ಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆಯ ಲೋಕಾರ್ಪಣೆ
ಬೆಂಗಳೂರು, ಜನವರಿ 21: ಶ್ರೀನಿವಾಸ ಉತ್ಸವ ಬಳಗ (ದಾಸ ಸಾಹಿತ್ಯ ಪ್ರಚಾರ ಮಾಧ್ಯಮ) ಹಾಗೂ ಬೆಂಗಳೂರಿನ ಉತ್ತರಾದಿಮಠದ ವತಿಯಿಂದ ಬಸವನಗುಡಿ ಉತ್ತರಾದಿಮಠದ ಆವರಣದಲ್ಲಿ ಕರ್ನಾಟಕ ಸಂಗೀತ ಪಿತಾಮಹಾ ದಾಸಶ್ರೇಷ್ಠ ಶ್ರೀ ಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆ ಲೋಕಾರ್ಪಣೆ ಮತ್ತು ಪುರಂದರ ಸಪ್ತರಾತ್ರೋತ್ಸವ ಕಾರ್ಯಕ್ರಮಕ್ಕೆ ಉತ್ತರಾದಿ ಮಠಾಧೀಶ ಪರಮಪೂಜ್ಯ ಶ್ರೀಸತ್ಯಾತ್ಮತೀರ್ಥ ಶ್ರೀಪಾದರ ಚಾಲನೆ ನೀಡಿದರು.
ಪುರಂದರದಾಸರು ಐದೂವರೆ ಶತಮಾನಗಳ ಹಿಂದೆ ಜೀವಿಸಿದ್ದರೂ "ರೊಕ್ಕ ಎರಡಕ್ಕೂ ದುಃಖ ಕಾರಣಕ್ಕೆ; ನಗೆಯು ಬರುತಿದೆ; ಡೊಂಕು ಬಾಲದ ನಾಯಕರೆ; ಆಚಾರವಿಲ್ಲದ ನಾಲಗೆ; ಆಡಿಸಿದಳು ಯಶೋದ; ಆದದ್ದೆಲ್ಲ ಒಳಿತೇ ಆಯಿತು; ಆನೆ ಬಂತಾನೆ; ಆವ ಕುಲವಾದರೇನು?; ಇಕ್ಕಲಾರದ ಕೈ ಎಂಜಲು; ಭಾಗ್ಯದಾ ಲಕ್ಷ್ಮೀಬಾರಮ್ಮ; ಈಸಬೇಕು ಇದ್ದು ಜೈಸಬೇಕು; ಉದರ ವೈರಾಗ್ಯವಿದು; ಗಿಳಿಯು ಪಂಜರದೊಳಿಲ್ಲ; ಕಲಿಯುಗದಲಿ ಹರಿನಾಮವ ನೆನೆದರೆ; ಕಲ್ಲು ಸಕ್ಕರೆ ಕೊಳ್ಳಿರೋ; ಕೃಷ್ಣಮೂರ್ತಿ ಕಣ್ಣು ಮುಂದೆ ಬಂದು ನಿಂತಿದಂತಿದೆ; ಧರ್ಮವೆ ಜಯವೆಂಬ ದಿವ್ಯ ಮಂತ್ರ" ಇತ್ಯಾದಿ ಪುರಂದರ ದಾಸರ ನೂರಾರು ಕೀರ್ತನೆಗಳ ಸಾಲುಗಳು ಕನ್ನಡಿಗರ ನಾಲಗೆಯ ಮೇಲೆ ಇಂದಿಗೂ ನಲಿದಾಡುತ್ತಿವೆ.
ದಾಸರೆಂದರೆ ಪುರಂದರ ದಾಸರಯ್ಯ
'ದಾಸರೆಂದರೆ ಪುರಂದರ ದಾಸರಯ್ಯ ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ' ಎಂಬ ಪ್ರಶಂಸೆಯನ್ನು ತಮ್ಮ ಗುರುಗಳಾದ ಶ್ರೀವ್ಯಾಸರಾಜರಿಂದ ಪಡೆದುಕೊಂಡ ಪುರಂದರದಾಸರು ಕೇವಲ ಹರಿ ಭಕ್ತರಾಗಿರಲಿಲ್ಲ. 'ಹರಿಭಕ್ತಿ'-ಕೃಷ್ಣನ್ನ ಸೂಸಿ ಪೂಜಿಸುವ ಶ್ರದ್ಧೆಯೊಡನೆ ತತ್ತ್ವ ಶಾಸ್ತ್ರದಲ್ಲಿ ಆಳವಾದ ವಿದ್ವತ್ತು, ಸಮಾಜೋದ್ಧಾರದ ಬಗ್ಗೆ ಅಪಾರ ಕಾಳಜಿ, ಸಂಗೀತಶಾಸ್ತ್ರದಲ್ಲಿ ಸಂಶೋಧಿಸಿ ಬಲ್ಲ ಪಾಂಡಿತ್ಯ, ಅತ್ಯಂತ ಕ್ಲಿಷ್ಟ ವಿಷಯಗಳನ್ನು ಸರಳ ಭಾಷಾ ಹಂದರದಲ್ಲಿ ಸಾಮಾನ್ಯ ಜನರ ಮನಮುಟ್ಟುವ ಹಾಗೆ- ಅರ್ಥಾನುಸಂಧಾನ ಉಂಟಾಗುವ ಹಾಗೆ ಅಭಿವ್ಯಕ್ತಿಗೈಯುವ ಕೌಶಲ ಅವರಿಗೆ ಅಭಿಜಾತವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
''ಪುರಂದರದಾಸರ ಪ್ರತಿಮೆ ಸ್ಥಾಪನೆಯ ಮೂಲಕ ಹರಿದಾಸ ಸಾಹಿತ್ಯವನ್ನು ಮತ್ತಷ್ಟು ಪ್ರಚುರ ಪಡಿಸುವ ಉದ್ದೇಶವನ್ನು ಶ್ರೀನಿವಾಸ ಉತ್ಸವ ಬಳಗ ಹೊಂದಿದೆ. ಪುರಂದರದಾಸರ ಮೂರ್ತಿ ಪ್ರತಿಷ್ಠಾಪನೆಯ ನಂತರ ದಾಸರ ದಿವ್ಯ ಸನ್ನಿಧಾನದಲ್ಲಿ ವರ್ಷದುದ್ದಕ್ಕೂ ಪ್ರತಿ ನಿತ್ಯ ಹರಿದಾಸರ ಕೃತಿಗಳನ್ನು ವಿವಿಧ ಗಾಯಕರು, ಗಾಯನ ತಂಡ ಹಾಡಿ ನಾದನಮನ ಸಲ್ಲಿಸಲಿದ್ದಾರೆ. ತನ್ಮೂಲಕ ದಾಸ ಸಾಹಿತ್ಯಕ್ಕೆ ಅಪ್ರತಿಮ ಕೊಡುಗೆ ನೀಡಿದ ಪ್ರಾತಃಸ್ಮರಣೀಯರಾದ ಪುರಂದರದಾಸರ ಮಹತ್ವವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕಿರುಯತ್ನವಿದಾಗಿದೆ ಈ ನಿಟ್ಟಿನಲ್ಲಿ ಈಗಾಗಲೇ 9 ಅಡಿ ಎತ್ತರದ ( ಪೀಠ ಸೇರಿ ಸುಮಾರು 16 ಎತ್ತರವಿರುವ) ಏಕಶಿಲಾ ಪ್ರತಿಮೆಯನ್ನು ಶಿಲ್ಪಿ ಶಂಕರ್ ಸ್ಥಪತಿ ಸಿದ್ಧಡಿಸಿ ಕೊಟ್ಟಿದ್ದಾರೆ "ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷರಾದ ವಾದಿರಾಜ್ ಟಿ.ತಿಳಿಸಿದರು.
ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡುತ್ತಾ,
ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡುತ್ತ ಸಾವಿರಾರು ಕೃತಿಗಳನ್ನು ರಚಿಸಿರುವ ಪುರಂದರ ದಾಸರ ತ್ಯಾಗ ನಿಷ್ಠೆ, ಭಕ್ತಿ, ಜ್ಞಾನ, ವೈರಾಗ್ಯ ಹಾಗೂ ನಿಸ್ವಾರ್ಥ ಜೀವನ ಇಂದಿಗೂ ಮನೆಮಾತಾಗಿದೆ. ಭಕ್ತಿಯ ಮೂಲಕ ಮನುಕುಲವನ್ನು ಉದ್ಧಾರ ಮಾಡಿದ ಕನ್ನಡದ ಹರಿದಾಸರಲ್ಲಿ ಅಗ್ರಮಾನ್ಯರಾದ ಪುರಂದರ ದಾಸರ ನೆನೆಯುವ ಸಾರ್ಥಕ ಪ್ರಯತ್ನ ಮಾಡುತ್ತಿರುವ ಶ್ರೀನಿವಾಸ ಉತ್ಸವ ಬಳಗ ವಿಶಿಷ್ಠ ರೀತಿಯಲ್ಲಿ ‘ಪುರಂದರೋತ್ಸವ" ವನ್ನು ಆಯೋಜಿಸಿದೆ. ಸರ್ವಕಾಲಿಕ ಸಂಜೀವಿನಿ ಸಾಹಿತ್ಯವೆನಿಸಿದ ಹರಿದಾಸ ಸಾಹಿತ್ಯದ ಚಿಂತನ-ಮಂಥನವು ನಿತ್ಯ ಜೀವನದಿಂದ ಪರಗತಿಗೂ ಸಾಧನವಾಗಿದೆ. ಇದರ ಅಧ್ಯಯನ ಮತ್ತು ಪ್ರಸರಣಕ್ಕೆಂದು ಹುಟ್ಟಿದ ಸಂಸ್ಥೆಯು ಶ್ರೀನಿವಾಸ ಉತ್ಸವ ಬಳಗ. ಶ್ರೀನಿವಾಸ ಉತ್ಸವ ಬಳಗದ ಪರಿಕಲ್ಪನೆ/ ರೂವಾರಿ ತಾಯಲೂರು ವಾದಿರಾಜ್ರವರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಗಾನ ಕಲಾ ಭೂಷಣ ಡಾ. ಆರ್.ಕೆ. ಪದ್ಮನಾಭ
ಸಂಜೆ ಆರಾಧನಾ ಮಹೋತ್ಸವದ ಉದ್ಘಾಟನೆ ಮಾಡಿದ ಗಾನ ಕಲಾ ಭೂಷಣ ಡಾ. ಆರ್.ಕೆ. ಪದ್ಮನಾಭ ಮಾತನಾದಿ, ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತ ದಾಸರ ಸಂದೇಶವನ್ನು ಮನೆ ಮನೆಗೆ ಸಾರುತ್ತಿರುವ ಶ್ರೀನಿವಾಸ ಉತ್ಸವದ ಬಳಗದಿಂದ ಇದೀಗ ನಾಡಿನ ಸಂಸ್ಕೃತಿ, ಸಾಹಿತ್ಯ ಸಂಗೀತ ಪರಂಪರೆಯ ಪ್ರತೀಕವಾಗಿ ಪುರಂದರ ದಾಸರ ಶಿಲಾ ವಿಗ್ರಹವು ನೆಲೆಗೊಳಿಸಬೇಕೆಂಬ ಯೋಜನೆ ಕನಸು ನನಸಾಗುತ್ತಿರುವ ಸಂಭ್ರಮ ಇದಾಗಿದೆ. ಈ ಪ್ರತಿಮೆಯು ನಗರದ ಸಾಂಸ್ಕೃತಿಕ ವಲಯದಲ್ಲಿ ವಿಶೇಷವಾದ ಶೋಭೆಯನ್ನು ತರುವ ಅಪೂರ್ವ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯ ಪಟ್ಟರು.
ಪುರಂದರ ದಾಸರ ಕೀರ್ತನೆಗಳ ಗೋಷ್ಠಿ ಗಾಯನ
ಸಮಾಜಸೇವಕ ಪತ್ತಿ ಎ. ಶ್ರೀಧರ್ ಅವರಿಗೆ ವಿಶೇಷ ಸನ್ಮಾನ ಮತ್ತು ಮುಳಬಾಗಿಲಿನ ಪುರಂದರದಾಸ ಆರಾಧನ ಮಹೋತ್ಸವ ಸಮಿತಿಯ ರಾಜಾರಾವ್ ಮತ್ತು ಸಂಗೀತ ವಿದುಷಿ ಡಾ. ಮೈಸೂರು ನಾಗಮಣಿ ಶ್ರೀನಾಥ್ ರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ. ಎಂ.ಆರ್.ವಿ. ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಂತರ ವಿದ್ವಾನ್ ಆರ್.ಕೆ. ಪದ್ಮನಾಭ ರವರ ನೇತೃತ್ವದಲ್ಲಿ ಪುರಂದರ ದಾಸರ ಕೀರ್ತನೆಗಳ ಗೋಷ್ಠಿ ಗಾಯನ ನಡೆಯಿತು.
ಪುರಂದರದಾಸರ ಪುಣ್ಯದಿನದ ನಿಮಿತ್ತ ಜನವರಿ 20 ರಿಂದ 26ರವರೆಗೆ ಪ್ರತಿದಿನ ಮಧ್ಯಾಹ್ನ 3.30ರಿಂದ ರಾತ್ರಿ 8ರ ವರೆಗೆ (ಭಜನಾ ಗಾಯನ - ವಿಶೇಷ ಉಪನ್ಯಾಸ- ಸಾಧಕರಿಗೆ ಹರಿದಾಸ ಸನುಗ್ರಹ ಪ್ರಶಸ್ತಿ ಸನ್ಮಾನ ಮತ್ತು ಹರಿದಾಸ ಕೃತಿಗಳ ಸಂಗೀತ ಆರಾಧನೆ) ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ನಡೆಯಲಿವೆ.