ಪ್ರೊ. ವೈದ್ಯನಾಥನ್ "ಕಾಸ್ಟ್ ಆಸ್ ಸೋಷಿಯಲ್ ಕ್ಯಾಪಿಟಲ್' ಪುಸ್ತಕ ಬಿಡುಗಡೆ
ಬೆಂಗಳೂರು, ಮಾರ್ಚ್ 31: ಲೇಖಕ ಹಾಗೂ ಆರ್ಥಿಕ ತಜ್ಞ ಪ್ರೊ. ಆರ್. ವೈದ್ಯನಾಥನ್ ಅವರ "ಕಾಸ್ಟ್ ಆಸ್ ಸೋಷಿಯಲ್ ಕ್ಯಾಪಿಟಲ್' ಪುಸ್ತಕವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಬಿಡುಗಡೆಗೊಳಿಸಲಾಯಿತು.
ಏರಿಯನ್ ಕ್ಯಾಪಿಟಲ್ ನ ಅಧ್ಯಕ್ಷ ಮೋಹನ್ ದಾಸ್ ಪೈ, ಐಆರ್ ಡಿನ ಮಾಜಿ ಅಧ್ಯಕ್ಷ ಎನ್ ರಂಗಾಚಾರಿ, ಶ್ರೀರಾಮ್ ಪ್ರಾಪರ್ಟೀಸ್ ನ ವ್ಯವಸ್ಥಾಪಕ ನಿರ್ದೇಶಕ ಮುರಳಿ ಎಂ. ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ರಾಜೀವ್ ಗಾಂಧಿ ಹತ್ಯೆ ಕುರಿತ ಪುಸ್ತಕ ಬಿಡುಗಡೆ ಮಾಡಿದ ಕುಮಾರಸ್ವಾಮಿ
ವಾಣಿಜ್ಯ, ಆರ್ಥಿಕತೆ ಹಾಗೂ ಉದ್ಯಮದಲ್ಲಿ ಜಾತಿ ಎಂಬ ಪರಿಕಲ್ಪನೆಯೊಂದಿಗೆ ಲೇಖಕ ಪ್ರೊ. ಆರ್ ವೈದ್ಯನಾಥನ್, ಮೋಹನ್ ದಾಸ್ ಪೈ, ಎನ್. ರಂಗಾಚಾರಿ, ಮುರಳಿ ಎಂ. ಅವರ ಸಂವಾದ ನಡೆಯಿತು.
ಪ್ರಸ್ತುತ ಜಾತಿ ವ್ಯವಸ್ಥೆಯ ಕುರಿತು ಮಾತನಾಡಿದ ಪ್ರೊ. ಆರ್. ವೈದ್ಯನಾಥನ್ ಅವರು, "ಭಾರತದಲ್ಲಿ, ಜಾತಿಗೆ ತಕ್ಕಂತೆ ಸುಮಾರು 800 ಸಮುದಾಯಗಳು ವಿಭಜಿತವಾಗಿವೆ. ಪ್ರತಿ ಪ್ರದೇಶದಲ್ಲಿನ ಕೃಷಿಕರು ಹಾಗೂ ಇನ್ನಿತರ ಕಾಯಕದಲ್ಲಿ ತೊಡಗಿಕೊಂಡಿದ್ದವರಿಂದ ಈ ಸಮುದಾಯಗಳು ರೂಪಿತಗೊಂಡಿದ್ದವು. 1881ರ ಸಮಯದಿಂದ ಸೃಷ್ಟಿಯಾಗಿರುವ ಜಾತಿಗಳಲ್ಲಿನ ನಾಲ್ಕು ಮುಖ್ಯ ವಿಭಾಗಗಳು ಹಾಗೂ ಕಾಲ ಕಳೆದಂತೆ ಜಾತಿಗಳು ಉಪ ಜಾತಿಗಳಾಗಿ ಮಾರ್ಪಾಡಾಗುವಾಗ ಕಂಡ ಸವಾಲುಗಳ ಕುರಿತು ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ. ವಿಷಯಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನೂ ನೀಡಲಾಗಿದೆ' ಎಂದು ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಭಾರತದಲ್ಲಿ ಜಾತಿ ವ್ಯವಸ್ಥೆಯ ರಚನೆಯ ಕುರಿತು ಮಾತನಾಡಿದ ಟಿ.ವಿ. ಮೋಹನ್ ದಾಸ್ ಪೈ, "ನಾಗರೀಕತೆಯ ಅತಿ ದೀರ್ಘ ವರ್ಷಗಳ ಫಲವೇ ಸಮಾಜದ ರಚನೆ. ಭಾರತದಲ್ಲಿ ನಮ್ಮ ಹಿರಿಯರು, ನಾಗರೀಕತೆಯ ನಿಜ ಸಂಪತ್ತು ಜ್ಞಾನ ಎಂದಿದ್ದರು. ಜಾತಿ ರಚನೆಗೆ ಕಾರಣವಾಗಿರುವ, ಸಮಾಜದಲ್ಲಿನ ವರ್ಣಗಳ ವ್ಯಾಖ್ಯಾನಕ್ಕೆ ಜ್ಞಾನವೇ ಕೀಲಿಕೈ. ಜಾತಿ ಆಧಾರಿತ ಸಮಾಜ ರಚನೆಯನ್ನು, ಒಟ್ಟಾರೆ ಸಮಾಜವು ಇದರಿಂದ ಹೇಗೆ ಪ್ರಯೋಜನ ಪಡೆದುಕೊಂಡಿತು ಎಂಬುದರ ಕುರಿತು ಅರ್ಥೈಸಿಕೊಳ್ಳಬೇಕಿದೆ. ಜಾತಿಯ ಕೆಲವು ಒಳ್ಳೆಯ ಉದ್ದೇಶಗಳು ಹಾಗೂ ಸಮಾಜದ ಬೆಳವಣಿಗೆಗೆ ಅದು ಹೇಗೆ ಕಾರಣವಾಯಿತು ಎಂಬುದನ್ನು ಈ ಪುಸ್ತಕ ತೆರೆದಿಡುತ್ತದೆ' ಎಂದರು.
"ವೈದ್ಯನಾಥನ್ ಅವರು ಬರೆದಿರುವ ಇನ್ನಿತರ ಪುಸ್ತಕಗಳಲ್ಲಿ ನಾನು ಭಾಗಿಯಾಗಿದ್ದೆ. ಇದೀಗ ಅವರು ಆರ್ಥಿಕತೆಯಲ್ಲಿ ಜಾತಿ ಎಂಬ ದೃಷ್ಟಿಕೋನದಲ್ಲಿ ಪುಸ್ತಕ ರಚಿಸಿದ್ದಾರೆ. ಸಮಾಜದಲ್ಲಿ ಜಾತಿ ವ್ಯವಸ್ಥೆ, ಹಾಗೂ ಆರ್ಥಿಕತೆಯ ದೃಷ್ಟಿಕೋನದಲ್ಲಿ ಜಾತಿಯ ಕುರಿತು ನೈಜಾಂಶ ಹಾಗೂ ಅಂಕಿಅಂಶಗಳ ಮೂಲಕ ವಿವರಿಸಿದ್ದಾರೆ ಎಂದರು ಐಆರ್ ಡಿಎ ಮಾಜಿ ಅಧ್ಯಕ್ಷ ಎನ್ ರಂಗಾಚಾರಿ.
"ಕಾಸ್ಟ್ ಆಸ್ ಸೋಷಿಯಲ್ ಕ್ಯಾಪಿಟಲ್'-ವಾಣಿಜ್ಯ, ಉದ್ಯಮ, ಮಾರುಕಟ್ಟೆ... ಹೀಗೆ ಆರ್ಥಿಕತೆಯ ಕೆಲವು ಮುಖ್ಯ ಕ್ಷೇತ್ರಗಳಲ್ಲಿ ಜಾತಿಯ ಪಾತ್ರದ ಕುರಿತು ವಿವರಿಸುತ್ತದೆ. ಸಾಮಾನ್ಯವಾಗಿ ಜಾತಿಯನ್ನು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಕೋನದಲ್ಲಿ ನೋಡಲಾಗುತ್ತದೆ. ಈ ಪುಸ್ತಕದಲ್ಲಿ ಆರ್ಥಿಕ ದೃಷ್ಟಿಕೋನದಲ್ಲಿ ಜಾತಿಯನ್ನು ನೋಡಲಾಗಿದೆ.
ಪ್ರೊ. ವೈದ್ಯನಾಥನ್ ಅವರು ತಮ್ಮ ಪದಗಳ ಮೂಲಕ ಜಾದೂ ಮಾಡಿದ್ದು, ಜಾತಿ ಎಂಬ ಅತಿ ಪುರಾತನ ವ್ಯವಸ್ಥೆಯನ್ನು ಹೊಸ ಬೆಳಕಲ್ಲಿ ನೋಡುವ ಪ್ರಯತ್ನವನ್ನು ಪುಸ್ತಕದ ಮೂಲಕ ಮಾಡಿದ್ದಾರೆ. ಜಾತಿ ಎನ್ನುವ ಪರಿಕಲ್ಪನೆಯನ್ನು ವಿಶಾಲ ದೃಷ್ಟಿಯಲ್ಲಿ ನೋಡುವ ಅವಶ್ಯಕತೆಯನ್ನೂ ತಿಳಿಸಿದ್ದಾರೆ.
ಪುಸ್ತಕವನ್ನು ವೆಸ್ಟ್ಲ್ಯಾಂಡ್ ಪಬ್ಲಿಕೇಷನ್ (ಅಮೇಜಾನ್ ಕಂಪನಿ) ಪ್ರಕಟಿಸಿದೆ. ಭಾರತದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಹಾಗೂ ಅಮೆಜಾನ್.ಇನ್ನಲ್ಲಿ ಪುಸ್ತಕ ಲಭ್ಯವಿರಲಿದೆ.