ಉದ್ಯಾನಕ್ಕೆ ಪಂ.ದೀನ್ ದಯಾಳ್ ಉಪಾಧ್ಯಾಯ ಹೆಸರು, 1000 ಹಾಸ್ಟೆಲ್ ನಿರ್ಮಾಣ: ಸಿಎಂ ಬೊಮ್ಮಾಯಿ
ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರು ವಿದ್ಯಾರಣ್ಯಪುರ ವ್ಯಾಪ್ತಿಯ (ವಾರ್ಡ-9) ವಿರೂಪಾಕ್ಷಪುರದಲ್ಲಿರುವ ಉದ್ಯಾನವನಕ್ಕೆ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಉದ್ಯಾನವನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ನಾಮಕರಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ದೇಶ ಕಂಡ ಅಪರೂಪದ ದೇಶಪ್ರೇಮಿ. ವ್ಯವಸ್ಥೆಯನ್ನು ಆಳವಾಗಿ ಅಧ್ಯಯನ ಮಾಡಿ ಪರ್ಯಾಯ ವ್ಯವಸ್ಥೆ ತೋರಿಸಿದವರು. ನಾಡಿಗೆ ಮತ್ತೊಂದು ಕಲ್ಪವನ್ನು ನೀಡಿದ ಚಿಂತಕ ಹಾಗೂ ಧೀಮಂತ ನಾಯಕರು ಉಪಾಧ್ಯಾಯ ಎಂದು ಶ್ಲಾಘಿಸಿದರು.
ಫಿಟ್ನೆಟ್ ಕಾಪಾಡಿಕೊಳ್ಳಿ, 10 ಲಕ್ಷ ರೂ. ಗೆಲ್ಲಿ; ಬೆಂಗಳೂರು ಮೂಲದ ಕಂಪನಿಯ ಘೋಷಣೆ
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಶಿಕ್ಷಕರಾಗಿ, ಪತ್ರಕರ್ತರಾಗಿ, ರಾಷ್ಟ್ರಸೇವೆಯಲ್ಲಿ ಧುಮುಕಿದ್ದವರು. ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ಉತ್ತುಂಗದಲ್ಲಿತ್ತು. ವಿಭಿನ್ನ ಅಭಿಪ್ರಾಯಗಳಿದ್ದವು. ಕೆಲವರು ಪಾಶ್ಚಿಮಾತ್ಯ ದೇಶದ ಪ್ರಭಾವದಲ್ಲಿದ್ದರು. ಇನ್ನು ಕೆಲವರು ಕಮ್ಯುನಿಸ್ಟ್ ನೆಲೆಯ ಪ್ರಭಾವದಲ್ಲಿದ್ದರು. ಈ ಎರಡರ ಮಧ್ಯೆ ನಮ್ಮ ಭಾರತೀಯರು ಹಾಗೂ ಅವರ ಬದುಕನ್ನು ಗುರುತಿಸಲಿಲ್ಲ ಎನ್ನುವ ನೋವು ದೀನ್ ದಯಾಳ್ ಉಪಾಧ್ಯಾಯ ಅವರಿಗಿತ್ತು ಎಂದರು.
ಅಂತ್ಯೋದಯ ಪರಿಕಲ್ಪನೆ ನೀಡಿದರು
ಪ್ರತಿ ದೇಶಕ್ಕೂ ತನ್ನತನ ಎಂಬುದ ಇರುತ್ತದೆ. ಭಾರತ ದೇಶಕ್ಕೆ ತನ್ನದೇ ಆದ ಸಂಸ್ಕೃತಿ, ಸಂಸ್ಕಾರ, ಚಿಂತನೆ, ಬದುಕಿದೆ. ಭಾರತೀಯರ ಬದುಕು, ಮೌಲ್ಯಗಳು, ತತ್ವಾದರ್ಶಗಳು ಬೇರೆ ದೇಶದ ಪ್ರಜೆಗಳಿಗಿಂತ ವಿಭಿನ್ನವಾಗಿದೆ ಎಂದು ಗಟ್ಟಿಯಾಗಿದೆ ದೀನ್ ದಯಾಳ್ ಉಪಾಧ್ಯಾಯರು ಪ್ರತಿಪಾದಿಸಿದ್ದರು. ಆ ಮೂಲಕ ಅಂತ್ಯೋದಯ ಪರಿಕಲ್ಪನೆ ನೀಡಿದರು. ಈ ಸಮಾಜದ ಕಟ್ಟಕಡೆಯ ವ್ಯಕ್ತಿ ಉದ್ಧಾರವಾಗಲು ಅಂತ್ಯೋದಯ ಕಾರ್ಯಕ್ರಮ ಆಗಲೇಬೇಕಿದೆ ಎಂದು ಅವರು ಹೇಳಿದರು.
ಉಪಾಧ್ಯಾಯರ ಆದರ್ಶ ಅಳವಡಿಸಿಕೊಳ್ಳಿ
ಎಲ್ಲಾ ಮಾನವ ಆತ್ಮಗಳ ಚಿಂತನೆ ಏಕಾತ್ಮ ಭಗವಂತನನ್ನು ಓಲೈಸುವ, ಕೃಪೆ ಪಡೆದು ಸತ್ಯದ ಮಾರ್ಗದಲ್ಲಿ ನಡೆಯಬೇಕೆನ್ನುವ ಚಿಂತನೆಯನ್ನು ಬೋಧನೆ ಮಾಡಿದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ದೀನ್ ದಯಾಳ್ ಉಪಾಧ್ಯಕ್ಷ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ದೇಶದ ಏಕತೆ, ಅಖಂಡತೆಯ ಬಗ್ಗೆ ಸದಾ ಕಾಲ ಚಿಂತನೆ ಮಾಡಿದರು. ಅಂತ್ಯೋದಯದ ಮುಖಾಂತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಏಳಿಗೆಗೆ ನಿರಂತರವಾಗಿ ಶ್ರಮಿಸಿದರು ಎಂದರು.
ಮೂರ್ತಿ ಸ್ಥಾಪನೆಗೆ ಬಿಬಿಎಂಪಿಗೆ ಸೂಚನೆ
ಭಾರತೀಯ ಜನತಾ ಪಕ್ಷ (ಬಿಜೆಪಿ) ಹುಟ್ಟು ಹಾಕಿದ ಪ್ರಮುಖರಲ್ಲಿ ಅವರೂ ಒಬ್ಬರು. ಮುಂದೆ ಭಾರತೀಯ ಜನ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಅವರ ಎಲ್ಲಾ ಆದರ್ಶಗಳು ಪ್ರಸ್ತುತವಾಗಿದೆ. ಅವರ ಹೆಸರಿನಲ್ಲಿ ಉದ್ಯಾನವನ ಆಗಿರುವುದು ಒಳ್ಳೆ ಕೆಲಸ. ಚಕ್ರಪಾಣಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ವಿದ್ಯಾರಣ್ಯಪುರ ಭಾಗದದಲ್ಲಿ ಜನರಿಗೆ ಅವರ ಹೆಸರು ಸ್ಪೂರ್ತಿದಾಯಕವಾಗಿದೆ. ದೀನ್ ದಯಾಳ್ ಉಪಾಧ್ಯಾಯರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ದೀನ್ ದಯಾಳ ಅವರ ಮೂರ್ತಿ ಸ್ಥಾಪನೆಗೆ ಬಿಬಿಎಂಪಿ ಆದೇಶವನ್ನು ಪಡೆಯುವಂತೆ ಸೂಚಿಸಿದರು. ಬಹಳ ದೊಡ್ಡ ವ್ಯಕ್ತಿತ್ವ ಹೊಂದಿರುವ ದೀನ್ ದಯಾಳ್ ಅವರ ಹೆಸರಿಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಅನುಮತಿಗಳನ್ನು ಪಡೆದೇ ಮುಂದಿನ ಕಾರ್ಯಮಾಡಬೇಕು ಎಂದು ತಿಳಿಸಿದರು.
5 ನಗರದಲ್ಲಿ ಸಾವಿರ ಹಾಸ್ಟೆಲ್ ನಿರ್ಮಾಣ
ಸರ್ಕಾರ ಈ ವರ್ಷ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಮತ್ತು ಕಲಬುರಗಿ ಸೇರಿ 5 ಮಹಾನಗರಗಳಲ್ಲಿ ಒಂದು ಸಾವಿರ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುತ್ತಿದ್ದೇವೆ. ಅಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅವರ ಆದರ್ಶಗಳ ಸ್ಫೂರ್ತಿ ಸಿಗಲಿ ಎಂಬ ಕಾರಣದಿಂದ 5 ವಿದ್ಯಾರ್ಥಿ ನಿಲಯಗಳಿಗೆ ದೀನ್ ದಯಾಳ್ ಉಪಾಧ್ಯಾಯರ ಹೆಸರನ್ನು ಇಡಲಾಗುವುದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಹಾಸ್ಟೆಲ್ ನಿರ್ಮಿಲಸಾಗುತ್ತಿದೆ.
50 ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳನ್ನು ಕನಕದಾಸರ ಹೆಸರಿನಲ್ಲಿ ನಿರ್ಮಿಸುತ್ತಿದ್ದೇವೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರೆಸುತ್ತಿದ್ದೇವೆ. ನಾಗರೀಕತೆ ಯ ಜೊತೆಗೆ ಸಂಸ್ಕೃತಿ ಬೆಳೆಯಬೇಕಾಗಿದೆ. ನಾವೇನಾಗಿದ್ದೇವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಉತ್ತಮ ಆದರ್ಶ, ನೈತಿಕ ಬದುಕಿನ ಭಾರತೀಯ ಸಂಸ್ಕೃತಿ ಯನ್ನು ಉಳಿಸಿ ಬೆಳಸಿಕೊಂಡು ಹೋಗಬೇಕಿದೆ ಎಂದು ಅವರು ಕರೆ ನೀಡಿದರು.