ಕೋವಿಡ್: ಸಂಕಷ್ಟದಲ್ಲಿ ಅನಾವರಣಗೊಂಡ ಸಚಿವರ ಪಕ್ಷಿ ಪ್ರೀತಿ!
ಬೆಂಗಳೂರು, ಏ. 08: ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್ ಇಡೀ ಜಗತ್ತಿಗೆ ಕಂಟಕ ತಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಮನುಷ್ಯರ ಜೀವಕ್ಕೆ ಮುಳುವಾಗಿರುವ ಕೋವಿಡ್ 19 ಭೂಮಿಯ ಮೇಲಿನ ಎಲ್ಲ ಜೀವಿಗಳಿಗೆ ಸಂಕಷ್ಟ ತಂದಿದೆ. ಅಮೆರಿಕಾ, ಸ್ಪೇನ್, ಇಟಲಿ ಸೇರಿದಂತೆ ಮುಂದುವರೆದ, ಆರ್ಥಿಕವಾಗಿ ಸದೃಢವಾಗಿರುವ ದೇಶಗಳ ಪರಿಸ್ಥಿತಿ ಬಡದೇಶಗಳ ಪರಿಸ್ಥಿತಿಗಳಿಗಿಂದ ಭಯಾನಕವಾಗಿದೆ. ಮುದಿನ ದಿನಗಳಲ್ಲಿ ಭಾರತದ ಪರಿಸ್ಥಿತಿಯ ಬಗ್ಗೆಯೂ ಆತಂಕವಿದೆ.
ಜನರನ್ನು ಕಾಪಾಡಿಕೊಳ್ಳುವುದೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳ ಗೋಳು ಕೇಳುವವರು ಇಲ್ಲದಂತಾಗಿದೆ. ಜಗತ್ತಿನಾದ್ಯಂತ 14 ಲಕ್ಷ ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ನಮ್ಮ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 4700 ಮೀರಿದೆ. ಇನ್ನು ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಎಲ್ಲ ಸರ್ಕಾರಗಳು ಮನುಷ್ಯರ ಜೀವ ಉಳಿಸಲು ಹೆಣಗಾಡುತ್ತಿವೆ. ಪ್ರಾಣಿ, ಪಕ್ಷಿಗಳ ಗೋಳು ಕೇಳುವವರಿಲ್ಲ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಪಕ್ಷಿಗಳ ಸಂಖ್ಯೆ ಕಡಿಮೆಯಾದರೆ ಅದು ಪರಿಸರದ ಅಸಮತೋಲನಕ್ಕೆ ಕಾರಣವಾಗಲಿದೆ. ಮನುಷ್ಯರ ಜೀವದೊಂದಿಗೆ ಪ್ರಾಣಿ, ಪಕ್ಷಗಳ ಜೀವವನ್ನು ಕಾಯಬೇಕಾಗಿದೆ.
ಮನುಷ್ಯರ ಆಹಾರವೇ ಈಗ ಪಕ್ಷಗಳಿಗೂ ಆಹಾರ
ಕೀಟ, ಹಣ್ಣು, ಹುಳ, ಹುಪ್ಪಟೆ, ಕಾಳು, ಮಿಡತೆ ತಿನ್ನುತ್ತಿದ್ದ ಪಕ್ಷಗಳು, ಈಗ ಬೆಂಗಳೂರಿನಂತರ ಮಹಾನಗರಗಳಲ್ಲಿ ಮನುಷ್ಯರ ಆಹಾರವನ್ನೇ ತಿನ್ನುವಂತಾಗಿದ್ದವು. ಬಹುತೇಕ ಪಕ್ಷಿ ಸಂಕುಲದ ಜೀವನ ಶೈಲಿ ಹಾಗೂ ಆಹಾರ ಬದಲಾಗಿದೆ. ಕೋಗಿಲೆ, ಹದ್ದು, ಗುಬ್ಬಚ್ಚಿ, ಕೋತಿಗಳು, ಕಾಗೆಗಳು, ಅಳಿಲು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳು ಮನುಷ್ಯರ ಆಹಾರವನ್ನೆ ತಿನ್ನುವಂತೆ ಅವುಗಳ ಜೀವನ ಶೈಲಿ ಬದಲಾಗಿತ್ತು. ಬೆಂಗಳೂರಿನಲ್ಲಿ ಹೆಚ್ಚಾಗಿರುವ ಪಾರಿವಾಳಗಳೂ ಕೂಡ ಅನ್ನವನ್ನು ತಿನ್ನುತ್ತಿದ್ದವು. ಆದರೆ ಇದೀಗ ಇಡೀ ಬೆಂಗಳೂರು ಸ್ತಬ್ಧವಾಗಿರುವುದು ಇವುಗಳಿಗೆಲ್ಲ ಆಹಾರದ ಕೊರತೆ ಉಂಟಾಗಿದೆ. ಜೊತೆಗೆ ಬೇಸಿಗೆ ಕಾಲ ಬೇರೆ. ಹೀಗಾಗಿ ಪಕ್ಷಗಳಿಗೆ ಆಹಾರ ಕೊಡದೇ ಇದ್ದರೆ ಅವುಗಳು ಬದುಕುವುದಿಲ್ಲ. ಅವು ಬದುಕದೇ ಇದ್ದರೆ ಮುಂದಿನ ದಿನಗಳಲ್ಲಿ ಪರಿಸರ ಅಮತೋಲನವಾಗುವುದರಲ್ಲಿ ಎರಡು ಮಾತಿಲ್ಲ.
ಪಕ್ಷಿಗಳಿಗೆ ಆಹಾರ; ಅನಾವರಣಗೊಂಡ ಸಚಿವರ ಮತ್ತೊಂದು ಮುಖ
ಲಾಕ್ಡೌನ್ ಹಿನ್ನೆಲೆಯಲ್ಲಿ ಆಹಾರ ಸಿಗದೇ ಪಕ್ಷಿಗಳು ಪರದಾಡುತ್ತಿರುವ ಬಗ್ಗೆ ಪಕ್ಷಿಪ್ರಿಯರು ಕಂದಾಯ ಸಚಿವ ಆರ್. ಅಶೋಕ್ ಗಮನಕ್ಕೆ ತಂದಿದ್ದರು. ಅವರ ಮನವಿಗೆ ಸ್ಪಂಧಿಸಿರುವ ಸಚಿವ ಆರ್. ಅಶೋಕ್ ಅವರು ಪಕ್ಷಿಗಳಿಗೆ ಆಹಾರ ಧಾನ್ಯ ಒದಗಿಸಿದ್ದಾರೆ. ಲಾಲ್ಭಾಗ್, ಕಬ್ಬನ್ ಪಾರ್ಕ್ಗಳಲ್ಲಿ ಪಕ್ಷಿಗಳಿಗಾಗಿ ಅಕ್ಕಿ, ಗೋಧಿ ವ್ಯವಸ್ಥೆ ಮಾಡಿದ್ದಾರೆ. ಪ್ರತಿನಿತ್ಯ ಹಕ್ಕಿಗಳಿಗೆ ಧಾನ್ಯಗಳನ್ನ ಹಾಕುವಂತೆ ಸೂಚನೆಯನ್ನು ಸಚಿವರಾದ ಆರ್. ಅಶೋಕ್ ಹಾಗೂ ಎಸ್.ಟಿ. ಸೋಮಶೇಖರ್ ಕೊಟ್ಟಿದ್ದಾರೆ.
ಕಬ್ಬನ್ ಪಾರ್ಕ್, ಲಾಲ್ಭಾಗ್ಗಳಲ್ಲಿ ಆಹಾರದ ಕೊರತೆ
ಲಾಲ್ಭಾಗ್, ಕಬ್ಬನ್ ಪಾರ್ಕ್, ರೇಸ್ಕೋರ್ಸ್ ರಸ್ತೆ ಸೇರಿದಂತೆ ಪಕ್ಷಿಗಳು ಹೆಚ್ಚಾಗಿ ಕಂಡು ಬರುವ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಂಚರಿಸಿ 21 ಆಹಾರ ಧಾನ್ಯಗಳ ಮೊಟೆಗಳನ್ನು ಸಚಿವರಾದ ಆರ್. ಅಶೋಕ್ ಹಾಗೂ ಎಸ್.ಟಿ. ಸೋಮಶೇಖರ್ ಹಂಚಿಕೆ ಮಾಡಿದ್ದರು. ಆಯಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಹಾಗೂ ಉದ್ಯಾನವನಗಳ ನಿರ್ವಹಣಾ ಸಿಬ್ಬಂದಿಗೆ ಪಕ್ಷಿಗಳಿಗೆ ಧವಸ, ಧಾನ್ಯ, ಕಾಳುಗಳನ್ನು ಹಂಚಿಕೆ ಮಾಡಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಸಚಿವ ಆರ್. ಅಶೋಕ್ ಅವರು ಪಕ್ಷಿಗಳಿಗೆ ಆಹಾರ ಒದಗಿಸುವ ಬಗ್ಗೆ ನಿಗಾ ವಹಿಸಿದ್ದಾರೆ.
ಬೆಂಗಳೂರಿನಲ್ಲಿ ಶೇಕಡಾ 50 ರಷ್ಟು ಕಡಿಮೆಯಾಗಿರುವ ಪಕ್ಷಿ ಪ್ರಬೇಧಗಳು
ನಮ್ಮ ರಾಜ್ಯದಲ್ಲಿ ಸುಮಾರು 540 ಪಕ್ಷಿಗಳ ಪ್ರಬೇಧಗಳಿವೆ ಎಂದು ಪಕ್ಷಿ ತಜ್ಞರು ಮಾಹಿತಿ ಕೊಡುತ್ತಾರೆ. ಅವುಗಳು ಹವಾಮಾನಕ್ಕೆ ತಕ್ಕಂತೆ ತಮ್ಮ ವಾಸಸ್ಥಾನವನ್ನು ಬದಲಿಸುತ್ತವೆ. ಬೆಂಗಳೂರಿನಲ್ಲಿ ಎರಡ್ಮೂರು ದಶಕಗಳ ಹಿಂದೆ ಸುಮಾರು 250ಕ್ಕೂ ಹೆಚ್ಚು ಪಕ್ಷಿಗಳ ಪ್ರಬೇಧಗಳಿದ್ದವು. ಆದರೆ ಕ್ರಮೇಣ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣದಿಂದ ಶೇಕಡಾ 40 ರಿಂದ 50 ರಷ್ಟು ಕಡಿಮೆಯಾಗಿ ಉಳಿದಿರೋದು ಕೇವಲ 50-60 ಪ್ರಬೇಧಗಳು ಮಾತ್ರ ಎಂಬ ಮಾಹಿತಿಯಿದೆ.
ಇದೀಗ ಲಾಕ್ಡೌನ್ನಿಂದಾಗಿ ಬೆಂಗಳೂರಿನಲ್ಲಿ ಪರಿಸರ ಮಾಲಿನ್ಯ ಬಹಳಷ್ಟು ಕಡಿಮೆಯಾಗಿದೆ. ಆದರೆ ಪಕ್ಷಗಳಿಗೆ ಆಹಾರ ಸಿಗದೇ ಸಾಯುವ ಸ್ಥಿತಿ ತಲುಪಿದ್ದವು. ಇದೀಗ ಮಾಜಿ ಡಿಸಿಎಂ ಆರ್. ಅಶೋಕ್ ಅವರು ಸಕಾಲದಲ್ಲಿ ಪಕ್ಷಿಗಳಿಗೆ ಆಹಾರ ಒದಗಿಸಿದ್ದಾರೆ. ಆದರೆ ಲಾಕ್ಡೌನ್ ಇನ್ನು ಎಷ್ಟು ದಿನ ಮುಂದುವರೆಯಲಿದೆ ಎಂಬುದು ಗೊತ್ತಿಲ್ಲ. ಹೀಗಾಗಿ ಪ್ರಾಣಿ-ಪಕ್ಷಿಗಳಿಗೆ ಆಹಾರ ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂಬುದು ಪರಿಸರ ತಜ್ಞರ ಸಲಹೆ. ಕೊರೊನಾ ಹಾವಳಿ ಮುಗಿದ ಬಳಿಕ ಬೆಂಗಳೂರಿನಲ್ಲಿ ಪಕ್ಷಿಗಳು ಉಳಿದು ಪರಿಸರ ಸಮತೋಲನ ಇರಬೇಕಾದರೆ ಸಕಾರ ತಕ್ಷಣ ಮನುಷ್ಯರಂತೆ ಪ್ರಾಣಿ, ಪಕ್ಷಿಗಳ ಆರೋಗ್ಯ ಹಾಗೂ ಆಹಾರದ ಕಡೆಗೆ ಗಮನ ಕೊಡಬೇಕಾದ ಅಗತ್ಯವಿದೆ.