ಸೋದರಳಿಯ ನವೀನ್ ಬಗ್ಗೆ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದೇನು?
ಬೆಂಗಳೂರು, ಆ. 12: ನಿನ್ನೆ ರಾತ್ರಿ ನಡೆದ ಗಲಭೆಗೆ ಇಡಿ ಬೆಂಗಳೂರು ಬೆಚ್ಚಿ ಬಿದ್ದಿದೆ. ಪೊಲೀಸರನ್ನೇ ಠಾಣೆಯಲ್ಲಿ ಕೂಡಿ ಹಾಕಿದ್ದು, ಶಾಸಕರ ಮನೆಗೆ ಬೆಂಕಿ ಹಾಕಿರುವುದು , ಅವರ ಮನೆಯಲ್ಲಿನ ಬಟ್ಟೆ, ಚಿನ್ನಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿರುವುದು ಪೊಲೀಸರು, ಶಾಸಕರ ವಾಹಗಳಿಗೆ ಬೆಂಕಿ ಹಾಕಿರುವುದನ್ನು ಗಮನಿಸಿದರೆ ಮೇಲ್ನೋಟಕ್ಕೆ ಅದು ವ್ಯವಸ್ಥಿತ ದಾಳಿ ಎಂಬಂತೆಯೇ ಕಂಡು ಬರುತ್ತಿದೆ.
Recommended Video
ಪೊಲೀಸ್ ಸಿಬ್ಬಂದಿ ಸೇರಿದಂತೆ ಡಿಸಿಪಿ ಅವರನ್ನು ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ, ಪೊಲೀಸ್ ವಾಹನಗಳಿಗೆ ಬೆಂಕಿ ಹಾಕಿದ್ದಾರೆ. ನಿನ್ನೆ ನಡೆದ ಘಟನೆಯ ಬಗ್ಗೆ ಸ್ವತಃ ಘಟನೆಯ ಬಗ್ಗೆ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವ್ರು ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಎನ್ನಲಾದ ತಮ್ಮ ಸೋದರಳಿಯ ನವೀನ್ ಬಗ್ಗೆಯೂ ಮಾತನಾಡಿದ್ದಾರೆ. ಇಡೀ ಘಟನೆಯ ಕುರಿತು ವಿವರಿಸುತ್ತ ಅಖಂಡ ಶ್ರೀನಿವಾಸಮೂರ್ತಿ ಅವರು ಕಣ್ಣೀರು ಹಾಕಿದರು. ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರ ಭೇಟಿ ಬಳಿಕ ಅವರು ಏನೇನು ಹೇಳಿದ್ದಾರೆ? ಇಲ್ಲಿದೆ ನೋಡಿ.
ನಿನ್ನೆ ರಾತ್ರಿ ನಡೆದ ಗಲಭೆಯ ಕಾರಣ ಹೇಳಿದ ಸಚಿವ ಅಶೊಕ್
ಮನೆಯಲ್ಲಿ ಇರಲಿಲ್ಲ
ನಿನ್ನೆ ರಾತ್ರಿ ನಮ್ಮ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾಗ ಮನೆಯಲ್ಲಿ ನಾವು ಯಾರೂ ಇರಲಿಲ್ಲ. ಒಮ್ಮೆಲೇ 3 ರಿಂದ 4 ಸಾವಿರ ಜನ ಬಂದು ದಾಳಿ ಮಾಡಿದ್ದಾರೆ. ಮನೆಯ ಮೇಲೆ ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ನಂತರ ಪೆಟ್ರೋಲ್ ಹಾಕಿ ನಮ್ಮ ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿ, ಎದುರು ಟೈರ್ಗಳನ್ನು ಸುಟ್ಟಿದ್ದಾರೆ. ಇದೆಲ್ಲವೂ ನಾವಿಲ್ಲದಾಗ ನಡೆದಿದೆ.
ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತರಿದ್ದಾರೆ. ಅವರೆಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ನನಗೆ ರಕ್ಷಣೆ ಇಲ್ಲ
ನಾವು 50 ವರ್ಷದಿಂದ ಬಾಳಿ ಬದುಕಿದ ಮನೆ ಎಂದು ಮಾತಿನ ಮಧ್ಯೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭಾವುಕರಾದರು. ನಾವೆಲ್ಲ 9 ಮಕ್ಕಳು ಹುಟ್ಟಿ ಬೆಳೆದ ಮನೆಯದು. ನಮ್ಮ ಮನೆಯನ್ನು ಸಂಪೂರ್ಣವಾಗಿ ಸುಟ್ಟು ಹಾಕಿದ್ದಾರೆ ಎನ್ನುತ್ತ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರು ಹಾಕಿದರು. ಶಾಸಕನಾಗಿ ನನಗೇ ರಕ್ಷಣೆ ಇಲ್ಲ. ನಮ್ಮ ತಂದೆ ತಾಯಿ ಕಟ್ಟಿಸಿದ ಮನೆಯದು. ನನಗೆ ರಕ್ಷಣೆ ಇಲ್ಲ ಅಂದರೆ ನಾವು ಎಲ್ಲಿಗೆ ಹೋಗಬೇಕು? ಹಿಂದೆ ಇಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದರು.
ಯಾರೇ ಈ ಘಟನೆಯ ಹಿಂದೆ ಇದ್ದರೂ ಬಂಧಿಸಬೇಕು. ಸಚಿವ ಅಶೋಕ್ ಅವರು ರಾತ್ರಿ ನಮ್ಮ ಮನೆ ಬಳಿ ಬಂದಿದ್ದರು. ನಮ್ಮ ಮನೆಯಲ್ಲಿ ಸೀರೆ, ಚಿನ್ನಕ್ಕೆ ಬೆಂಕಿ ಇಟ್ಟಿದ್ದಾರೆ. ಸ್ವತಃ ಸಚಿವ ಅಶೋಕ್ ಅವರು ಬಂದು ಘಟನೆಯನ್ನು ನೋಡಿದ್ದಾರೆ. ಅಗ್ನಿಶಾಮಕ ದಳದವರು ಬರುವುದು ತಡವಾಯಿತು.
ವಾಹನ ತಡೆದಿದ್ದಾರೆ
ನಮ್ಮ ಮನೆಗೆ ಬೆಂಕಿ ಬಿದ್ದರೂ ಅಗ್ನಿಶಾಮಕ ದಳದವರು ತಡವಾಗಿ ಬಂದಿದ್ದಾರೆ. ಅವರು ಬರದಂತೆ ತಡೆದಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ನಮಗೆ ರಕ್ಷಣೆ ಬೇಕು. ಸಿಐಡಿ, ಸಿಬಿಐ ಯಾವುದೇ ತನಿಖಾ ಸಂಸ್ಥೆಗೂ ಪ್ರಕರಣವನ್ನು ಕೊಡಲಿ. ತಪ್ಪು ಯಾರೇ ಮಾಡಿದರೂ ಕ್ರಮ ಆಗಬೇಕು ಎಂದು ಅಖಂಡ ಶ್ರೀನಿವಾಸಮೂರ್ತಿ ಒತ್ತಾಯಿಸಿದ್ದಾರೆ.
ನವೀನ್ ಬಗ್ಗೆ ಮಾತು
ಇನ್ನು ಇಡೀ ಪ್ರಕರಣಕ್ಕೆ ಮೂಲ ಕಾರಣ ಎನ್ನಲಾಗಿರುವ ತಮ್ಮ ಸೋದರಳಿಯ ನವೀನ್ ಬಗ್ಗೆಯೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಮಾತನಾಡಿದ್ದಾರೆ. ನವೀನ್ ಅಂದರೆ ನಮ್ಮ ಅಕ್ಕನ ಮಗ. ಆದರೆ ಕಳೆದ ಕಳೆದ 10 ವರ್ಷಗಳಿಂದ ನಾವು ಆತನನ್ನು ಮನೆಯಲ್ಲಿ ಸೇರಿಸುವುದಿಲ್ಲ. ಅವನ ನಡುವಳಿಕೆಯೇ ಸರಿ ಇಲ್ಲ. ಹೀಗಾಗಿ, ನವೀನ್ನನ್ನು ನಾವು ಯಾರೂ ಮನೆಗೆ ಸೇರಿಸುವುದಿಲ್ಲ. ಆದರೂ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ.
ನನ್ನ ಹೆಸರು ಕೆಡಿಸುವುದಕ್ಕೆ ಹೀಗೆ ಮಾಡಿದ್ದಾರೆ. ನಾನು ಯಾವಾಗಲೂ ಕ್ಷೇತ್ರದ ಜನತೆಯ ಜೊತೆಗೆ ಇರುವವನು. ಎಲ್ಲರನ್ನೂ ಅಣ್ಣ ಎನ್ನುತ್ತಲೇ ಮಾತನಾಡಿಸುತ್ತೇನೆ. ನನಗೂ ಸ್ಥಳೀಯ ಇನ್ಸ್ಪೆಕ್ಟರ್ಗೂ ಯಾವುದೇ ವೈಮನಸ್ಸು ಇಲ್ಲ. ಆದರೂ ನಮ್ಮ ಮನೆಯ ಮೇಲೆನೆ ದಾಳಿ ಮಾಡಿದ್ದಾರೆ. ಇದು ತಪ್ಪು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಸಿಎಂ ಜೊತೆ ಮಾತು
ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭೇಟಿ ಮಾಡಿ ಚರ್ಚೆ ನಡೆಸಿದರು. ಶ್ರೀನಿವಾಸಮೂರ್ತಿ ಅವರ ಎದುರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಅಶೋಕ್ ಮೊಬೈಲ್ ಕರೆ ಮಾಡಿ ಮಾತನಾಡಿದರು. ಜೊತೆಗೆ ಎಲ್ಲವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸಿಎಂ ಅವರಿಗೂ ಶಾಸಕರೊಂದಿಗೆ ಮಾತನಾಡಲು ಅಶೋಕ್ ವಿನಂತಿಸಿದರು. ಆದರೆ ಸಿಎಂ ಯಡಿಯೂರಪ್ಪ ಅವರು ಈಗಾಗಲೇ ನಾನು ದೂರವಾಣಿ ಕರೆ ಮಾಡಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರೊಂದಿಗೆ ಮಾತನಾಡಿದ್ದೇನೆ. ನೀವೆ ಮಾತನಾಡಿ ಎಂದು ಸೂಚಿಸಿದರು. ಜೊತೆಗೆ ಶಾಸಕರಿಗೆ ಯಾವುದೇ ಕಾರಣಕ್ಕೂ ಆತಂಕ್ಕೆ ಒಳಗಾಗದಂತೆ ತಿಳಿಸಿ ಎಂದು ಯಡಿಯೂರಪ್ಪ ಹೇಳಿದರು.