ಮಸೀದಿಯಲ್ಲಿ ನಮಾಜ್ ಇಲ್ಲ, ಮುಸ್ಲಿಂ ಮುಖಂಡರು ಒಪ್ಪಿಗೆ: ಆರ್ ಅಶೋಕ
ಬೆಂಗಳೂರು, ಮಾರ್ಚ್ 26: ಕೊರೊನಾ ವೈರಸ್ ಭೀತಿ ಹೆಚ್ಚಿರುವ ಕಾರಣ ಮಸೀದಿಯಲ್ಲಿ ನಮಾಜ್ ಮಾಡಬಾರದು ಎಂದು ಸರ್ಕಾರ ಆದೇಶಿಸಿದೆ. ಆದರೂ ಕೆಲವು ಕಡೆ ಜನರು ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದಾರೆ. ಇಂದು ಬೆಳಗಾವಿಯ ಎರಡು ಮಸೀದಿಯಲ್ಲಿ ನಮಾಜ್ ಮಾಡುತ್ತಿರುವುದು ಕಂಡು ಬಂದಿದ್ದು, ಲಾಕ್ಡೌನ್ ಉಲ್ಲಂಘಿಸಿದ್ದಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಇನ್ನು ಶುಕ್ರವಾರ ಮಸೀದಿಯಲ್ಲಿ ಸಾಮೂಹಿಕ ನಮಾಜ್ ಮಾಡಲು ಅವಕಾಶ ಕೊಡಬೇಕು ಎಂದು ವಿನಂತಿಸಿ ಮುಸ್ಲಿಂ ಮುಖಂಡರು, ಕಂದಾಯ ಸಚಿವ ಆರ್ ಅಶೋಕ್ ಜೊತೆ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಅಶೋಕ್ ''ನಾಳೆಯಿಂದ ಮಸೀದಿಯಲ್ಲಿ ನಮಾಜ್ ಮಾಡಲ್ಲ, ಮನೆಯಲ್ಲಿಯೇ ನಮಾಜ್ ಮಾಡುತ್ತೇವೆ ಎಂದು ಮುಸ್ಲಿಂ ಮುಖಂಡರು ಒಪ್ಪಿದ್ದಾರೆ'' ಎಂದು ಹೇಳಿದ್ದಾರೆ.
ಲಾಕ್ಡೌನ್ ಉಲ್ಲಂಘಿಸಿ ನಮಾಜ್ ಮಾಡ್ತಿದ್ದವರ ಮೇಲೆ ಲಾಠಿ ಚಾರ್ಜ್
'ನಾಳೆ ಸಾಮೂಹಿಕ ನಮಾಜ್ಗೆ ಅವಕಾಶ ನೀಡುವ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಬೆಂಗಳೂರಿನಲ್ಲಿರುವ ಎಲ್ಲಾ ಮಸೀದಿ ಗಳ ಮುಖಂಡರು ಸಭೆಯಲ್ಲಿ ಬಾಗಿಯಾಗಿದ್ದರು. ನಾಳೆ ಯಾರು ಕೂಡಾ ಮಸೀದಿಗಳಲ್ಲಿ ನಮಾಜ್ ಮಾಡೋದಿಲ್ಲ, ಎಲ್ಲರೂ ಮನೆಯಲ್ಲಿಯೇ ನಮಾಜ್ ಮಾಡಿಕೊಳ್ತೇವೆ ಅಂತ ತಿಳಿಸಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
'ಈಗಾಗಲೇ ವಾಟ್ಸಾಪ್ ಮುಖಾಂತರ ಮೆಸೆಜ್ ಕಳಿಸಿ ಮನೆಯಲ್ಲಿಯೇ ನಮಾಜ್ ಮಾಡೋಕೆ ಮನವಿ ಮಾಡ್ತಿದ್ದಾರೆ. ಈ ದೇಶ ಉಳೀಬೇಕು, ಬೆಂಗಳೂರು ಉಳೀಬೇಕು ಅಂದ್ರೆ ಸರ್ಕಾರ ಏನೇನು ಕ್ರಮ ಕೈಗೊಳ್ಳುತ್ತೋ ಅದರ ಜೊತೆ ನಾವು ಇರ್ತೇವೆ. ನಮ್ಮೆಲ್ಲಾ ಸಹಕಾರವನ್ನ ಸರ್ಕಾರಕ್ಕೆ ಕೊಡ್ತೀವಿ ಎಂದಿದ್ದಾರೆ. ಕೊರೊನಾವನ್ನ ಹೋಗಲಾಡಿಸಲು ಸೈನಿಕರಂತೆ ಹೋರಾಟ ನಡೆಸ್ತೀವಿ ಎಂದಿದ್ದಾರೆ. ಅದ್ರಿಂದ ನಾವು ಎಲ್ಲಾ ಮುಖಂಡರನ್ನ ಸರ್ಕಾರದಿಂದ ಗೌರವಿಸುತ್ತೇವೆ ಸರ್ಕಾರವೂ ಕೂಡಾ ಎಲ್ಲಾ ಧರ್ಮದವರ ಪರವಾಗಿದೆ' ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಗೃಹ ಸಚಿವ ಬೊಮ್ಮಾಯಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್, ಗೃಹಸಚಿವ ಬಸವರಾಜ್ ಬೊಮ್ಮಾಯಿ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ನಗರದ ಮುಸ್ಲಿಂ ಸಮುದಾಯದ ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು.