ಡ್ರೆಸ್ ಕೋಡ್ ಬಗ್ಗೆ ಬೆಂಗಳೂರಿಗರು ಏನಂದ್ರು ?
ಬೆಂಗಳೂರಿನಲ್ಲಿ ನೂತನ ವರ್ಷಾಚರಣೆ ವೇಳೆ ಕೆಲ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಗಳು ನಡೆಯುತ್ತಿದೆ. ಅದರ ಬೆನ್ನಲ್ಲೇ ಮಹಿಳೆಯರಿಗೆ ವಸ್ತ್ರ ಸಂಹಿತೆ ಬೇಕು ಎಂಬ ಕೂಗೂ ಕೇಳಿಬರುತ್ತಿದೆ.
ವರ್ಷಾಚರಣೆ ವೇಳೆ ನಡೆದ ಇಂಥ ಕುಕೃತ್ಯಗಳ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಅವರು, ಮಹಿಳೆಯರು ಸಭ್ಯತೆಯನ್ನು ಮೀರಿದ ಉಡುಗೆ ತೊಡುವುದರಿಂದ ಇಂಥ ಘಟನೆಗಳಿಗೆ ಪ್ರೇರಣೆಯಾಗುತ್ತಿದೆ ಎಂದಿದ್ದರು. ಇದು ವಿವಾದ ಸೃಷ್ಟಿಸಿದೆ.
ಬೆಂಗಳೂರು ಪ್ರಕರಣಗಳ ಬಗ್ಗೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಕೂಡಾ, ಪರಮೇಶ್ವರ್ ರೀತಿಯಲ್ಲೇ ಹೇಳಿಕೆ ನೀಡಿದ್ದು ಮತ್ತೊಂದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ, ಪರಮೇಶ್ವರ್ ಹಾಗೂ ಅಬು ಅವರಿಗೆ ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗದಿಂದ ನೋಟಿಸ್ ಕೂಡಾ ಜಾರಿಯಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಮಹಿಳೆಯರಿಗೆ ಡ್ರೆಸ್ ಕೋಡ್ ಅಗತ್ಯವಿದೆಯೇ ಎಂಬ ಚರ್ಚೆಗೆ ಮತ್ತೆ ಜೀವ ಬಂದಿದೆ.
ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಒನ್ ಇಂಡಿಯಾ ನಡೆಸಲಾದ ಜನಾಭಿಪ್ರಾಯ ಸಂಗ್ರದಲ್ಲಿ ಬೆಂಗಳೂರಿನ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ವಸ್ತ್ರ ಸಂಹಿತೆಗಿಂತಲೂ ಹೆಣ್ಣುಮಕ್ಕಳು ಗೌರವಯುತವಾಗಿ ಇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಕೆ. ಮಂಜು, ಚಿತ್ರ ನಿರ್ಮಾಪಕ
ಹೆಣ್ಣನ್ನು ಗೌರವಿಸುವ ನಾಡಿನಲ್ಲಿ ಹೇಗಿರಬೇಕೆಂಬುದನ್ನು ಹೆಣ್ಣುಮಕ್ಕಳು ಅರ್ಥ ಮಾಡಿಕೊಂಡರೆ ಚೆಂದ. ಪಾರ್ಟಿಗಳಲ್ಲಿ ಸಭ್ಯತೆ ಮೀರಿದ ಉಡುಪುಗಳನ್ನು ಧರಿಸಿದೆ ಕೆಲವರನ್ನಾದರೂ ಅದು ಪ್ರೊವೋಕ್ ಮಾಡುತ್ತದೆ.
ಹರ್ಷಿಕಾ, ವಿದ್ಯಾರ್ಥಿನಿ
ಡ್ರೆಸ್ ಕೋಡ್ ನ ಅವಶ್ಯಕತೆಯಿಲ್ಲ. ನಾವು ಧರಿಸುವ ಉಡುಪು ಪ್ರಚೋದನಾಕಾರಿಯಾಗಿ ಇರದಂತೆ ನೋಡಿಕೊಂಡರೆ ಸಾಕು. ಅಲ್ಲಿ ನಾವೊಂದಿಷ್ಟು ಎಚ್ಚರಿಕೆ ವಹಿಸುವುದು ಅವಶ್ಯ.
ಸರೋಜಮ್ಮ ಗೃಹಿಣಿ
ವಸ್ತ್ರ ಸಂಹಿತೆ ಬೇಕು. ಹಿಂದೆಲ್ಲಾ ಮಹಿಳೆಯರು ಹೀಗಿದ್ದರೆ ಚೆನ್ನ ಎಂದೆಲ್ಲಾ ಕೆಲ ನಿಯಮಗಳಿದ್ದವು. ಮಹಿಳೆಯರಿಗೆ ಗೌರವ ತರುವ ನಿಯಮಗಳು ಅವು. ಕಟ್ಟುಪಾಡುಗಳು ಮರೆಯಾಗಿರುವುದೇ ಇಂಥ ಅವಗಢಗಳಿಗೆ ಕಾರಣ.
ರೇಣುಕಮ್ಮ, ಹಿರಿಯ ನಾಗರಿಕರು
ಮಹಿಳೆಯರು ತಮಗೆ ನೀಡಿರುವ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರಕ್ಕೆ ಉಪಯೋಗಿಸುತ್ತಿದ್ದಾರೆ. ಎಂಜಾಯ್ ಮಾಡಲಿ. ಆದರೆ, ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಂಜಾಯ್ ಮಾಡಲಿ. ಅದಕ್ಕೆ ಅಡ್ಡಿಯಿಲ್ಲ.
ಸುರೇಶ್
ಹೆಣ್ಣುಮಕ್ಕಳು ಗೌರವಯುತವಾಗಿ ಬಟ್ಟೆ ಹಾಕಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು. ಎಲ್ಲೆ ಮೀರಿದರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಹೊಸ ವರ್ಷದ ಪಾರ್ಟಿಗಳ ಘಟನೆಗಳು ಸಾರಿವೆ.
ಸಾದಿಯಾ, ಗೃಹಿಣಿ
ಡ್ರೆಸ್ ಕೋಡ್ ಅವಶ್ಯಕತೆಯಿಲ್ಲ. ಆದರೆ, ಅಸಭ್ಯವಾಗಿರದಂತೆ ಉಡುಪು ತೊಡುವುದು ಬಹು ಮುಖ್ಯ. ಅಷ್ಟಕ್ಕೂ ಮಧ್ಯರಾತ್ರಿ ವೇಳೆ ಪಾರ್ಟಿ ಮಾಡುವ ಅನಿವಾರ್ಯತೆ ಬೇಕಿಲ್ಲ.
ರಾಜನ್, ನಿವೃತ್ತ ಸರ್ಕಾರಿ ಅಧಿಕಾರಿ
ಹಿರಿಯ ನಾಗರಿಕನಾಗಿ ಈ ಸಮಾಜದಲ್ಲಿ ನಡೆಯುತ್ತಿರುವ ಇಂಥ ಅವಮಾನಕರ ವಿಚಾರಗಳಿಂದ ನೊಂದಿದ್ದೇನೆ. ಹೆಣ್ಣುಮಕ್ಕಳು ಸಭ್ಯರಾಗಿದ್ದರೆ ಚೆಂದ. ಗಂಡು ಮಕ್ಕಳೂ ಎಲ್ಲೆ ಮೀರಬಾರದು.
ಹೆಸರು ಹೇಳಲಿಚ್ಛಿಸದ ನಿವೃತ್ತ ಕೆಎಎಸ್ ಅಧಿಕಾರಿ
ಡ್ರೆಸ್ ಕೋಡ್ ಅಂತ ಯಾರಿಗೆ ಯಾವುದನ್ನೂ ಮಾಡಕೂಡದು. ಅದು ಅವರವರ ಆಯ್ಕೆಗೆ ಬಿಟ್ಟ ವಿಚಾರ. ಆದರೆ, ನಾಗರಿಕರು ನಾಗರೀಕತೆಯಿಂದ ನಡೆದುಕೊಂಡರೆ ಇಂಥ ಘಟನೆಗಳು ಆಗುವುದಿಲ್ಲ. ಜನಸಾಮಾನ್ಯರಲ್ಲಿ ಆ ಬಗ್ಗೆ ಅರಿವು ಮೂಡಿಸಬೇಕಿದೆ.