KSRP ಪೊಲೀಸ್ ಮುಖದಲ್ಲಿ ಸಂತಸ ಮೂಡಿಸಿದ ಅಲೋಕ್ ಕುಮಾರ್
ಬೆಂಗಳೂರು, ಫೆಬ್ರವರಿ 25 : ಪೊಲೀಸ್ ಇಲಾಖೆಯಲ್ಲಿ ಕತ್ತೆ ತರ ಹತ್ತಾರು ವರ್ಷ ದುಡಿದ್ರೆ ಮಾತ್ರ ಬಡ್ತಿ ಎಂಬ ಮಾತು ಇದೆ. ಆದರೆ ಇದನ್ನು ಕರ್ನಾಟಕ ರಾಜ್ಯ ಮೀಸಲು ಪಡೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಸುಳ್ಳಾಗಿಸಿದ್ದಾರೆ. ಹೌದು. ಕರ್ನಾಟಕ ರಾಜ್ಯ ಮೀಸಲು ಪಡೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರು ವರ್ಷ ಸೇವೆ ಪೂರೈಸಿದ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಬಡ್ತಿ ನೀಡಿದ್ದಾರೆ.
ಆರು ವರ್ಷ ಸೇವೆ ಪೂರೈಸಿದ ಕರ್ನಾಟಕ ರಾಜ್ಯ ಮೀಸಲು ಪಡೆಯ 126 ಪುರುಷ ಅಭ್ಯರ್ಥಿಗಳಿಗೆ ಮುಖ್ಯ ಪೇದೆ ಹುದ್ದೆಗೆ ಬಡ್ತಿ ನೀಡಲಾಗಿದೆ. ಅಲ್ಲದೇ 4 ರಿಂದ 5 ವರ್ಷ ಸೇವೆ ಸಲ್ಲಿಸಿದ 72 ಮಹಿಳಾ ಅಭ್ಯರ್ಥಿಗಳಿಗೆ ಕೂಡ ಬಡ್ತಿ ನೀಡಿದ್ದಾರೆ. ಈ ಮೂಲಕ ಹತ್ತು ವರ್ಷ ಸೇವೆ ಸಲ್ಲಿಸಿದರೂ ಬಡ್ತಿ ಸಿಗದೇ ಪರದಾಡುತ್ತಿದ್ದ ಪೊಲೀಸ್ ಸಿಬ್ಬಂದಿಯಲ್ಲಿ ಸಂತಸ ಮನೆ ಮಾಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಇಂತಹ ಕಾರ್ಯ ಆಗಿದೆ ಎಂದು ಕೆಎಸ್ ಆರ್ ಪಿ ಪಡೆಯ ಮುಖ್ಯಸ್ಥ ಅಲೋಕ್ ಕುಮಾರ್ ಕೂಡ ಸಂತಸ ಹಂಚಿಕೊಂಡಿದ್ದಾರೆ. ಇದು ರಾಜ್ಯ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಕಂದಾಯ, ಸೇರಿದಂತೆ ಯಾವುದೇ ಇಲಾಖೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದರೆ ಕಡ್ಡಾಯ ಬಡ್ತಿ ಸಿಗುತ್ತದೆ. ಆದರೆ ಪೊಲೀಸ್ ಇಲಾಖೆಯಲ್ಲಿ ಅದೊಂತರ ಲಾಟರಿ ಟಿಕೆಟ್ ಇದ್ದಂಗೆ. ಸಿಕ್ಕರೆ ಅದೃಷ್ಟ ಸಿಗಲಿಲ್ಲ ಏನೂ ಮಾಡಲಿಕ್ಕೆ ಆಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಹಿಂದೆ ಪೊಲೀಸರು ಬೀದಿಗೆ ಇಳಿದಾಗಲೂ ಬಡ್ತಿ ಬಗ್ಗೆ ಪಸ್ತಾಪಿಸಿದ್ದರು. ಈ ಕುರಿತು ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ವರದಿಯಲ್ಲಿ ಕೂಡ ಬಡ್ತಿ ಸಂಗತಿ ಪ್ರಸ್ತಾಪವಾಗಿತ್ತು. ಬಡ್ತಿ ಅನ್ನೋದನ್ನೇ ಮರೆತಿದ್ದ ರಾಜ್ಯ ಮೀಸಲು ಪಡೆಯ ಸಿಬ್ಬಂದಿಗೆ ಐದು ವರ್ಷಕ್ಕೆ ಪದೋನ್ನತಿ ಸಿಗುವ ಹಾಗೆ ಮಾಡಿರುವ ಅಲೋಕ್ ಕುಮಾರ್ ಕಾರ್ಯ ಮೀಸಲು ಪಡೆಯ ಸಿಬ್ಬಂದಿಯ ಸಂತಸ ಇಮ್ಮುಡಿಗೊಳಿಸಿದೆ.
Recommended Video
ಸ್ಲಿಮ್ ಟಾಸ್ಕ್ ಅಲೋಕ್ : ಕೂತಲ್ಲೇ ಹೊಟ್ಟೆ ಬಿಟ್ಟುಕೊಂಡು ದೇಹ ಬೆಳೆಸಿಕೊಂಡಿದ್ದ ಕರ್ನಾಟಕ ರಾಜ್ಯ ಮೀಸಲು ಪಡೆಯ ಸಿಬ್ಬಂದಿಗೆ ವಯೋಮಿತಿ ಆಧಾರದ ಮೇಲೆ ತೂಕ ಇಳಿಸುವ ಟಾಸ್ಕ್ ನ್ನು ಅಲೋಕ್ ಕುಮಾರ್ ನೀಡಿದ್ದರು. ಆರಂಭದಲ್ಲಿ ಪೊಲೀಸರಿಂದ ಅಪರಸ್ವರ ಕೇಳಿ ಬಂದಿತ್ತು. ಬೆಳಗಿನಿಂದ ಸಂಜೆ ವರಗೂ ಕೆಲಸ ಮಾಡುವ ಜತೆಗೆ ಬೆಳಗ್ಗೆ ಎದ್ದು ಓಡುವರು ಯಾರು ? ಎಂದು ಅಸಮಾಧಾನ ತೋಡಿಕೊಂಡಿದ್ದರು. ಆದರೆ, ಹಂತ ಹಂತವಾಗಿ ಸಿಬ್ಬಂದಿ ತೂಕ ಇಳಿಸಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಇದೀಗ ಮೀಸಲು ಪಡೆಯ ಸಿಬ್ಬಂದಿಯೇ ಸ್ವಯಂ ಪ್ರೇರಿತವಾಗಿ ತೂಕ ಇಳಿಸಿಕೊಳ್ಳುವ ಟಾಸ್ಕ್ ತೆಗೆದುಕೊಂಡು ದೇಹ ದಂಡನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಾದ ಮೂಲಕ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ನಿರ್ಗಮಿಸಿದ ಅಲೋಕ್ ಕುಮಾರ್ ಮೀಸಲು ಪಡೆಯ ಸಿಬ್ಬಂದಿಯಲ್ಲಿ ನಾನಾ ಬದಲಾವಣೆ ತರುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.