ಕನ್ನಡ ಪಾದ್ರಿನೋ,ತಮಿಳು ಪಾದ್ರಿನೋ? ಬೆಂಗಳೂರಿನಲ್ಲಿ ಚಕಮಕಿ
ಕನ್ನಡ ಬಿಷಪ್ ನೇಮಕದ ವಿರುದ್ದ ನಗರದ ಹೃದಯ ಭಾಗದಲ್ಲಿರುವ ಸೆಂಟ್ರಲ್ ಡಯೋಸಿಸ್ ಚರ್ಚ್ ಆಫ್ ಇಂಡಿಯಾ ಕಚೇರಿಯ ಬೀಗವನ್ನು ತಮಿಳು ಭಾಷಿಗರು ಇಂದು ಬಲವಂತವಾಗಿ ತೆರೆಯಲು ಯತ್ನಿಸಿದರು.
ಅಲ್ಲಿ ಕನ್ನಡ ಮತ್ತು ತಮಿಳು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯಲಾರಂಭಿಸಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಎಸಿಪಿ ಸಿದ್ರಾಮಪ್ಪ ಎರಡೂ ಭಾಷಿಗರ ಜೊತೆ ಸಂಧಾನ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಕರ್ನಾಟಕಕ್ಕೆ ಕನ್ನಡಿಗ ಬಿಷಪ್ ನೇಮಕ ಮಾಡಬೇಕೆಂದು ಟೌನ್ ಹಾಲ್ ಸಮೀಪದ ಸೆಂಟ್ರಲ್ ಡಯೋಸಿಸ್ ಚರ್ಚ್ ಆಫ್ ಇಂಡಿಯಾ ಕಚೇರಿಯ ಮುಂದೆ ಕನ್ನಡ ಭಾಷಿಗ ಕ್ರೈಸ್ತ ಸಮುದಾಯದವರು ಕಚೇರಿಗೆ ಬೀಗ ಜಡಿದು 147 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಗಳವಾರ ಇದ್ದಕ್ಕಿದ್ದಂತೆ ತಮಿಳು ಭಾಷಿಗರು ಅಲ್ಲಿ ಜಮಾಯಿಸಿ ಕಚೇರಿಯ ಬಾಗಿಲು ತೆರೆಯಲು ಯತ್ನಿಸಿದರು. ಇದರಿಂದ ಎರಡೂ ಭಾಷಿಗರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.
ಘಟನೆಯ ಬಗ್ಗೆ 'ಒನ್ ಇಂಡಿಯಾ' ಜೊತೆ ಮಾತನಾಡುತ್ತಿದ್ದ ಕನ್ನಡ ಪರ ಹೋರಾಟದ ಜಾನ್, ದಕ್ಷಿಣ ಭಾರತದ ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಆಯಾಯ ಭಾಷೆಯ ಬಿಷಪ್ ಗಳನ್ನು ನೇಮಕ ಮಾಡುತ್ತಾರೆ. ಕರ್ನಾಟಕದಲ್ಲಿ ಮಾತ್ರ ತಮಿಳರನ್ನು ಆಯ್ಕೆ ಮಾಡುತ್ತಾರೆ. ಇದಕ್ಕಾಗಿ ನಾವು ಪ್ರತಿಭಟನೆ ಸಲ್ಲಿಸುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಜಯ ಸಿಗುವವರೆಗೂ ನಾವು ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಇಎಸ್ಐ ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಮನೋಹರ್ ಚಂದ್ರ ಪ್ರಸಾದ 'ಒನ್ ಇಂಡಿಯಾ' ಜೊತೆ ಮಾತನಾಡುತ್ತಾ, ಇತ್ತೀಚೆಗೆ ಬಿಷಪ್ ಆಯ್ಕೆ ಸಂಬಂಧ ನಡೆದ ಚುನಾವಣೆಯಲ್ಲಿ ನಾಲ್ವರ ಪೈಕಿ ಮೂವರು ಕನ್ನಡದವರು ಆಯ್ಕೆಯಾಗಿದ್ದಾರೆ. ಬಿಷಪ್ ಅಧಿಕೃತ ಘೋಷಣೆ ಚೆನ್ನೈ ನಗರದಲ್ಲಿ ಮಾಡಲಾಗುತ್ತದೆ. ಈ ಹಿಂದೆ ಕನ್ನಡದವರು ಆಯ್ಕೆಯಾಗಿದ್ದರೂ ಬಿಷಪ್ ಆಗಿ ತಮಿಳರನ್ನು ಆಯ್ಕೆ ಮಾಡಲಾಗುತ್ತಿತ್ತು.
ಬುಧವಾರ (ನ 20) ಇದಕ್ಕೆ ಪರಿಹಾರ ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದೇವೆ. ನಮಗೆ ಕರವೇ, ಜಯ ಕರ್ನಾಟಕ ಸೇರಿದಂತೆ ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡುತ್ತಿದೆ. ನಮ್ಮ ಹೋರಾಟಕ್ಕೆ ಜಯ ಸಿಗುವವರೆಗೂ ನಾವು ಸುಮ್ಮನೆ ಕೂರುವುದಿಲ್ಲ ಎಂದಿದ್ದಾರೆ.