ಭಾನುವಾರ ಬಂದ್ ಹಿಂದೆ ಕಾಂಗ್ರೆಸ್ 'ಕೈ'ವಾಡ: ಅಶೋಕ್ ಆರೋಪ
ಬೆಂಗಳೂರು, ಜನವರಿ 31 : ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್ ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ಪ್ರಾಯೋಜಿತ ಬಂದ್ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ದೂರಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನದಿ ನೀರಿನ ವಿವಾದ ಇತ್ಯರ್ಥಕ್ಕಾಗಿ ಜನವರಿ 25 ರಂದು ಬಂದ್ ಗೆ ಕರೆ ನೀಡಲಾಗಿತ್ತು. ಅಂದು ಬೆಂಗಳೂರು ಕೂಡ ಬಂದ್ ಆಗಿತ್ತು, ಆದರೆ ಇದೀಗ ಮತ್ತೆ ಕೇವಲ ಬೆಂಗಳೂರನ್ನು ಮಾತ್ರ ಏಕೆ ಬಂದ್ ಮಾಡುತ್ತಿದ್ದಾರೆ.
ಫೆ.4ರ ಬೆಂಗಳೂರು ಬಂದ್ಗೆ ಅನುಮತಿ ಇಲ್ಲ: ರಾಮಲಿಂಗಾ ರೆಡ್ಡಿ
ಕರ್ನಾಟಕದ ಇತಿಹಾಸದಲ್ಲಿ ರಜಾದಿನದಲ್ಲಿ ಬಂದ್ ಕರೆದಿರುವುದನ್ನು ನಾನು ನೋಡಿಲ್ಲ, ಫೆ.4 ರಂದು ಭಾನುವಾರ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭವು ಅರಮನೆ ಮೈದಾನದಲ್ಲಿ ನಡೆಯಲಿದೆ. ಅದರ ಹಿನ್ನೆಲೆಯಲ್ಲಿ ಪ್ರಧಾನಿಯವರು ನಗರಕ್ಕೆ ಬರುತ್ತಿದ್ದಾರೆ. ಮೋದಿ ಬರುವುದನ್ನು ತಡೆಯಲು ಕಾಂಗ್ರೆಸ್ ಸರ್ಕಾರವು ಕನ್ನಡ ಪರ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಒಂದೊಮ್ಮೆ ಫೆ.4 ರಂದು ಬೆಂಗಳೂರು ಬಂದ್ ಮಾಡಿದರೆ ಬಿಜೆಪಿ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ, ಕಾಂಗ್ರೆಸ್ ನವರು ಸರ್ಪಕೋಟೆಯನ್ನು ಕಟ್ಟಿದರೆ ಅದನ್ನು ಧೂಳಿಪಟ ಮಾಡಿ ಕಾರ್ಯಕ್ರಮವನ್ನು ಯಶಸ್ವಿ ಮಾಡುತ್ತೇವೆ ಎಂದರು.