ಶಿಕ್ಷಣ ಇಲಾಖೆಗಾಗಿ ಮ್ಯೂಸಿಕ್ ಆಲ್ಬಂ-ಪುನೀತ್, ಕುಂಬ್ಳೆರಿಂದ ಬಿಡುಗಡೆ
ಬೆಂಗಳೂರು, ನವೆಂಬರ್ 18: ಉದಯೋನ್ಮುಖ ಗಾಯಕ ಮತ್ತು ಸಂಗೀತ ನಿರ್ದೇಶಕ ಆಶಿಶ್ ಲಕ್ಕಿ ದುಬೆ ಅವರ "ಆಶಿಶ್-ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ'' ಎಂಬ ವಿನೂತನವಾದ ಆಲ್ಬಂ ನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ತನ್ನ ಇಲಾಖೆಯ ಆಲ್ಬಂ ಆಗಿ ಅಳವಡಿಸಿಕೊಂಡಿದೆ. ಈ ಗೀತೆಗೆ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ಸಂಗೀತ ನೀಡಿದ್ದಾರೆ.
ಈ ಗೀತೆಯ ವೈಶಿಷ್ಟ್ಯತೆ ಮತ್ತು ಸೌಂದರ್ಯವೆಂದರೆ ಮಕ್ಕಳು ಕೇಂದ್ರಬಿಂದುವಾಗಿದ್ದಾರೆ. ಆಶಿಶ್ ದುಬೆ ಮತ್ತು ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ನಿರ್ಮಿಸಿರುವ ಐದು ಹಾಡುಗಳಿದ್ದು, ಇದರಲ್ಲಿ ಎರಡು ಕನ್ನಡ ಗೀತೆಗಳಿವೆ. ಮತ್ತೆ ಎರಡು ರೀಮಿಕ್ಸ್ ಮತ್ತು ಒಂದು ಹಾಡು ಇಂಗ್ಲೀಷ್ ಭಾಷೆಯದ್ದಾಗಿದೆ. ಈ ಗೀತೆಗಳು ಎಲ್ಲಾ ಡೌನ್ಲೋಡಿಂಗ್ ಮತ್ತು ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಿವೆ.
ಆಶಿಶ್ ದುಬೆ ಮತ್ತು ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ನಿರ್ಮಿಸಿರುವ ಐದು ಹಾಡುಗಳಿದ್ದು, ಇದರಲ್ಲಿ ಎರಡು ಕನ್ನಡ ಗೀತೆಗಳಿವೆ. ಮತ್ತೆ ಎರಡು ರೀಮಿಕ್ಸ್ ಮತ್ತು ಒಂದು ಹಾಡು ಇಂಗ್ಲೀಷ್ ಭಾಷೆಯದ್ದಾಗಿದೆ. ಈ ಗೀತೆಗಳು ಎಲ್ಲಾ ಡೌನ್ಲೋಡಿಂಗ್ ಮತ್ತು ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಆಲ್ಬಂ ಅನ್ನು ಶನಿವಾರ (ನವೆಂಬರ್ 17) ರಂದು ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಸಂದೇಶಗಳನ್ನು ಸಾರುವ ಮೂಲಕ ಮಕ್ಕಳು ರ್ಯಾಂಪ್ ವಾಕ್ ಮಾಡುವುದರೊಂದಿಗೆ ಸಮಾರಂಭಕ್ಕೆ ಮೆರಗು ತಂದರು.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿ
ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಅವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಈ ಸಂದರ್ಭದಲ್ಲಿದ್ದರು.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು (ಎಸ್ ಡಿ ಜಿ) ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ. ಮಕ್ಕಳ ಶಿಕ್ಷಣದ ಹಕ್ಕು, ಆರೋಗ್ಯ, ಪರಿಸರ ರಕ್ಷಣೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು, ನೈರ್ಮಲ್ಯ ಹಾಗೂ ಜೀವನ ಶೈಲಿಯ ಆರೋಗ್ಯ ಸೇರಿದಂತೆ ಒಟ್ಟಾರೆ ಮಕ್ಕಳ ಹಿತರಕ್ಷಣೆಗೆ ಪೂರಕವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ.
ಶಿಕ್ಷಣ ಇಲಾಖೆಯ ಅಲ್ಬಂ ಆಗಿ ಅಳವಡಿಸಿಕೊಳ್ಳಲಾಗಿದೆ
ಈ ಆಲ್ಬಂಗೆ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಹಕಾರ ನೀಡಿದೆ. ಅಲ್ಲದೇ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ಗೀತೆಗಳನ್ನು ಹಾಕಲಾಗುತ್ತದೆ ಮತ್ತು ಈ ಗೀತೆಗಳನ್ನು ಶಿಕ್ಷಣ ಇಲಾಖೆಯ ಅಲ್ಬಂ ಆಗಿ ಅಳವಡಿಸಿಕೊಳ್ಳಲಾಗಿದೆ.
ಆಶಿಶ್ ಲಕ್ಕಿ ಅವರು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಸಂಗೀತ ನೀಡಿ ಹಾಡಿರುವ ಇನ್ನೊಂದು ಹಾಡನ್ನು ಕರ್ನಾಟಕ ಶಿಕ್ಷಣ ಇಲಾಖೆ ತನ್ನ ಗೀತೆಯನ್ನಾಗಿ ಅಳವಡಿಸಿಕೊಂಡಿದೆ.
ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಒಮ್ಮೆ ಬಿಡುಗಡೆ
ಮೊದಲ ಬಾರಿಗೆ ಆಶಿಶ್ ಗೀತೆಗಳನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಗೀತೆಗಳನ್ನು ಕೇಳಿದ ಕುಮಾರಸ್ವಾಮಿ ಅವರು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಈ ಗೀತೆಗಳನ್ನು ಹೊರ ತಂದಿರುವ ಆಶಿಶ್ ಅವರ ಕಾರ್ಯವನ್ನು ಶ್ಲಾಘಿಸಿದ್ದರು.
ಸಂಗೀತವೆಂಬುದು ಇಡೀ ವಿಶ್ವಕ್ಕೆ ಆತ್ಮವನ್ನು ನೀಡಿದೆ
ಈ ಬಗ್ಗೆ ಮಾತನಾಡಿದ ಆಶಿಶ್ ಅವರು, "ಸಂಗೀತವೆಂಬುದು ಇಡೀ ವಿಶ್ವಕ್ಕೆ ಆತ್ಮವನ್ನು ನೀಡಿದೆ. ಮನಸಿಗೆ ರೆಕ್ಕೆಯನ್ನು, ಚಿಂತನೆಯನ್ನು ಹಾರುವಂತೆ ಮತ್ತು ಪ್ರತಿಯೊಂದಕ್ಕೂ ಜೀವ ತುಂಬಿದೆ" ಎಂದರು.
ಆಶಿಶ್ ಅವರು ಈ ಹಿಂದೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮತ್ತು ಕನ್ನಡದ ಸಂಗೀತ ನಿರ್ದೇಶಕ ಮನೋಮೂರ್ತಿ ಅವರೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ ಅನುಭವ ಹೊಂದಿದ್ದಾರೆ.