕಟ್ಟಲು ಅನೊಮೋದನೆ ನೀಡಲಾಗಿದೆ. ಹಣದ ಕೊರತೆ ಇಲ್ಲ. ಅಗತ್ಯ ಹಣ ಡಿಸಿಗಳ ಅಕೌಂಟ್ಗೆ ಬಿಡುಗಡೆ ಮಾಡಲಾಗಿದೆ. ಮನೆ ನಿರ್ಮಾಣದ ಎರಡನೇ ಕಂತು ಹಣ ಫಲಾನುಭವಿಗಳಿಗೆ ಕೊಡಬೇಕು.
ಪೂರ್ಣಹಾನಿಯಾದ ಮನೆಗಳನ್ನು 'ಎ' ವರ್ಗದಲ್ಲಿ ಗುರುತಿಸಿ 5 ಲಕ್ಷ ರೂ. ಪರಿಹಾರ, ಅರ್ಧ ಹಾನಿಗೋಳಗಾದ ಮನೆಗಳನ್ನು 'ಬಿ' ವರ್ಗದಲ್ಲಿ ಗುರುತಿಸಿ 3 ಲಕ್ಷ ರೂ. ಪರಿಹಾರ ಕೊಡಲಾಗಿದೆ. ನಿಗದಿತ ಸಮಯದಲ್ಲಿ ಮನೆ ನಿರ್ಮಾಣ ಆಗದಿದ್ದಲ್ಲಿ ಅದಕ್ಕೆ ಅಧಿಕಾರಿಗಳೇ ಹೊಣೆ ಯಾಗುತ್ತಾರೆ ಎಂದು ಆರ್. ಅಶೋಕ್ ವಿಡಿಯೋ ಕಾನ್ಫರೆನ್ಸ್ನಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಬೆಂಗಳೂರಿಗರಿಗೆ ಸಚಿವ ಆರ್. ಅಶೋಕ್ ಸಿಹಿಸುದ್ದಿ!
ಧನುರ್ಮಾಸ ಮುಗಿದಿದೆ ಕೆಲಸ ಶುರು ಮಾಡಿ
ಧನುರ್ಮಾಸದ ನೆಪ ಹೇಳಿದ್ದ ಅಧಿಕಾರಿಗಳಿಗೆ ಧನುರ್ಮಾಸ ಮುಗಿದಿದೆ. ಕೆಲಸ ಶುರು ಮಾಡಿ ಎಂದು ಅಶೋಕ್ ಸೂಚಿಸಿದ್ದಾರೆ. ಮನೆಗೆ ಬುನಾದಿ ಹಾಕುವ ಕೆಲಸ ಇನ್ನು ಹತ್ತು ದಿನಗಳಲ್ಲಿ ಮುಗಿಯಬೇಕು. ಕೆಲವು ಕಡೆ ಧರ್ನುಮಾಸ ಇರೋದ್ರೀಂದ ಮನೆ ಕೆಲಸ ತಡ ಆಯ್ತು ಅಂತ ಹೇಳಿದ್ದಾರೆ. ಈಗ ಧರ್ನುಮಾಸ ಮುಗಿದಿದೆ ಕೆಲಸ ಪ್ರಾರಂಭ ಮಾಡಲು ಸೂಚನೆ ನೀಡಿದ್ದೇನೆ. ಪ್ರತಿ ಪಿಡಿಓಗೆ 15 ಮನೆಗಳ ಉಸ್ತುವಾರಿ ಕೊಡಲು ಸೂಚನೆ ನೀಡಲಾಗಿದೆ. ಪಿಡಿಓಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ಅಮಾನತು ಮಾಡಲು ಸೂಚನೆ ನೀಡಲಾಗಿದೆ ಎಂದರು.
ಕರೆಂಟ್ ಕಳೆದುಕೊಂಡ ಮನೆಗಳಿಗೆ ಈಗಾಗಲೇ ವಿದ್ಯುತ್ ವ್ಯವಸ್ಥೆ ಮಾಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಈಗಾಗಲೇ ಶೇಕಡಾ 90 ರಷ್ಟು ಶಾಲೆಗಳ ಕೆಲಸ ಪ್ರಾರಂಭ ಆಗಿದೆ. ಉಳಿದ ಶೇಕಡಾ 10ರಷ್ಟು ಶಾಲೆಗಳ ಕೆಲಸ ಆದಷ್ಟು ಬೇಗ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ. ಕುಡಿಯೋ ನೀರಿನ ಘಟಕಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂದು ಅಶೋಕ್ ಮಾಹಿತಿ ಕೊಟ್ಟಿದ್ದಾರೆ.
ವೃದ್ದಾಪ್ಯ ವೇತನ ಪಡೆಯಲು ಇನ್ಮುಂದೆ ಅಲೆಯಬೇಕಿಲ್ಲ
60 ವರ್ಷ ವಯೋಮಾನದವರಿಗೆ ಇಲಾಖೆಯಿಂದಲೇ ನೇರ ವೃದ್ದಾಪ್ಯ ವೇತನ ಕೊಡಲು ಯೋಜನೆ ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ. ಇನ್ನುಮುಂದೆ ವೃದ್ದಾಪ್ಯ ವೇತನ ಯೋಜನೆಯನ್ನು ಕಂದಾಯ ಇಲಾಖೆ ನಿರ್ವಹಣೆ ಮಾಡಲಿದೆ. ಯೋಜನೆ ಆರಂಭಿಸಲು ಇನ್ನೊಂದು ವಾರದಲ್ಲಿ ದಿನಾಂಕ ನಿಗದಿ ಮಾಡಲಾಗುವುದು. ಉಡುಪಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು.
ಆಧಾರ್ ಕಾರ್ಡ್ ಮಾಹಿತಿ ಆಧರಿಸಿ ಯೋಜನೆಯ ಫಲಾನುಭವಿಗಳನ್ನು ಗುರುತಿಸಲಾಗುವುದು. ಮನೆ ಮನೆಗೆ ವೃದ್ದಾಪ್ಯ ವೇತನದ ಕಾರ್ಡ್ ಬರೆದು ಪೋಸ್ಟ್ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಆದರಿಂದ ಇನ್ನುಮುಂದೆ ವಿವಿಧ ಇಲಾಖೆಗಳ ಕಚೇರಿಗೆ ವೃದ್ದಾಪ್ಯ ವೇತನ ಪಡೆಯಲು ಹಿರಿಯರು ಅಲೆದಾಡಬೇಕಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೀರಿ
ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೀರಿ ಎಂಬ ಹೊಸ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಪ್ರತಿ ತಿಂಗಳ ಮೂರನೇ ಶನಿವಾರದಂದು ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ಭೇಟಿ ಕೊಡಬೇಕು. ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಕಡ್ಡಾಯವಾಗಿ ಗ್ರಾಮಗಳಲ್ಲಿಯೇ ಇರಬೇಕು. ಹಳ್ಳಿಗಳ ಸಮಸ್ಯೆ, ಅಭಿವೃದ್ಧಿ ಕೆಲಸ, ಸಮಸ್ಯೆಗಳ ಬಗ್ಗೆ ಸ್ಥಳದಲ್ಲಿ ಪರಿಹಾರ ಮಾಡಬೇಕು.
ಮುಂದೆ ವಿಭಾಗಾಧಿಕಾರಿಗಳು, ಹಶಿಲ್ದಾರರಿಗೂ ಹಳ್ಳಿ ಪ್ರವಾಸ ಮಾಡೋದು ಕಡ್ಡಾಯ ಮಾಡಲಾಗುವುದು. ನಾನು ಕೂಡಾ ಹಳ್ಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತೇನೆ. ಆದಷ್ಟು ಬೇಗ ಈ ಕಾರ್ಯಕ್ರಮ ಜಾರಿಗೆ ತರುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ಕೊಟ್ಟಿದ್ದಾರೆ.