ಡಿ.ಕೆ. ಶಿವಕುಮಾರ್ ಪರ ಪ್ರತಿಭಟನೆ : ಯಾರು, ಏನು ಹೇಳಿದರು?
ಬೆಂಗಳೂರು, ಸೆಪ್ಟೆಂಬರ್ 11 : ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ. ಕೆ. ಶಿವಕುಮಾರ್ ಬಂಧನ ಖಂಡಿಸಿ ಸಮುದಾಯದ ನಾಯಕರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವ ಒಕ್ಕಲಿಗರ ಒಕ್ಕೂಟದಡಿ ಪ್ರತಿಭಟನೆ ನಡೆಯುತ್ತಿದೆ.
ಬುಧವಾರ ಬೆಂಗಳೂರಿನ ಬಸನವಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭವಾದ ಪ್ರತಿಭಟನೆ ಫ್ರೀಡಂ ಪಾರ್ಕ್ ತಲುಪಿತು. ಬೃಹತ್ ಪ್ರತಿಭಟನೆಯಲ್ಲಿ ಕಾಂಗ್ರೆಸ್ನ ಹಲವು ನಾಯಕರು ಪಾಲ್ಗೊಂಡಿದ್ದಾರೆ.
ದ್ವೇಷ ರಾಜಕಾರಣ ಸಹಿಸಲು ಸಾಧ್ಯವಿಲ್ಲ : ದಿನೇಶ್ ಗುಂಡೂರಾವ್
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ವಿ. ಎಸ್. ಉಗ್ರಪ್ಪ, ಶಾಸಕಿ ಸೌಮ್ಯಾ ರೆಡ್ಡಿ, ಬಿಬಿಎಂಪಿಯ ಅನೇಕ ಸದಸ್ಯರು ಭಾಗವಹಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ.
"ವಿಜಿ ಸಿದ್ದಾರ್ಥ ಆತ್ಮಹತ್ಯೆಯಲ್ಲ ಐಟಿ ಇಲಾಖೆ ಮಾಡಿದ ಕೊಲೆ"
* ದಿನೇಶ್ ಗುಂಡೂರಾವ್ : "ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡಬಾರದು ಎಂಬ ಸಂದೇಶ ಜನ ಸಮೂಹದ ಮೂಲಕ ವ್ಯಕ್ತವಾಗಿದೆ. ಇಲ್ಲಿ ಇಂದು 50 ಸಾವಿರದಷ್ಟು ಜನರು ಸೇರಿದ್ದು, ಇದು ಕೇಂದ್ರಕ್ಕೆ ನೀಡುವ ಪ್ರತ್ಯುತ್ತರ. ಕೇಂದ್ರ ಸರ್ಕಾರ ಐಟಿ, ಇಡಿಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಡಿಕೆಶಿ ಪರ ಪ್ರತಿಭಟನೆ : ಒಕ್ಕಲಿಗರ ವಿರೋಧಿ ಬಿಜೆಪಿ ಎಂಬ ಘೋಷಣೆ
* ಕೃಷ್ಣ ಬೈರೇಗೌಡ : "ಕೇಂದ್ರ ಸರ್ಕಾರ ಹೇಡಿ ರಾಜಕಾರಣ ಮಾಡುತ್ತಿದೆ. ಐಟಿ, ಇಡಿಯಂತಹ ಸಂಸ್ಥೆಗಳನ್ನು ನಾಯಿಯಂತೆ ಬಳಸಿಕೊಳ್ಳುತ್ತಿದೆ. ವಿಜಯ್ ಮಲ್ಯ, ನೀರವ್ ಮೋದಿ ಮೇಲೆ ಐಟಿ, ಇಡಿ ದಾಳಿ ಏಕೆ ನಡೆದಿಲ್ಲ" ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆ ಮಾಡಿದರು.
* ರಾಮಲಿಂಗಾ ರೆಡ್ಡಿ: "ಕೇಂದ್ರ ಸರ್ಕಾರ ಮೂರು ವರ್ಷದಿಂದ ದುರುದ್ದೇಶದಿಂದ ಡಿ. ಕೆ. ಶಿವಕುಮಾರ್ ಮೇಲೆ ಹಗೆ ಸಾಧಿಸುತ್ತಿದೆ. ಐಟಿ, ಇಡಿ, ಸಿಬಿಐಯಂತಹ ಸ್ವಾಯುಕ್ತ, ಸ್ವತಂತ್ರ್ಯ ಸಂಸ್ಥೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಲಚಕ್ರ ಹೀಗೆ ಇರುವುದಿಲ್ಲ. ದೇಶಾದ್ಯಂತ ವಿಪಕ್ಷ ನಾಯಕರ ಮೇಲೆ ದಾಳಿಯಾಗುತ್ತಿದೆ" ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದರು.
* ಎಲ್. ಆರ್. ಶಿವರಾಮೇಗೌಡ : ಮಂಡ್ಯದ ಮಾಜಿ ಸಂಸದ ಮತ್ತು ಜೆಡಿಎಸ್ ನಾಯಕ ಎಲ್. ಆರ್. ಶಿವರಾಮೇಗೌಡ ಮಾತನಾಡಿ, "ಗುಜರಾತ್ ಎಂಎಲ್ಎಗಳಿಗೆ ರಕ್ಷಣೆಕೊಟ್ಟ ತಕ್ಷಣ ಐಟಿ ದಾಳಿ ಮಾಡಲಾಗಿದೆ. ಡಿ. ಕೆ. ಶಿವಕುಮಾರ್ ಪ್ರಬಲ ನಾಯಕ ಹೀಗಾಗಿಯೇ ಅವರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ವಿರೋಧಿ ಪಕ್ಷವನ್ನು ಮುಗಿಸುವ ಕೆಲಸವಾಗುತ್ತಿದೆ" ಎಂದು ಆರೋಪಿಸಿದರು.
* ಮಾಗಡಿ ಬಾಲಕೃಷ್ಣ : ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್. ಸಿ. ಬಾಲಕೃಷ್ಣ ಮಾತನಾಡಿ, "ಡಿ. ಕೆ. ಶಿವಕುಮಾರ್ಗೆ ನೈತಿಕ ಬೆಂಬಲ ನೀಡಲು ಈ ಪ್ರತಿಭಟನೆ. ಅವರು ಯಾವುದೇ ತಪ್ಪು ಮಾಡಿಲ್ಲ. ಈಗ ಅವರ ಮಗಳಿಗೆ ನೋಟಿಸ್ ನೀಡಿದ್ದಾರೆ. ಡಿ. ಕೆ. ಶಿವಕುಮಾರ್ರನ್ನು ಪೊಲೀಸ್ ಠಾಣೆಯಲ್ಲಿ ನಡೆಸಿಕೊಳ್ಳುತ್ತಿರುವ ರೀತಿಗೆ ಬೇಸರವಾಗಿದೆ. ಸಾಮಾನ್ಯ ಆರೋಪಿಯಂತೆ ನಡೆಸಿಕೊಳ್ಳುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.