ಎಚ್ಎಸ್ ಆರ್ ಲೇಔಟ್ ಪಬ್ ನಲ್ಲಿ ಗಲಾಟೆ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ!
ಬೆಂಗಳೂರು, ಅ. 22: ಪಬ್ನಲ್ಲಿ ಹುಟ್ಟುಹಬ್ಬದ ಆಚರಣೆ ವೇಳೆ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಎಚ್ಎಸ್ಆರ್ ಲೇಔಟ್ನ ಪಬ್ನಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ನಡೆದ ಈ ಗಲಾಟೆಯಲ್ಲಿ ಸೂರ್ಯಕಾಂತ ಎಂಬ ಯುವಕ ಹಲ್ಲೆಗೆ ಒಳಗಾಗಿದ್ದಾನೆ. ಉದ್ಯಮಿ ರಾಜೀವ್, ರಾಜೇಶ್ ಮತ್ತು ಯುವರಾಜ್ ಎಂಬುವರು ಹಲ್ಲೆ ಮಾಡಿದ್ದಾರೆ. ಎಂಬ ಆರೋಪ ಕೇಳಿ ಬಂದಿದೆ. ಡಾನ್ಸ್ ಮಾಡುವ ವೇಳೆ ಗಲಾಟೆ ನಡೆದಿದ್ದು ಒಬ್ಬರೊನ್ನಬ್ಬರು ತಳ್ಳಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಜಗಳ ಉಂಟಾಗಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಎಚ್ಎಸ್ಆರ್ ಲೇಔಟ್ ನಲ್ಲಿರುವ ಶಿಫ್ಟ್ ಕ್ಲಬ್ನಲ್ಲಿ ಈ ಘಟನೆ ನಡೆದಿದ್ದು ಎಚ್ಎಸ್ಆರ್ ಬಡಾವಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಗುರುವಾರ ರಾತ್ರಿ ಹುಟ್ಟುಹಬ್ಬದ ಪಾರ್ಟಿ ನಿಮಿತ್ತ ಉದ್ಯಮಿ ರಾಹುಲ್ ರಾಜೀವ್, ರಾಜೇಶ್, ಯುವರಾಜ್ ಸೇರಿದ್ದರು. ಶಿಫ್ಟ್ ಪಬ್ ನಲ್ಲಿ ಪಾರ್ಟಿ ನಡೆಯುವ ವೇಳೆ ಡಾನ್ಸ್ ಮಾಡಲಾಗುತ್ತಿತ್ತು. ಸೂರ್ಯಕಾಂತ್ ಎಂಬವನು ಡಾನ್ಸ್ ಮಾಡುವ ವೇಳೆ ಒಬ್ಬರಿಗೊಬ್ಬರು ತಳ್ಳಾಡಿಕೊಂಡಿದ್ದಾರೆ. ಈ ವೇಳೆ ಸೂರ್ಯಕಾಂತ್ ಜತೆ ಜಗಳ ತೆಗೆದಿದ್ದು, ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸೂರ್ಯಕಾಂತ್ ಎಂಬುವನ ಮೇಲೆ ಹಲ್ಲೆ ನಡೆದಿದೆ. ಮಾರಣಾಂತಿಕ ಹಲ್ಲೆಗೆ ಒಳಗಾದ ಸೂರ್ಯಕಾಂತ್ ಪಬ್ ನಿಂದ ಹೊರ ಬಂದು ನಿಂತರೂ ನಡು ರಸ್ತೆಯಲ್ಲಿಯೇ ಹಲ್ಲೆ ಮಾಡಿದ್ದು, ಅದರ ದೃಶ್ಯಗಳು ವೈರಲ್ ಆಗಿವೆ.
ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಚ್ಎಸ್ಆರ್ ಲೇಔಟ್ ಪೊಲೀಸರು, ಉದ್ಯಮಿ ರಾಹುಲ್ ರಾಜೀವ್, ರಾಜೇಶ್ ಹಾಗೂ ಯುವರಾಜ್ನನ್ನು ಬಂಧಿಸಿದ್ದಾರೆ. ಗಾಯಾಳು ಸೂರ್ಯಕಾಂತ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯಕೀಯ ವರದಿ ಆಧರಿಸಿ ದೂರು ನೀಡಿದ್ದಾರೆ. ಎಚ್ಎಸ್ಆರ್ ಬಡಾವಣೆ ಪೊಲೀಸರು ಉದ್ಯಮಿ ರಾಹುಲ್ ರಾಜೀವ್ ಪರ ನಿಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾರಣಾಂತಿಕ ಹಲ್ಲೆ ಮಾಡಿದರೂ ಕೊಲೆಯತ್ನ ಪ್ರಕರಣ ದಾಖಲಿಸದೇ ಆರೋಪಿಗಳನ್ನು ಬಚಾವ್ ಮಾಡಲು ಅನುಕೂಲ ವಾಗುವಂತೆ ಸಡಿಲ ಸೆಕ್ಷನ್ ಅಡಿ ಕೇಸು ದಾಖಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಜೀಯತ್ನ: ಸೂರ್ಯಕಾಂತ್ ಮೇಲೆ ಹಲ್ಲೆ ಘಟನೆ ಸಂಬಂಧ ರಾಜೀ ಮಾಡಲು ಕಾಂಗ್ರೆಸ್ ನಾಯಕನ ಪುತ್ರ ಮಹಮದ್ ನಲಪಾಡ್ ಯತ್ನಿಸಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ಹಲ್ಲೆಗೆ ಒಳಗಾದ ಯುವಕನ ಜತೆ ಮಾತನಾಡಿ ರಾಜೀಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ವಿಷಯ ಹೊರಗೆ ಬರುತ್ತಿದ್ದಂತೆ ಇದೀಗ ಕೊಲೆ ಯತ್ನ ಪ್ರಕರಣ ದಾಖಲಿಸಿ ಆರೋಪಿ ಉದ್ಯಮಿ ರಾಹುಲ್ ರಾಜೀವ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕಟ್ಟುನಿಟ್ಟಿನ ಕ್ರಮ:
ಎಚ್ಎಸ್ಆರ್ ಬಡಾವಣೆಯ ಶಿಫ್ಟ್ ಪಬ್ ನಲ್ಲಿ ನಡೆದ ಹಲ್ಲೆ ಸಂಬಂಧ ಗಾಯಾಳು ನೀಡಿದ ದೂರನ್ನು ದಾಖಲಿಸಿಕೊಂಡಿದ್ದೇವೆ. ವೈದ್ಯಕೀಯ ವರದಿ ಆಧರಿಸಿ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಉದ್ಯಮಿ ಸೇರಿದಂತೆ ಮೂವರನ್ನು ಬಂಧಿಸಿದ್ದೇವೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಮೇಯವೇ ಇಲ್ಲ. ಹಲ್ಲೆ ಮಾಡಿದ ಮೂವರನ್ನು ಬಂಧಿಸಿದ್ದೇವೆ. ಪಬ್ ನಲ್ಲಿ ಊಟ ಮಾಡುವಾಗ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಅದು ತಾರಕಕ್ಕೇರಿ ತಳ್ಳಾಟ ನಡೆದಿದ್ದು ಬಳಿಕ ಹಲ್ಲೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಡಿಸಿಪಿ ಶ್ರೀನಾಥ್ ಮಹದೇವ ಜೋಷಿ ಅವರು ಸ್ಪಷ್ಟನೆ ನೀಡಿದ್ದಾರೆ.
ಐಶರಾಮಿ ಪಬ್ ಗಲಾಟೆಗಳು ಮೊದಲೇನಲ್ಲ:
Recommended Video
ಉದ್ಯಮಿಯ ಪುತ್ರ ವಿದ್ವತ್ ಮೇಲೆ ಪಬ್ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದ ಘಟನೆ ರಾಜ್ಯದಲ್ಲಿ ದೊಡ್ಡ ಸಂಚಲನ ಹುಟ್ಟು ಹಾಕಿತ್ತು. ಮಹಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಯುಬಿ ಸಿಟಿಯಲ್ಲಿ ನಡೆದಿದ್ದ ಗಲಾಟೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಕೋಮಾಗೆ ತೆರಳಿದ್ದರು. ದೇಹದ ಮೂಳೆಗಳು ಮುರಿದಿದ್ದವು. ಈ ಪ್ರಕರಣದಲ್ಲಿ ಮಹಮದ್ ನಲಪಾಡ್ ಸೇರಿದಂತೆ ಹಲವರು ಬಂಧನಕ್ಕೆ ಒಳಗಾಗಿದ್ದರು. ಇದು ರಾಜ್ಯದಲ್ಲಿ ದೊಡ್ಡ ಸಂಚಲನ ಹುಟ್ಟು ಹಾಕಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಯುವ ಕಾಂಗ್ರೆಸ್ ಮುಖಂಡನಿಗೆ ಜಾಮೀನು ಕೂಡ ಸಿಕ್ಕಿರಲಿಲ್ಲ.