ಭಾರತ ರತ್ನ ಸಿಎನ್ಆರ್ ರಾವ್ಗೆ ಬಸವಶ್ರೀ ಪ್ರಶಸ್ತಿ
ಬೆಂಗಳೂರು, ಏ. 29:ಬೆಂಗಳೂರಿನ ಬಸವ ವೇದಿಕೆಯವರು ನೀಡುವ 2014 ನೇ ಸಾಲಿನ ಬಸವಶ್ರೀ ಪ್ರಶಸ್ತಿಗೆ ಭಾರತ ರತ್ನ ಪ್ರೊ. ಸಿಎನ್ಆರ್ ರಾವ್ ಪಾತ್ರರಾಗಿದ್ದಾರೆ.
ಬಸವ ವೇದಿಕೆ ಪ್ರತಿ ವರ್ಷ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ವರ್ಷ ಕವಯತ್ರಿ ಡಾ.ಲತಾ ರಾಜಶೇಖರ್ ಮತ್ತು ಶರಣ ಸಾಹಿತ್ಯ ಸಂಶೋಧಕ ಡಾ.ಆರ್ ಶಿವಣ್ಣರವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ನೀಡಲಾಗುವುದು ಎಂದು ಬೆಂಗಳೂರಿನ ಬಸವ ವೇದಿಕೆಯ ಸಂಸ್ಥಾಪಕ ಡಾ.ಸಿ ಸೋಮಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬಸವಾದಿ ಶಿವಶರಣರ ದಿವ್ಯಾದರ್ಶನಗಳನ್ನು ಪ್ರಚುರಪಡಿಸಲು ಬೆಂಗಳೂರಿನಲ್ಲಿ 1991ರಲ್ಲಿ ಜನ್ಮತಾಳಿರುವ ಬಸವವೇದಿಕೆ ಪ್ರತಿ ವರ್ಷ ಬಸವ ಜಯಂತಿಯನ್ನು ಆಚರಿಸುತ್ತಿದ್ದು, ಈ ವರ್ಷ ಮೇ, 4ರಂದು ರವೀಂದ್ರಾ ಕಲಾಕ್ಷೇತ್ರದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ.[ಚುನಾವಣೆ ಬಗ್ಗೆ ಭಾರತ ರತ್ನ ಸಿಎನ್ಆರ್ ರಾವ್ ಏನನ್ತಾರೆ?]
ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಹಕಾರ ಸಚಿವ ಹೆಚ್ಎಸ್.ಮಹಾದೇವ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದು,ಉಪಲೋಕಾಯುಕ್ತ ಸುಭಾಷ್ ಬಿ. ಆದಿ ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.