ಭಾನುವಾರದ ಬೆಂಗಳೂರು ಕಿಸ್ ಆಫ್ ಲವ್ ಕ್ಯಾನ್ಸಲ್
ಬೆಂಗಳೂರು, ನ. 29: ಪೊಲೀಸರು ಅನುಮತಿ ನಿರಾಕರಿಸಿದ್ದರೂ ಭಾನುವಾರ ನಗರದ ಟೌನ್ ಹಾಲ್ ಎದುರು ಕಿಸ್ ಆಫ್ ಲವ್ ಆಯೋಜಿಸಿಯೇ ತೀರುವುದಾಗಿ ಪಟ್ಟು ಹಿಡಿದಿದ್ದ ಸಂಘಟಕರಿಗೆ ಹಿನ್ನಡೆಯಾಗಿದೆ.
ಕಿಸ್ ಆಫ್ ಲವ್ ಆಂದೋಲನಕ್ಕೆ ಅನುಮತಿ ನೀಡಲು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. [ಕಿಸ್ ಆಫ್ ಲವ್ ನಡೆಯುತ್ತಾ?]
ಶನಿವಾರ ಪೊಲೀಸ್ ಆಯುಕ್ತರನ್ನು ಅವರ ಕಚೇರಿಯಲ್ಲೇ ಭೇಟಿ ಮಾಡಿದ ಕಿಸ್ ಆಫ್ ಲವ್ ಆಂದೋಲನದ ಸದಸ್ಯರು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದರು.
ಆದರೆ, ಮನವಿಯಲ್ಲಿ ಕಾರ್ಯಕ್ರಮದ ಕುರಿತು ಸ್ಪಷ್ಟ ರೂಪುರೇಷೆ ನೀಡದ ಕಾರಣ ಅನುಮತಿ ನೀಡುವುದು ಸಾಧ್ಯವಿಲ್ಲ ಎಂದು ಎಂ.ಎನ್. ರೆಡ್ಡಿ ತಿಳಿಸಿದರು. [ಕಿಸ್ ಆಫ್ ಲವ್ : ವಿದ್ಯಾರ್ಥಿಗಳು ಏನಂತಾರೆ?]
ಹೊಸ ರೂಪುರೇಷೆ ಪರಿಶೀಲಿಸ್ತೇವೆ: ಆದರೆ, ಕಿಸ್ ಆಫ್ ಲವ್ ಕಾರ್ಯಕರ್ತರು ಶನಿವಾರವಷ್ಟೇ ನೀಡಿರುವ ಮನವಿಯಲ್ಲಿ ಹೊಸದಾಗಿ ರೂಪುರೇಷೆ ನೀಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಆದರೆ, ಅಲ್ಲಿಯವರೆಗೆ ಉದ್ದೇಶಿತ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದರು. [ಕಿಸ್ ಆಫ್ ಲವ್ ವಿರುದ್ಧ ಒನಕೆ ಚಳವಳಿ]
ಮತ್ತೆ ಸಂಘಟಿಸುತ್ತೇವೆ: ಪೊಲೀಸ್ ಆಯುಕ್ತರ ಸ್ಪಷ್ಟ ಸೂಚನೆ ಮೇರೆಗೆ ಭಾನುವಾರ ಉದ್ದೇಶಿಸಿದ್ದ ಆಂದೋಲನ ರದ್ದುಪಡಿಸಿದ್ದೇವೆ. ಆದರೆ, ಈ ಕುರಿತು ಮತ್ತೊಮ್ಮೆ ರೂಪುರೇಷೆ ಸಿದ್ಧಪಡಿಸಿ, ಕಾರ್ಯಕ್ರಮ ಸಂಘಟಿಸುವುದಾಗಿ ಕಿಸ್ ಆಫ್ ಲವ್ ಕಾರ್ಯಕರ್ತರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಿಸ್ ವಿರುದ್ಧ ನ್ಯಾಯಾಲಯ ಗರಂ: ನೈತಿಕ ಪೊಲೀಸ್ಗಿರಿ ವಿರುದ್ಧ ಹೋರಾಟದ ಹೆಸರಿನಲ್ಲಿ ಕಿಸ್ ಆಫ್ ಲವ್ ಆಯೋಜಿಸಲು ಹೊರಟಿರುವ ಕಾರ್ಯಕರ್ತರ ಮೇಲೆ ನ್ಯಾಯಾಲಯ ಕೆಂಡ ಕಾರಿದೆ.
ಕಿಸ್ ಆಫ್ ಲವ್ ವಿರುದ್ಧ ಹಿಂದು ಪರ ಸಂಘಟನೆಗಳಾದ ಹಿಂದೂ ಮಹಾಸಭಾ ಹಾಗೂ ಶ್ರೀರಾಮಸೇನೆ ಬೆಂಗಳೂರಿನ 6ನೇ ಎಸಿಸಿಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. [ಸಿಎಂ ಸಿದ್ದರಾಮಯ್ಯ ಎಚ್ಚರಿಕೆ]
ಶನಿವಾರ ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶರು, ಕಿಸ್ ಆಫ್ ಲವ್ ಸಂಘಟಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಈ ಆಂದೋಲನ ಆಯೋಜಿಸಿದರೆ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಲ್ವರ್ ಜ್ಯುಬಿಲಿ ಪಾರ್ಕ್ ರಸ್ತೆಯ ಪೊಲೀಸ್ ಠಾಣೆ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ದೂರಿನಲ್ಲಿ ಮೊದಲ ಆರೋಪಿಯಾಗಿ ಕಾರ್ಯಕ್ರಮದ ಮುಖ್ಯ ಸಂಘಟಕಿ ರಚಿತಾ ತನೇಜಾ ಹಾಗೂ ಎರಡನೇ ಆರೋಪಿಯಾಗಿ ಮಾಧ್ಯಮ ಸಂಯೋಜಕ ವಿಜಯನ್ ಅವರನ್ನು ಹೆಸರಿಸಲಾಗಿದೆ.
ನ್ಯಾಯಾಲಯದ ಆದೇಶ ಪರಿಶೀಲಿಸಿ ಉತ್ತರ ನೀಡ್ತೇವೆ: ನ್ಯಾಯಾಲಯದ ಆದೇಶದ ಕುರಿತು 'ಒನ್ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ ಕಿಸ್ ಆಫ್ ಲವ್ ಕಾರ್ಯಕರ್ತ ದಿಲೀಪ್, ನ್ಯಾಯಾಲಯದ ಆದೇಶದ ಪ್ರತಿಯನ್ನು ನಾವಿನ್ನೂ ನೋಡಿಲ್ಲ. ಅದನ್ನು ನೋಡಿ, ಪರಿಶೀಲಿಸಿದ ಮೇಲೆ ಪ್ರತಿಕ್ರಿಯೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.