ಟರ್ಫ್ ಕ್ಲಬ್ ಮಾಜಿ ಸಿಇಓ ಸೇರಿದಂತೆ ಐವರಿಗೆ ನ್ಯಾಯಾಲಯದಿಂದ ಕ್ಲೀನ್ ಚಿಟ್ !
ಬೆಂಗಳೂರು, ಮಾರ್ಚ್ 27: ಕ್ವೀನ್ ಲತೀಫಾಗೆ ಉದ್ದೀಪನಾ ಮದ್ದು ನೀಡಿದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳನ್ನು ಆರೋಪದಿಂದ ಮುಕ್ತಗೊಳಿಸಿ 1 ನೇ ಎಸಿಎಂಎಂ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕ್ವೀನ್ ಲತೀಫಾಗೆ ಉದ್ದೀಪನಾ ಮದ್ದು ನೀಡಿದ ಆರೋಪ ಎದುರಿಸುತ್ತಿದ್ದ ಬೆಂಗಳೂರು ಟರ್ಫ್ ಕ್ಲಬ್ ಮಾಜಿ ಸಿಇಓ ನಿರ್ಮಲ್ ಪ್ರಸಾದ್ , ಪ್ರದ್ಯುಮ್ಯಾ ಸಿಂಗ್ ಮತ್ತು ವೈದ್ಯ ಎಚ್.ಸಿ. ಮಹೇಶ್ ಸೇರಿದಂತೆ ಐವರು ಆರೋಪಿಗಳನ್ನು ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.
ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್ ಭಟ್ ಅವರು ಐವರು ಆರೋಪಿಗಳನ್ನು ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಇದರಿಂದ ಬೆಂಗಳೂರು ಟರ್ಫ್ ಕ್ಲಬ್ ನ ಮಾಜಿ ಸಿಇಓ ನಿರ್ಮಲ್ ಪ್ರಸಾದ್, ಪ್ರದುಮ್ನಾ ಸಿಂಗ್, ವಿವೇಕ್ ಉದಯ್ಕರ್, ಕುದುರೆ ಮಾಲೀಕ ಅರ್ಜುನ್ ಸಜನಾನಿ, ವೈದ್ಯ ಡಾ. ಎಚ್.ಸಿ. ಮಹೇಶ್ ಕ್ವೀನ್ ಲತೀಪಾ ಪ್ರಕರಣದಲ್ಲಿ ಆರೋಪ ಮುಕ್ತರಾಗಿದ್ದಾರೆ. ಬೆಂಗಳೂರು ಟರ್ಫ್ ಕ್ಲಬ್ ಮಾಜಿ ಸಿಇಓ ನಿರ್ಮಲ್ ಪ್ರಸಾದ್ ಹಾಗೂ ಪ್ರದ್ಯುಮ್ ಸಿಂಗ್ ಪರ ಹಿರಿಯ ವಕೀಲರಾದ ನಿತಿನ್ ಆರ್. ವಾದ ಮಂಡಿಸಿದ್ದರು. ಪಶು ವೈದ್ಯ ಡಾ. ಎಚ್.ಸಿ. ಮಹೇಶ್ ಪರ ಹಿರಿಯ ವಕೀಲ ಬಿ. ಸಿದ್ದೇಶ್ವರ ವಾದ ಮಂಡಿಸಿದ್ದರು.
ಕ್ವೀನ್ ಲತೀಫಾಗೆ ನೀಡಿದ್ದ ಪ್ರೊಕೈನ್ ಡ್ರಗ್ ರೇಸ್ ಗೆಲ್ಲಲು ಕೊಟ್ಟಿದ್ದ ಔಷಧವಲ್ಲ. ಅನಾರೋಗ್ಯ ಸ್ಥಿತಿಯಲ್ಲಿ ಪ್ರಾಣಿಗಳಿಗೆ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ನೀಡುವ ಔಷಧವಾಗಿತ್ತು. ಈ ಪ್ರೊಕೈನ್ ಔಷಧವನ್ನು ಸಾಮಾನ್ಯವಾಗಿ ಪ್ರಾಣಿಗಳಿಗೆ ಹಾಗೂ ಜನರಿಗೂ ಸಹ ನೀಡಲಾಗುತ್ತದೆ ಎಂದು ತಜ್ಞರು ನೀಡಿದ್ದ ವರದಿ ಆಧಾರವಾಗಿಟ್ಟುಕೊಂಡು ವಕೀಲರಾದ ನಿತಿನ್ ಆರ್. ಮತ್ತು ಬಿ. ಸಿದ್ದೇಶ್ವರ ವಾದ ಮಂಡಿಸಿದ್ದರು. ಇಬ್ಬರ ವಾದವನ್ನು ಪರಿಗಣಿಸಿದ ನ್ಯಾಯಾಲಯ, ರೇಸ್ ನಲ್ಲಿ ಗೆದ್ದಿದ್ದ ಕುದುರೆ ಕ್ವೀನ್ ಲತೀಫಾಗೆ ಉದ್ದೀಪನ ಮದ್ದು ನೀಡಿದ ಪ್ರಕರಣದಲ್ಲಿ ನಿರ್ಮಲ್ ಪ್ರಸಾದ್ ಮತ್ತು ವೈದ್ಯ ಎಚ್.ಸಿ. ಮಹೇಶ್ ಅವರನ್ನು ಆರೋಪ ಮುಕ್ತಗೊಳಿಸಿ ತೀರ್ಪು ನಿಡಿದೆ. ನಿರ್ಮಲ್ ಪ್ರಸಾದ್ ಪರ ವಕೀಲ ನಿತಿನ್ ಆರ್. ವಾದ ಮಂಡಿಸಿದ್ದರು. ವೈದ್ಯ ಮಹೇಶ್ ಪರವಾಗಿ ವಕೀಲರಾದ ಬಿ. ಸಿದ್ದೇಶ್ವರ ವಾದ ಮಂಡಿಸಿದ್ದರು. ಈ ಪ್ರಕರಣದ ಇತರೆ ಮೂವರು ಆರೋಪಿಗಳು ಕೂಡ ಆರೋಪ ಮುಕ್ತರಾಗಿದ್ದಾರೆ. ಕುದುರೆ ತರಬೇತಿದಾರ ನೀಲ್ ದರಶಹಾ ಪ್ರಕರಣ ಹೈಕೋರ್ಟ್ ನಲ್ಲಿ ಅರ್ಜಿ ಬಾಕಿ ಇರುವ ಕಾರಣ ಅವರ ಪ್ರಕರಣವಷ್ಟೇ ವಿಚಾರಣೆ ಬಾಕಿ ಇದೆ.
ಏನಿದು ಪ್ರಕರಣ : 2017 ರಲ್ಲಿ ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಆಯೋಜಿಸಿದ್ದ ಇನ್ವಿಟೇಷನ್ ಕಪ್ ಡೇ ರೇಸ್ ನಲ್ಲಿ ಕ್ವೀನ್ ಲತೀಫಾ ಜಯಗಳಿಸಿತ್ತು. ಸಾಮಾನ್ಯವಾಗಿ ರೇಸ್ ಜಲ್ಲಿ ಜಯಗಳಿಸುವ ಕುದುರೆಯ ಮೂತ್ರ ಸಂಗ್ರಹಿಸಿ ದೆಹಲಿಯಲ್ಲಿರುವ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ. ಈ ವೇಳೆ ಕ್ವೀನ್ ಲತೀಫಾ ಗೆ ಪ್ರೊಕೈನ್ ಎಂಬ ಡ್ರಗ್ ನೀಡಲಾಗಿತ್ತು ಎಂಬ ಸಂಗತಿ ಡೋಪಿಂಗ್ ಟೆಸ್ಟ್ ನಲ್ಲಿ ಬಯಲಾಗಿತ್ತು. ಈ ವರದಿ ಆಧರಸಿ ಅಂದಿನ ಟರ್ಫ್ ಕ್ಲಬ್ ಸಿಇಓ ನಿರ್ಮಲ್ ಪ್ರಸಾದ್ ಸೇರಿದಂತೆ ಹಲವರ ವಿರುದ್ಧ ದೂರು ನೀಡಲಾಗಿತ್ತು. ದೂರನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಕ್ವೀನ್ ಲತೀಫಾಗೆ ಉದ್ದೀಪನ ಮದ್ದು ನೀಡಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬೆಂಗಳೂರು ಟರ್ಫ್ ಕ್ಲಬ್ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು.
ಪ್ರಕರಣವನ್ನು ತನಿಖೆ ನಡೆಸಿದ್ದ ಸಿಐಡಿ ಡಿವೈಏಸ್ಪಿ ನಂಜುಂಡೇಗೌಡ ಅವರು ಆರು ಮಂದಿ ವಿರುದ್ದ ಸುಮಾರು 600 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬೆಂಗಳೂರು ಟರ್ಫ್ ಕ್ಲಬ್ ಅಂದಿನ ಸಿಇಓ ನಿರ್ಮಲ್ ಪ್ರಸಾದ್ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಿದ್ದರು. ಉಳಿದಂತೆ ಆರು ಮಂದಿಯ ವಿರುದ್ಧ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕುದುರೆ ಲತೀಫಾಗೆ ಪ್ರೊಕೈನ್ ಎಂಬ ಮದ್ದು ನೀಡಲಾಗಿತ್ತು ಎಂಬುದನ್ನು ಸಿಐಡಿ ಪೊಲೀಸರು ತನಿಖೆಯಲ್ಲಿ ಉಲ್ಲೇಖಿಸಿದ್ದರು.
ಕ್ವೀನ್ ಲತೀಫಾಗೆ ನೀಡಿದ್ದ ಪ್ರೊಕೈನ್ ಡ್ರಗ್ ಬಳಕೆ ಕುರಿತು ಸ್ವತಂತ್ರ್ ತಜ್ಞರ ವರದಿ ಉಲ್ಲೇಖಿಸಿ ಹಿರಿಯ ವಕೀಲರಾದ ನಿತಿನ್ ಆರ್. ಮತ್ತು ಸಿದ್ದೇಶ್ವರ್ ವಾದ ಮಂಡಿಸಿದ್ದರು. ಪ್ರೊಕೈನ್ ಡ್ರಗ್ ಅದೊಂದು ರೋಗ ನಿರೋಧಕ ಶಕ್ತಿಯ ಔಷಧ. ರೇಸ್ ಗೆಲ್ಲುವ ಸಲುವಾಗಿ ಕ್ವೀನ್ ಲತೀಫಾಗೆ ನೀಡಿಲ್ಲ. ಅನಾರೋಗ್ಯಕ್ಕೆ ಒಳಗಾಗಿದ್ದ ಲತೀಫಾ ಆರೋಗ್ಯದಲ್ಲಿ ಚೇತರಿಸಿಕೊಳ್ಳಲು ನೀಡಿದ್ದ ಡ್ರಗ್. ಇದನ್ನು ಸಾಮಾನ್ಯವಾಗಿ ಜನರಿಗೂ ಕೂಡ ನೀಡುತ್ತಾರೆ ಎಂಬ ವಾದವನ್ನು ಮಂಡಿಸಿದ್ದರು. ಈ ಕುರಿತು ಇಬ್ಬರು ಸ್ವತಂತ್ರ್ಯ ತಜ್ಞರು ನೀಡಿದ್ದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ವಾದವನ್ನು ಮನ್ನಿಸಿದ ನ್ಯಾಯಾಲಯ ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದೆ.
Recommended Video
ಷಡ್ಯಂತ್ರ ಆರೋಪ : ಬೆಂಗಳೂರು ಟರ್ಫ್ ಕ್ಲಬ್ ನಿಂದ ನೂರಾರು ಕೋಟಿ ರೂ. ತೆರಿಗೆ ಸರ್ಕಾರಕ್ಕೆ ನೀಡಲಾಗುತ್ತದೆ. ಆದರೆ, ಕ್ವೀನ್ ಲತೀಫಾ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕ್ಲಬ್ ನ್ನು ಮುಚ್ಚಲಾಗಿತ್ತು. ಕ್ಲಬ್ ಆಡಳಿತ ಮಂಡಳಿಯ ಆಂತರಿಕ ಕಚ್ಚಾಟವೆ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಕ್ವೀನ್ ಲತೀಫಾ ಗೆ ಉದ್ದೀಪನಾ ಮದ್ದು ನೀಡಿದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದವರು ಆರೋಪದಿಂದ ಮುಕ್ತರಾಗಿದ್ದಾರೆ. ವಿಚಿತ್ರವೆಂದರೆ, ಕ್ವೀನ್ ಲತೀಫಾಗೆ ಉದ್ದೀಪನಾ ಮದ್ದು ನೀಡಿದ ಆರೋಪ ಕೇಳಿ ಬಂದದಿದ್ದರಿಂದ ಬೆಂಗಳೂರು ಟರ್ಪ್ ಕ್ಲಬ್ ಗೆ ಸುಮಾರು 40 ಕೋಟಿ ರೂ. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.