ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದ ಪುಂಡಾಟ: ಸೆಕ್ಯುರಿಟಿ ಗಾರ್ಡ್ ಸೆರೆ
ಬೆಂಗಳೂರು, ಅ. 27: ಸೌಂದರ್ಯ ಜಗದೀಶ್ ಕುಟುಂಬದ ಪುಂಡಾಟ: ಸೆಕ್ಯುರಿಟಿ ಗಾರ್ಡ್ನನ್ನು ಬಂಧಿಸಿದ ಪೊಲೀಸರು. ಸಿಸಿಬಿ ಪೊಲೀಸರಿಂದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಬಂಧನ, ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಯುವಕನ ಬರ್ಬರ ಹತ್ಯೆ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ಸೌಂದರ್ಯ ಜಗದೀಶ್ ಕುಟುಂಬದ ಪುಂಡಾಟ ಪ್ರಕರಣ:
ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದ ಪುಂಡಾಟ ಪ್ರಕರಣದಲ್ಲಿ ಆರೋಪವೇ ಇಲ್ಲದ ಸೆಕ್ಯುರಿಟಿ ಗಾರ್ಡ್ ನನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗನಳನ್ನು ಬಂಧಿಸದೇ ಸೆಕ್ಯುರಿಟಿ ಗಾರ್ಡ್ ನನ್ನು ಬಂಧಿಸಿದ ಪೊಲೀಸರ ಕ್ರಮ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
ಯಾವುದೇ ಪ್ರಭಾವಕ್ಕೆ ಒಳಗಾಗದೇ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ಸೂಚಿಸಿದ್ದರು. ಇದರ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸಲು ಆರು ವಿಶೇಷ ತಂಡಗಳನ್ನು ರಚಿಸಿದ್ದರು. ಮಲ್ಲೇಶ್ವರಂ ಎಸಿಪಿ ವೆಂಕಟೇಶ ನಾಯ್ಡು ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದರು. ಸೌಂದರ್ಯ ಜಗದೀಶ್ ಅವರ ಮನೆಯ ಸೆಕ್ಯುರಿಟಿ ಗಾರ್ಡ್ ಬಾಲಾಜಿಯನ್ನು ಬಂಧಿಸಿದ್ದಾರೆ. ಹಿರಿಯ ಅಧಿಕಾರಿಗಳನ್ನು ಮೆಚ್ಚಿಸಲು ಪೊಲೀಸರು ಸೆಕ್ಯುರಿಟಿ ಗಾರ್ಡ್ ನನ್ನು ಬಂಧಿಸಿದ್ದಾರಾ? ಎಂಬ ಪ್ರಶ್ನೆ ಎದುರಾಗಿದೆ.
ಡ್ರಗ್ ಜಾಲದ ಮೇಲೆ ಸಿಸಿಬಿ ದಾಳಿ:
ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 20 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಗೋವಾದಲ್ಲಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಸಿಸಿಬಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಗೋವಾದಲ್ಲಿರುವ ಆರೋಪಿ ಮೂಲಕ ಮೆಲಾಡ್ ಪ್ರದೇಶದಿಂದ ಬಂಧಿತ ಆರೋಪಿ ಡ್ರಗ್ ತರಿಸಿಕೊಳ್ಳುತ್ತಿದ್ದ. ಬೆಂಗಳೂರು ನಗರದಲ್ಲಿ ಡ್ರಗ್ ಪೆಡ್ಲರ್ ಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದರು. ಹಲವು ವಿದ್ಯಾರ್ಥಿಗಳಿಗೆ ಮತ್ತು ಐಟಿ ಉದ್ಯೋಗಿಗಳಿಗೂ ಡ್ರಗ್ ಪೂರೈಕೆ ಮಾಡಿರುವುದು ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ನೈಜೀರಿಯಾ ಮೂಲದ ಜೋ ಬಂಧಿತ ಅರೋಪಿ. ಬ್ಯುಜಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಜೋ ಬೆಂಗಳೂರಿನಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದ. ಗೋವಾದಲ್ಲಿ ತನ್ನ ಜಾಲ ವಿಸ್ತರಿಸಿ ಅಲ್ಲಿಂದ ಬೆಂಗಳೂರಿಗೆ ಡ್ರಗ್ ತರಿಸುತ್ತಿದ್ದ. ಇತರೆ ರಾಜ್ಯಗಳ ಡ್ರಗ್ ಕಿಂಗ್ ಪಿನ್ ಗಳ ಸಂಪರ್ಕ ಸಾಧಿಸಿ ಅವರಿಗೂ ಜೋ ಡ್ರಗ್ ಪೂರೈಕೆ ಮಾಡುತ್ತಿದ್ದ. ಪ್ರಯಾಣಿಕ ಸೋಗಿನಲ್ಲಿ ಗೋವಾಗೆ ಹೋಗಿ ಬೆಂಗಳೂರಿಗೆ ಡ್ರಗ್ ತರುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಎಸಿಪಿ ಗೌತಮ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಿರುಪಾಕ್ಷ ಮತ್ತು ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನ ಬಳಿ 20 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರೆ ಮತ್ತು ಕ್ರಿಸ್ಟಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಬರ್ಬರ ಹತ್ಯೆ:
ಕ್ಷುಲ್ಲಕ ಕಾರಣಕ್ಕೆ ಆಪ್ತ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ಧಿಕ್ ಕೊಲೆಯಾದ ಯುವಕ. ಅರ್ಬಾಜ್ ಮತ್ತು ಸಿದ್ಧಿಕ್ ಆಪ್ತ ಸ್ನೇಹಿತರಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಈ ವೇಲೆ ಚಾಕುವಿನಿಂದ ಇರಿದು ಸಿದ್ಧಿಕ್ ನನ್ನು ಕೊಲೆ ಮಾಡಿ ಅರ್ಬಾಜ್ ತಲೆ ಮರೆಸಿಕೊಂಡಿದ್ದಾನೆ. ಗೋವಿಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದರೋಡೆಗೆ ಯತ್ನಿಸುತ್ತಿದ್ದ ಆರೋಪಿಗಳ ಸೆರೆ:
ದರೋಡೆಗೆ ಹೊಂಚು ಹಾಕುತ್ತಿದ್ದ ಮೂವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ , ಸಾಗರ್ ಮತ್ತು ಮಹೇಂದ್ರ ಬಂಧಿತ ಆರೋಪಿಗಳು. ಇವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾಗಲಗುಂಟೆಯ ವಿಜಯಲಕ್ಷ್ಮೀ ಬಡಾವಣೆಯಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬಾಗಲಗುಂಟೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಅರೋಪಿಗಳಾದ ಪ್ರಶಾಂತ್ , ಪೀಟರ್ ತಲೆ ಮರೆಸಿಕೊಂಡಿದ್ದಾರೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.