ಪಿಎಸ್ಐ ಹಗರಣ: ಮುಖ್ಯಪೇದೆ ಶ್ರೀಧರ್ ಮನೆಯಲ್ಲಿ 1.55 ಕೋಟಿ ನಗದು ಜಪ್ತಿ
ಬೆಂಗಳೂರು, ಮೇ 15: ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧಿತನಾಗಿರುವ ಮುಖ್ಯಪೇದೆಯ ಮನೆಯಲ್ಲಿ ಕೋಟಿ ಕೋಟಿ ನಗದು ಹಣಪತ್ತೆಯಾಗಿದೆ. ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಮನೆಯಲ್ಲಿ ಶೋಧಿಸಿದಾಗ ಸುಮಾರು 1.55 ಕೋಟಿ ರೂಪಾಯಿ ಹಣವನ್ನು ಸಿಐಡಿ ತನಿಖಾಧಿಕಾರಿಗಳು ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡಿದ್ದಾರೆ.
ಶ್ರೀಧರ್ ಚಾಮರಾಜನಗರದ ಮನೆಯಲ್ಲಿ ಶೋಧ
ನೇಮಕಾತಿ ವಿಭಾಗದ ಹೆಡ್ಕಾನ್ಸ್ಟೇಬಲ್ ಆಗಿದ್ದ ಶ್ರೀಧರ್ಗೆ ಸೇರಿದ ಚಾಮರಾಜಪೇಟೆಯಲ್ಲಿರುವ ಮನೆಗೆ ಸಿಐಡಿ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿತ್ತು. ಈ ವೇಳೆ ಮನೆಯ ರೂಂವೊಂದರಲ್ಲಿ ಬಚ್ಚಿಟ್ಟದ್ದ ಬ್ಯಾಗ್ನಲ್ಲಿ ಕಂತೆ-ಕಂತೆ ನೋಟುಗಳು ಕಂಡು ಸಿಐಡಿ ಅಧಿಕಾರಿಗಳೇ ದಂಗಾಗಿದ್ದಾರೆ. ನೋಟು ಎಣಿಕೆ ಯಂತ್ರ ತಂದು ಪರಿಶೀಲಿಸಿದಾಗ 1.5 ಕೋಟಿ ರೂ. ನಗದು ಹಣವನ್ನು ಶ್ರೀಧರ್ ಬಚ್ಚಿಟ್ಟಿರುವುದು ಗೊತ್ತಾಗಿದೆ. ಮನೆಯಲ್ಲಿ ಪತ್ತೆಯಾದ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಐಡಿ ಜಪ್ತಿ ಮಾಡಿಕೊಂಡಿದೆ. ಶ್ರೀಧರ್ ಮನೆಯಲ್ಲಿ ಹಣದ ಬಗ್ಗೆ ವಿಚಾರಿಸದ ವೇಳೆ ಸರಿಯಾದ ಮಾಹಿತಿ ಕೂಡ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ.
ಶ್ರೀಧರ್ ಹಾಗೂ ಡಿವೈಎಸ್ಪಿ ಶಾಂತಕುಮಾರ್ನನ್ನು ವಿಚಾರಣೆ
ಶ್ರೀಧರ್ಗೆ ಇಷ್ಟು ದೊಡ್ಡ ಮೊತ್ತದ ನಗದು ಹಣ ಎಲ್ಲಿಂದ ಬಂತು. ಈ ಹಣದ ಮೂಲ ಯಾವುದು. ಪಿಎಸ್ಐ ಪರೀಕ್ಷೆಯ ಅಕ್ರಮದಲ್ಲಿ ಪಡೆಯಲಾಗಿದ್ದ ಹಣವೇ ಎಂಬುದನ್ನು ಸಿಐಡಿ ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಸಿಐಡಿ ಅಧಿಕಾರಿಗಳು ಈಗಾಗಲೇ ಸಿಐಡಿ ಅಧಿಕಾರಿಗಳು ಬಂಧನಕ್ಕೊಳಗಾಗಿರುವ ಶ್ರೀಧರ್ ಹಾಗೂ ಡಿವೈಎಸ್ಪಿ ಶಾಂತಕುಮಾರ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಶಾಂತಕುಮಾರ್ ಅಣತಿಯಂತೆ ಶ್ರೀಧರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪಿಎಸ್ಐ ಅಭ್ಯರ್ಥಿಗಳು ಕೊಟ್ಟಿರುವ ಹಣವನ್ನು ಶಾಂತಕುಮಾರ್ ಸೂಚನೆ ಮೇರೆಗೆ ಶ್ರೀಧರ್ ತನ್ನ ಮನೆಯಲ್ಲಿಟ್ಟಿದ್ದ ಎನ್ನಲಾಗಿದೆ. ಇದು ಯಾವ ಅಭ್ಯರ್ಥಿಗಳು ಕೊಟ್ಟಿರುವ ಹಣ? ಎಂಬ ಬಗ್ಗೆ ಸಿಐಡಿ ತನಿಖೆ ಚುರುಕುಗೊಳಿಸಿದೆ.
ಪಿಎಸ್ಐ ಹಗರಣದಲ್ಲಿ ಸಿಕ್ಕಿ ಬೀಳುವ ಭಯದಿಂದ ನಗದಿನಲ್ಲೇ ವ್ಯವಹಾರ
ಬ್ಯಾಂಕ್ಗಳ ಮೂಲಕ ಹಣವನ್ನು ವರ್ಗಾವಣೆಯನ್ನು ಮಾಡಿದರೇ ಸಿಕ್ಕಿ ಬೀಳುವ ಭಯದಿಂದ ನಗದು ರೂಪದಲ್ಲೇ ಪರೀಕ್ಷೆಯ ಅಕ್ರಮ ನಡೆದಿರೋದು ಸಿಐಡಿ ತನಿಖೆಯ ವೇಳೆಯಲ್ಲಿ ಗೊತ್ತಾಗಿದೆ. ಸಿಐಡಿ ಅಧಿಕಾರಿಗಳು ಮನೆ ಮನೆಯನ್ನು ಶೋಧ ಮಾಡಿ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮುಖ್ಯ ಪೇದೆ ಶ್ರೀಧರ್ ಮನೆ ಸಿಕ್ಕಿರುವ ಹಣ ಸಹ ಅವ್ಯವಹಾರದ್ದೇ ಎನ್ನಲಾಗುತ್ತಿದೆ. ಈ ಹಣವನ್ನು ಎಷ್ಟು ಸಂಗ್ರಹಿಸಿರಬಹುದು ಎಂಬುದನ್ನು ಶ್ರೀಧರ್ ವಿಚಾರಣೆಯಲ್ಲಿ ತಿಳಿದುಕೊಳ್ಳಲಾಗುತ್ತಿದೆ.
ಡಿವೈಎಸ್ಪಿ ಶಾಂತಕುಮಾರ್ ಮನೆಯಲ್ಲೂ ಸಿಕ್ಕಿತ್ತು ಪರೀಕ್ಷೆ ನಕಲಿಗೆ ಬಳಸುವ ವಸ್ತುಗಳು
ನೇಮಕಾತಿ ವಿಭಾಗದಲ್ಲಿ ಡಿವೈಎಸ್ಪಿ ಮನೆಯನ್ನು ಶೋಧಿಸಿದಾಗಲು ಪರೀಕ್ಷೆ ನಕಲಿಗೆ ಬಳಸುವ ಒನ್ ಟೈಮ್ ಲಾಕ್ ನಂತಹ ವಸ್ತುಗಳು ಪತ್ತೆಯಾಗಿದ್ದವು. ಶಾಂತಕುಮಾರ್ ಮತ್ತು ಶ್ರೀಧರ್ ಜೋಡಿ ಪರೀಕ್ಷೆಯಲ್ಲಿ ನಕಲಿಗೆ ಸಹಕಾರವನ್ನು ಕೊಟ್ಟಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಸಿಐಡಿ ಅಧಿಕಾರಿಗಳು ಟೆಕ್ನಿಕಲ್ ಎವಿಡೆನ್ಸ್ಗಳನ್ನು ಕಲೆಹಾಕುತ್ತಿದ್ದಾರೆ.
ಶ್ರೀಧರ್ ಮತ್ತು ಕುಟುಂಬಸ್ಥರ ಬ್ಯಾಂಕ್ ಅಕೌಟ್ ವಿವರ ಕಲೆ
ಶ್ರೀಧರ್ ಮನೆಯಲ್ಲಿ 1.55ಕೋಟಿ ಹಣ ಸಿಗುತ್ತಿದ್ದಂತೆ ಸಿಐಡಿ ಅಧಿಕಾರಿಗಳು ಶ್ರೀಧರ್ನ ಅಕೌಂಟ್ ವಿವರ ಮತ್ತು ಕುಟುಂಬಸ್ಥರ ಅಕೌಂಟ್ ವಿವರವನ್ನು ಪಡೆದಿದ್ದಾರೆ. ಬ್ಯಾಂಕ್ಗಳಿಗೆ ಮಾಹಿತಿಯನ್ನು ಕೊಟ್ಟು ಅಕೌಂಟ್ನಲ್ಲಿರುವ ಡಿಟೈಲ್ಸ್ ಅನ್ನು ಕೇಳಿದ್ದಾರೆ. ಇನ್ನು ಅಕ್ರಮದ ಹಣವನ್ನು ತನ್ನ ಅಕೌಂಟಿಗೆ ಹಾಕದೇ ತನ್ನ ಕುಂಟುಂಬಸ್ಥರ ಅಕೌಂಟಿಗೆ ಹಾಕಿರುವ ಸಂಶಯದ ಹಿನ್ನೆಲೆಯಲ್ಲಿ ಅಕೌಂಟ್ ವಿವರವನ್ನು ಪಡೆಯಲಾಗಿದೆ.
ಪಿಎಸ್ಐ ಹಗರಣದಲ್ಲಿ ಡಿವೈಎಸ್ಪಿ ಶಾಂತಕುಮಾರ್ ಮತ್ತು ಮುಖ್ಯ ಪೇದೆ ಶ್ರೀಧರ್ ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ತನಿಖೆ ನಡೆಸಿದರೇ ಮತ್ತಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಸಿಐಡಿ ಮೂಲಗಳು.
Recommended Video