ಪರಪ್ಪನ ಅಗ್ರಹಾರದಲ್ಲಿ ಇದ್ದಕ್ಕಿದ್ದಂತೆ ಕೈದಿಗಳಿಂದ ಪ್ರತಿಭಟನೆ
ಪರಪ್ಪನ ಅಗ್ರಹಾರ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಂದ ಪ್ರತಿಭಟನೆ. ಬಂಧೀಖಾನೆ ಡಿಐಜಿ ಡಿ. ರೂಪಾ ಅವರು ಕೈದಿಗಳೊಂದಿಗೆ ಶನಿವಾರ ಮಧ್ಯಾಹ್ನ ಮಾತುಕತೆ ನಡೆಸಿ ಹೊರಟ ನಂತರ ಭುಗಿಲೆದ್ದ ಪ್ರತಿಭಟನೆ.
ಬೆಂಗಳೂರು, ಜುಲೈ 15: ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಂದ ಪ್ರತಿಭಟನೆ ಆರಂಭವಾಗಿದೆ. ವಿಐಪಿ ಕೈದಿಗಳಿಗೆ ಹಾಗೂ ಇತರ ಕೈದಿಗಳಿಗೆ ತೋರಲಾಗುತ್ತಿರುವ ಬೇಧಭಾವ ಹಾಗೂ ಹಣ ಸುರಿಸುವ ಕೈದಿಗಳಿಗೆ ಜೈಲಿನಲ್ಲಿ ನೀಡಲಾಗುತ್ತಿರುವ ರಾಜೋಪಚಾರಗಳಂಥ ವಿಚಾರಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.
ಇತ್ತೀಚೆಗೆ, ಬಂಧೀಖಾನೆ ಡಿಐಜಿ ಡಿ. ರೂಪಾ ಅವರು, ಸರ್ಕಾರಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಐಪಿ ಕೈದಿಗಳಿಂದ ಲಂಚ ಪಡೆದು ರಾಜೋಪಚಾರ ನೀಡುತ್ತಿರುವ ಬಗ್ಗೆ ಸಮಗ್ರ ವರದಿಯನ್ನು ತಯಾರಿಸಿ ಅದನ್ನು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ್ದರು.
ಇದು ಸಾರ್ವಜನಿಕ ವಲಯದಲ್ಲಿ, ಮಾಧ್ಯಮಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ರಾಜ್ಯ ಸರ್ಕಾರವು ತಲೆ ತಗ್ಗಿಸುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ, ರೂಪಾ ಅವರು ಶನಿವಾರ ಮಧ್ಯಾಹ್ನದ ಸುಮಾರಿಗೆ ಪರಪ್ಪನ ಅಗ್ರಹಾರಕ್ಕೆ ಬಂದು ಕೈದಿಗಳೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ಹೊರಟುಹೋಗಿದ್ದಾರೆ.
ಆದರೆ, ಅವರು ಹೋದ ಬೆನ್ನಲ್ಲೇ ಕೈದಿಗಳು ಪ್ರತಿಭಟನೆಗೆ ನಿಂತಿದ್ದಾರೆಂದು ಮೂಲಗಳು ತಿಳಿಸಿವೆ. ಈ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.