ಮತ್ತೆ ಬಂದ 'ಪವಾಡ ಪುರುಷ'ನ ವಿರುದ್ಧ ಪ್ರತಿಭಟನೆ
ಜೀಸಸ್ ಕ್ರಿಸ್ತನ ಆಶೀರ್ವಾದದಿಂದ ಎಂಥ ರೋಗವನ್ನೂ ಗುಣಪಡಿಸುವುದಾಗಿ ಹೇಳಿ ಮತಾಂತರ ಮಾಡುವ ಢೋಂಗಿ ಧರ್ಮಗುರುವನ್ನು ಭಾರತಕ್ಕೆ ಬರಲು ಬಿಡಬಾರದು. ಆತ ಬಂದರೆ ಕೂಡಲೆ ಬಂಧಿಸಬೇಕು, ಆತನ ಕಾರ್ಯಕ್ರಮವನ್ನು ನಿಷೇಧಿಸಬೇಕು ಎಂದು ಆರ್ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ಘಟಕ ಈ ಪ್ರತಿಭಟನೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮತಾಂತರದ ಕಟ್ಟಾ ವಿರೋಧಿ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ಮತ್ತು ಸಂಘ ಪರಿವಾರದ ಇತರ ಹಿರಿಯ ನಾಯಕರು ಮತ್ತು ನೂರಾರು ಕಾರ್ಯಕರ್ತರು ಬೆನ್ನಿ ಹಿನ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜನವರಿ 15ರಿಂದ ಜ.19ರವರೆಗೆ ಇಸ್ರೇಲ್ ಮೂಲದ ಬೈಬಲ್ ಶಿಕ್ಷಕ ಬೆನ್ನಿ ಹಿನ್ ಬೆಂಗಳೂರಿನ ಯಲಹಂಕದಲ್ಲಿರುವ ಸೂಪರ್ ನೋವಾ ಅರೀನಾ ಪ್ರದೇಶದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಸಮ್ಮೇಳವನ್ನು ಹಮ್ಮಿಕೊಂಡಿದ್ದಾನೆ. ಪ್ರತಿದಿನ ಸಂಜೆ 4ರಿಂದ 9 ಗಂಟೆಯವರೆಗೆ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ನೋಂದಾವಣಿ ಕೂಡ ಭರ್ಜರಿಯಾಗಿ ಸಾಗಿದೆ. ಬೆನ್ನಿ ಹಿನ್ ಸೇರಿದಂತೆ ಐವರು ಧರ್ಮಗುರುಗಳು ಕ್ರಿಶ್ಚಿಯನ್ನರಿಗೆ ಬೋಧಿಸಲಿದ್ದಾರೆ.
ಈ ಪ್ರಾರ್ಥನಾ ಕಾರ್ಯಕ್ರಮ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ದೇವರ ಬಗ್ಗೆ, ಪ್ರಾರ್ಥಿಸುವ ಬಗ್ಗೆ ಮತ್ತು ಪವಿತ್ರ ಆತ್ಮದ ಬಗ್ಗೆ ತಿಳಿಸಿಕೊಡಲಾಗುವುದು. ಕೂಡಲೆ ನೋಂದಾಯಿಸಿ ಎಂಬ ಕರೆಯನ್ನು ನೀಡಲಾಗಿದೆ. ಈ ಪ್ರಾರ್ಥನಾ ಸಭೆಯೇನು ಬಿಟ್ಟಿಯಲ್ಲ. ಇದಕ್ಕಾಗಿ 850 ರು. ತೆತ್ತಬೇಕಾಗಿದೆ. ಹಣ ಪಡೆಯುವ ಉಸ್ತುವಾರಿಯನ್ನು ಬೆಥೆಲ್ ಎಜಿ ಚರ್ಚ್ ನೋಡಿಕೊಳ್ಳುತ್ತಿದೆ. ಒಮ್ಮೆ ನೀಡಿದ ಹಣವನ್ನು ವಾಪಸ್ ನೀಡಲಾಗುವುದಿಲ್ಲ ಎಂದು ವೆಬ್ ಸೈಟ್ ನಲ್ಲಿ ಹೇಳಲಾಗಿದೆ.
ಸರಿಯಾಗಿ ಎಂಟು ವರ್ಷಗಳ ಹಿಂದೆ 2005ರಲ್ಲಿ ಜನವರಿ ತಿಂಗಳಲ್ಲೇ ಬೆನ್ನಿ ಹಿನ್ ಬಂದಿದ್ದ. ಆಗ ಕೂಡ ಭಾರೀ ಪ್ರತಿಭಟನೆಗಳು ನಡೆದಿದ್ದವು. ಆತನ ವಿರುದ್ಧ ಐದು ಕ್ರಿಮಿನಲ್ ಕೇಸುಗಳು ಕೂಡ ದಾಖಲಾಗಿದ್ದವು. ಬೆನ್ನಿ ಹಿನ್ ವೇದಿಕೆಯ ಮೇಲೆ ರೋಗಿಯೊಬ್ಬರನ್ನು ತಳ್ಳಿದ್ದರಿಂದ ಆತ ಹೃದಯಾಘಾತವಾಗಿ ಸತ್ತು ಹೋಗಿದ್ದ. ಕೆಲವರು ಬೆನ್ನಿ ಹಿನ್ ಸ್ಪರ್ಶದಿಂದ ಕ್ಷಣಮಾತ್ರದಲ್ಲಿ ರೋಗ ಮುಕ್ತರಾಗಿ ಕುಣಿದು ಕುಪ್ಪಳಿಸಿದ್ದು ಟಿವಿಯಲ್ಲಿ ದಾಖಲಾಗಿತ್ತು. ಇದನ್ನೆಲ್ಲ ನಂಬುವುದು ಬಿಡುವುದು ಜನರಿಗೆ ಬಿಟ್ಟಿದ್ದು.