ಪೋಷಕರ ಕೂಗಿಗೆ, ಹಾರ್ಲೆ ಗುಡುಗಿಗೆ ಏಳುವುದೇ ಸರ್ಕಾರ?
ಬೆಂಗಳೂರು, ಜು. 19 : "ನಿನ್ನೆ ಬೇರೊಬ್ಬರ ಹೊಟ್ಟೆಯಲ್ಲಿ ಹುಟ್ಟಿದ ಆರು ವರ್ಷದ ಕಂದ ಲೈಂಗಿಕ ದೌರ್ಜನ್ಯಕ್ಕೀಡಾಗಿದೆ, ನಾಳೆ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಕಂದಮ್ಮನಿಗೂ ಹೀಗಾಗುವುದಿಲ್ಲ, ಶಾಲೆಗೆ ಹೋದ ಮಗು ಸುರಕ್ಷಿತವಾಗಿ ಬರುತ್ತದೆ ಅಂತ ಏನು ಗ್ಯಾರಂಟಿ?" ಇದು ಹೊಟ್ಟೆಯಲ್ಲಿ ಕಿಡಿ ತುಂಬಿಕೊಂಡಿದ್ದರೂ ಮೌನವಾಗಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬರ ಮನದಾಳದ ಅಳಲು.
ಇದು ಆ ಮಹಿಳೆಯ ಮನದ ಮಾತು ಮಾತ್ರವಲ್ಲ, ವಿಬ್ಗಯಾರ್ ಶಾಲೆಯಿಂದ ಎಚ್ಎಎಲ್ ಪೊಲೀಸ್ ಠಾಣೆಯವರೆಗೆ ಶನಿವಾರ ಬೆಳಿಗ್ಗೆ 10 ಗಂಟೆಗೆ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ, ಕಪ್ಪು ದಿರಿಸು ಧರಿಸಿದ್ದ ಹತ್ತು ಸಾವಿರಕ್ಕೂ ಹೆಚ್ಚು ಪೋಷಕರ ದುಗುಡವಾಗಿತ್ತು. ಆರು ವರ್ಷದ ಮಗುವಿನ ಮೇಲೆ ಅಮಾನುಷ ಅತ್ಯಾಚಾರ ನಡೆದಿದ್ದರೂ ಎಚ್ಚೆತ್ತುಕೊಳ್ಳದ ರಾಜ್ಯದ ಸರಕಾರದ ವಿರುದ್ಧ ಮಡುಗಟ್ಟಿದ್ದ ಅವರ ಆಕ್ರೋಶದ ಕಟ್ಟೆಯೊಡೆದಿತ್ತು.
ಮಾರತ್ಹಳ್ಳಿ ಬಳಿಯಿರುವ ವಿಬ್ಗಯಾರ್ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ ಮಗುವಿನ ಮೇಲೆ ಜು.2ರಂದು ಹೀನಾಯ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಗಳಿಬ್ಬರನ್ನು ಇನ್ನೂ ಬಂಧಿಸದಿರುವುದು ಸರಕಾರದ ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. ಈ ಘಟನೆಯಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸುವವರೆಗೆ, ಶಾಲೆಯ ಮಾನ್ಯತೆ ರದ್ದುಪಡಿಸುವವರೆಗೆ ಮತ್ತು ಮಕ್ಕಳಿಗೆ ರಕ್ಷಣೆ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬೆಂಗಳೂರಿನ ಪೋಷಕರು ಸಿಡಿದೆದ್ದಿದ್ದಾರೆ.
ಪ್ರತಿಭಟನೆಯಲ್ಲಿ ಪೋಷಕರು ಮಾತ್ರವಲ್ಲ, ಜಯಕರ್ನಾಟಕ ಸಂಘಟನೆ, ಲೈಂಗಿಕ ದೌರ್ಜನ್ಯದ ಹೋರಾಟ ಮಾಡುತ್ತಿರುವ ಹಾರ್ಲೆ ಡೆವಿಡ್ಸನ್ ಬೈಕ್ ರೈಡರ್ಸ್ ಸಂಘಟನೆ ಕೂಡ ಭಾರೀ ಪ್ರತಿಭಟನೆಯ ಸದ್ದು ಮಾಡಿದೆ. 5 ಕಿ.ಮೀ. ಸಾಗಿದ ಮೆರವಣಿಗೆಯುದ್ದಕ್ಕೂ ಯಾವುದೇ ಘೋಷಣೆ, ಧಿಕ್ಕಾರಗಳಿರಲಿಲ್ಲ. ಅವರು ಹಿಡಿದಿದ್ದ ಭಿತ್ತಿಪತ್ರಗಳು ಮತ್ತು ಅವರ ಮುಖವೇ ಎಲ್ಲವನ್ನೂ ಹೇಳುತ್ತಿತ್ತು. ಹಾರ್ಲೆ ಡೆವಿಡ್ಸನ್ ಮಾಡಿದ ಗುಡುಗಿನ ಶಬ್ದವೂ ಸರಕಾರದ ಕಿವಿಗೆ ಕೇಳದಿದ್ದರೆ ಸರಕಾರ ಇದ್ದರೆಷ್ಟು ಬಿಟ್ಟರೆಷ್ಟು? [ಫ್ರೇಜರ್ ಟೌನ್ ರೇಪ್ ಕೇಸ್]
ಎಚ್ಎಎಲ್ ಪೊಲೀಸ್ ಠಾಣೆಯ ಬಳಿ ನೆರೆದಿದ್ದ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಪೋಷಕರ ಆಕ್ರೋಶಕ್ಕೆ ಗುರಿಯಾದರು. ಆರೋಪಿಗಳನ್ನು ಬಂಧಿಸಬೇಕೆಂಬ ಪೋಷಕರ ಕೂಗಿಗೆ ಸರಿಯಾಗಿ ಸ್ಪಂದಿಸದಿದ್ದರಿಂದ ಶೇಮ್ ಶೇಮ್ ಎಂಬ ಕೂಗನ್ನೂ ಅವರು ಕೇಳಬೇಕಾಯಿತು. [ಮೆರವಣಿಗೆಯ ಚಿತ್ರಗಳು]
ಅತ್ಯಾಚಾರಿಯ ಜನನಾಂಗ ಕತ್ತರಿಸಿ ಬಿಸಾಕಿ
ನಿದ್ದೆ ಮಾಡುತ್ತಿರುವ ಸರಕಾರದಿಂದ, ಪೊಲೀಸಿನಿಂದ, ಕಾನೂನಿನಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅರಿತಿರುವ ಮಹಿಳೆಯೊಬ್ಬರು ಅತ್ಯಾಚಾರಿಯ ಜನನಾಂಗ ಕತ್ತರಿಸಿ ಬಿಸಾಕಿ ಎಂದು ಹೇಳುತ್ತಿದ್ದಾರೆ.
ಅತ್ಯಾಚಾರಿಗಳಿಗೆ ಮರಣದಂಡನೆಯೊಂದೇ ಮಾರ್ಗ
ಹೆಸರು ಹೇಳಲು ನಿರಾಕರಿಸಿದ ಪೋಷಕರೊಬ್ಬರು ಅತ್ಯಾಚಾರಿಗಳಿಗೆ ಮರಣದಂಡನೆಯೊಂದೇ ಮಾರ್ಗ. ಇದನ್ನು ಜಾರಿಗೆ ತಂದರೆ ಮಾತ್ರ ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಸಾಧ್ಯ ಎಂದು ಹೇಳುತ್ತಾರೆ.
ನಮ್ಮ ದೇಹ ಲೈಂಗಿಕ ಆಟದ ಮೈದಾನವಲ್ಲ
ನಮ್ಮ ದೇಹ ಲೈಂಗಿಕ ಆಟದ ಮೈದಾನವಲ್ಲ, ಅಪರಾಧಿಗಳನ್ನು ಬಿಡಬೇಡಿ, ಅನುಮತಿಯಿಲ್ಲದೆ ಲೈಂಗಿಕ ಕ್ರಿಯೆ ಬೇಡ, ಮೃಗತ್ವ ತ್ಯಜಿಸಿ ಮನುಷ್ಯರಾಗಿರಿ ಮುಂತಾದ ಬರಹಗಳಿರುವ ಭಿತ್ತಿಪತ್ರಗಳು ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದವು.
ಬರೀ ಇಂಗ್ಲೀಷು, ಕನ್ನಡ ಮಂಗಮಾಯ
ಮೆರವಣಿಗೆಯಲ್ಲಿ ಬಂದ ಪೋಷಕರೆಲ್ಲ ಇಂಗ್ಲೆಂಡಿನಲ್ಲಿ ಹುಟ್ಟಿಬಂದವರಂತೆ ಆಂಗ್ಲ ಭಾಷೆಯಲ್ಲಿ ಹೇಳಿಕೆ ನೀಡುತ್ತಿದ್ದರು. ಇವರೆಲ್ಲ ಅನ್ಯ ಭಾಷಿಕರಾ? ಕನ್ನಡ ನಾಡು ಬೇಕು, ಕನ್ನಡ ಬೇಡವಾ?
ನಾನು ಪುಟ್ಟ ಮಗು, ಆಟಿಕೆ ಸಾಮಾನಲ್ಲ
ನಾನು ಪುಟ್ಟ ಮಗು, ಆಟಿಕೆ ಸಾಮಾನಲ್ಲ - ಎಂಬ ಭಿತ್ತಿಪತ್ರ ಆಕರ್ಷಿಸುತ್ತಿತ್ತು. ಹಲವಾರು ಪೋಷಕರು ತಮ್ಮ ಮಕ್ಕಳೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಕೆಲವರು ಬೊಂಬೆಗಳನ್ನು ಕೂಡ ಎತ್ತಿಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಬದುಕಬೇಕು, ದಯವಿಟ್ಟು ನನ್ನ ಕಾಪಾಡಿ
ನಿಜವಾಗಿಯೂ ಶಾಲೆ ಮಕ್ಕಳು ಅಪಾಯದಲ್ಲಿದ್ದಾರೆ, ಪೋಷಕರು ಆತಂಕದಲ್ಲಿದ್ದಾರೆ. ಶಾಲೆಗೆ ಹೋದ ಮಗು ಸುರಕ್ಷಿತವಾಗಿ ಬರುತ್ತದಾ ಎಂದು ಅಪ್ಪ ಅಮ್ಮಂದಿರು ಕಳವಳಕ್ಕೀಡಾಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಏನಂತಾರೆ?
ವಿಬ್ಗಯಾರ್ ಶಾಲೆಯಲ್ಲಿ ನೀರವ ಮೌನ
ಒಂದು ವರ್ಷದ ಮಗುವಿನ ಅತ್ಯಾಚಾರಕ್ಕೆ ಸಾಕ್ಷಿಯಾಗಿರುವ ವಿಬ್ಗಯಾರ್ ಶಾಲೆಗೆ ಬೀಗ ಜಡಿಯಲಾಗಿದೆ. ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಶಾಲೆಗೆ ನೀಡಿದ ಮಾನ್ಯತೆ ರದ್ದುಪಡಿಸಬೇಕೆಂದು ಸರಕಾರ ಐಸಿಎಸ್ಸಿ ಮಂಡಳಿಗೆ ಪತ್ರ ಬರೆದಿದೆ.
ಆರೋಪಿಯ ಫೋಟೋ ವೆಬ್ ಸೈಟಲ್ಲಿ ಪ್ರಕಟಿಸಿ
ಅತ್ಯಾಚಾರ ಪ್ರಕರಣಗಳ ಆರೋಪಿಯ ಭಾವಚಿತ್ರ, ವಿವರಗಳನ್ನು ಸರಕಾರಿ ವೆಬ್ ಸೈಟ್ಗಳಲ್ಲಿ ಪ್ರಕಟಿಸಬೇಕು. ವಿದೇಶದಲ್ಲಿ ಇಂಥ ಮಾರ್ಗವನ್ನು ಅನುಸರಿಸಲಾಗುತ್ತಿದೆ. ದೌರ್ಜನ್ಯ ತಡೆಗಟ್ಟುವುದು ಮಾತ್ರವಲ್ಲ ಮಕ್ಕಳಲ್ಲಿಯೂ ಇಂಥ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಅಂತಾರೆ ಸಿಸ್ಕೋ ಉದ್ಯೋಗಿ ಶ್ರೀಧರ್.
ಪ್ರತಿಭಟನೆ ಸೇರಿದ ಹಾರ್ಲೆ ಡೆವಿಡ್ಸನ್ ಬೈಕರ್ಸ್
ಬೆಂಗಳೂರಿನ ಹಾರ್ಲೆ ಡೆವಿಡ್ಸನ್ ಬೈಕ್ ಗುಂಪಿನ 100ಕ್ಕೂ ಹೆಚ್ಚು ಸದಸ್ಯರು ಎಬ್ಬಿಸಿರುವ ಗುಡುಗಿನ ಸದ್ದು ಸರಕಾರದ ಹಿತ್ತಾಳೆ ಕಿವಿಗೆ ಕೇಳುವುದೆ? ಖಂಡಿತ ಕೇಳೇ ಕೇಳುತ್ತೆ ಅನ್ನುತ್ತಾರೆ ಬೆಂಗಳೂರಿನ ನಿವಾಸಿ ಸುರೇಶ್.
ಎಲ್ಲರ ಚಿತ್ರ ಹಾರ್ಲೆ ಡೆವಿಡ್ಸನ್ ಮೇಲೆ
ಮೌನವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪೋಷಕರು, ಯುವಕ-ಯುವತಿಯರು ರಸ್ತೆಯಲ್ಲಿ ಸಾಗುತ್ತಿದ್ದ ಹಾರ್ಲೆ ಡೆವಿಡ್ಸನ್ ಬೈಕುಗಳ ಚಿತ್ರಗಳನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಪೊಲೀಸ್ ಪೇದೆಯೊಬ್ಬ 'ಎಷ್ಟು ಸಾರ್ ಈ ಬೈಕಿಗೆ?' ಅಂತ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡ. ಬೆಲೆ 18 ಲಕ್ಷ ರು.ಯಂತೆ!
ಮೆರವಣಿಗೆ ಕೊನೆಯಲ್ಲಿ ಸೇರಿಕೊಂಡ ಜಯ ಕರ್ನಾಟಕ
ಜಯ ಕರ್ನಾಟಕ ಹೊರತುಪಡಿಸಿ ಯಾವ ಕನ್ನಡಪರ ಸಂಘಟನೆಗಳು ಮೆರವಣಿಗೆಯಲ್ಲಿ ಕಂಡುಬರಲಿಲ್ಲ. ಎಲ್ಲಿ ಕರ್ನಾಟಕ ರಕ್ಷಣಾ ವೇದಿಕೆ? ಎಲ್ಲಿ ಶ್ರೀರಾಮಸೇನೆ?
ಹೆಣ್ಣು ಮಕ್ಕಳನ್ನು ಗೌರವಿಸುವುದು ಹೇಗೆಂದು ಕಲಿಸಿ
ಹೆಣ್ಣು ಮಕ್ಕಳು ಹೇಗೆ ಬಟ್ಟೆ ಧರಿಸಬೇಕೆಂದು ಹೇಳಿಕೊಡುವ ಅಗತ್ಯವಿಲ್ಲ, ಗಂಡಸರು ಹೆಣ್ಣುಮಕ್ಕಳನ್ನು ಹೇಗೆ ಗೌರವಿಸಬೇಕೆಂದು ಕಲಿಸಬೇಕು ಎಂಬುದು ಈ ದಂಪತಿಗಳ ಉವಾಚ.
|
ರೇಪ್ ವಿರುದ್ಧ ಕಡೆಗೂ ಎಚ್ಚೆತ್ತ ಬೆಂಗಳೂರು
ಏನೂ ಅರಿಯದ ಚಿಕ್ಕ ಮಗುವಿನ ಮೇಲೆ ನಡೆದ ಬರ್ಬರ ಅತ್ಯಾಚಾರದ ವಿರುದ್ಧ ಕಡೆಗೂ ಕೂಗೆಬ್ಬಿಸಿದೆ.