ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬಕ್ಕಾಗಿ ಪೊಲೀಸರ ಶೋಧ
ಬೆಂಗಳೂರು, ಅ. 26: ಕೆಲಸಗಾರರ ಮನೆ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬಕ್ಕೆ ತಲೆಮರೆಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಉಳ್ಳವರು ಏನು ಮಾಡಿದರೂ ನಡೆಯುತ್ತಿದೆ ಎಂದು ಮೆರೆಯಲು ಹೋದವರು ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಕಣ್ಮರೆಯಾಗಿದ್ದಾರೆ.
ಸೌಂದರ್ಯ ಜಗದೀಶ್ ಕುಟುಂಬಸ್ಥರ ಹಲ್ಲೆ ಪ್ರಕರಣದ ತನಿಖೆ ಚರುಕುಗೊಳಿಸಿರುವ ಪೊಲೀಸರು ಅರೋಪಿಗಳ ಪತ್ತೆಗಾಗಿ ಆರು ತಂಡ ರಚನೆ ಮಾಡಿದ್ದಾರೆ. ತನಿಖಾ ತಂಡವೊಂದು ಸೌಂದರ್ಯ ಜಗದೀಶ್ ಅವರ ಸಹೋದರಿ ಮನೆಯಲ್ಲಿ ಶೋಧ ನಡೆಸಿದರು.
ಗೊರಗುಂಟೆಪಾಳ್ಯದಲ್ಲಿರುವ ಮನೆಯಲ್ಲಿ ಶೋಧ ನಡೆಸಿದರು. ಪೊಲೀಸರು ಮನೆ ಪ್ರವೇಶಿಸಲು ಜಗದೀಶ್ ಸಹೋದರಿ ಅವಕಾಶ ಮಾಡಿಕೊಡಲಿಲ್ಲ. ಮಹಿಳಾ ಸಿಬ್ಬಂದಿ ಕರೆ ತರುವಂತೆ ಪಟ್ಟು ಹಿಡಿದಿದ್ದರು. ಆ ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿಯ ಜತೆ ತಪಾಸಣೆ ನಡೆಸಿ ಬರಿಗೈಯಲ್ಲಿ ವಾಪಸಾದರು.
ಆರು ತಂಡ ರಚನೆ ಮಾಡಿ ಶೋಧ
ಸೌಂದರ್ಯ ಜಗದೀಶ್, ಪತ್ನಿ ರೇಖಾ, ಪುತ್ರ ಸ್ನೇಹಿತೇಶ್ ಅವರಿಗಾಗಿ ಸದಾಶಿವನಗರದ ಪ್ಲಾಟ್, ಜೆಟ್ ಲಾಗ್ ಪಬ್ ಸೇರಿದಂತೆ ಅನೇಕ ಕಡೆ ಶೋಧ ನಡೆಸಿದರೂ ಜಗದೀಶ್ ಸುಳಿವು ಪತ್ತೆಯಾಗಿಲ್ಲ. ಸಂಜೆಯೊಳಗೆ ಆರೋಪಿಗಳನ್ನು ಬಂಧಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆರು ತಂಡ ರಚನೆ ಮಾಡಿ ಶೋಧ ನಡೆಸುತ್ತಿವೆ.
ಇನ್ನೂ ಮನೆ ಕೆಲಸಗಾರರ ಮೇಲೆ ದರ್ಪ ತೋರಿ ಹಲ್ಲೆ ಮಾಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸೌಂದರ್ಯ ಜಗದೀಶ್ ಕುಟುಂಬ ನ್ಯಾಯಾಲಯದ ಮೊರೆ ಹೋಗಿದೆ.
ಉದ್ಯಮಿ ಕುಟುಂಬ ಕೆಲಸಗಾರರ ಬೆನ್ನಿಗೆ
ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆಗೆ ಒಳಗಾಗಿರುವ ನೀಲಮ್ಮಮತ್ತು ಅನುರಾಧ ಅವರ ಬೆಂಬಲಕ್ಕೆ ಅವರು ಕೆಲಸ ಮಾಡುತ್ತಿದ್ದ ಮನೆ ಮಾಲೀಕರು ನಿಂತಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉದ್ಯಮಿ ಪುರುಷೋತ್ತಮ್ ಅವರ ಪುತ್ರ, ರಜತ್ ಗೌಡ, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಅವರಿಗೆ ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡಿದೆ ಎಂಬ ಮಾಹಿತಿ ಸಿಕ್ಕಿದೆ. ಅನುರಾಧ ಮತ್ತು ನೀಲಮ್ಮ ಅವರಿಗೆ ಬೆಂಬಲ ನೀಡುತ್ತೇವೆ. ಇವರ ಮನೆಯಲ್ಲಿ ಕೆಲಸ ಮಾಡಿದ್ದಕ್ಕೆ ಸಾರ್ಥಕ ಎಂಬ ಭಾವನೆ ಅವರಲ್ಲಿ ಬರುವಂತೆ ಮಾಡುತ್ತೇವೆ. ಇನ್ನು ಪ್ರಕರಣದ ತನಿಖೆ ಸಂಬಂಧ ಎಲ್ಲಾ ವಿಡಿಯೋಗಳನ್ನು ತೆಗೆಸಿ ಪೊಲೀಸರಿಗೆ ಒದಗಿಸಿದ್ದೇವೆ ಎಂದು ರಜತ್ ಗೌಡ ತಿಳಿಸಿದ್ದಾರೆ.
ಹೈಕೋರ್ಟ್ ಮೊರೆ
ನಿರೀಕ್ಷಣಾ ಜಾಮೀನು ಕೋರಿ ಸೌಂದರ್ಯ ಜಗದೀಶ್ ಅವರು ಸಲ್ಲಿಸಿರುವ ಅರ್ಜಿ ತಿರಸ್ಕೃತಗೊಂಡಲ್ಲಿ, ಹೈಕೋರ್ಟ್ ಮೊರೆ ಹೋಗಲಿದ್ದಾರೆ. ಇದರ ನಡುವೆ ಉದ್ದಟತನ ಮೆರೆದು ಇದೀಗ ತಲೆ ಮರೆಸಿಕೊಂಡಿರುವ ಕುಟುಂಬದ ಶೋಧಕ್ಕಾಗಿ ಆರು ತಂಡಗಳನ್ನು ರಚನೆ ಮಾಡಲಾಗಿದೆ. ಹೈಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸುವ ಮೊದಲೇ ಬಂಧನಕ್ಕೆ ಒಳಗಾದರೂ ಅಚ್ಚರಿ ಪಡಬೇಕಿಲ್ಲ. ಆರಂಭದಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಇದೀಗ ಹುಡುಕಾಟ ಮಾಡುತ್ತಿದ್ದು, ಸೌಂದರ್ಯ ಜಗದೀಶ್ ಕುಟುಂಬ ಸೇರಿದಂತೆ ಹಲ್ಲೆಕೋರರನ್ನು ಪೊಲೀಸರು ಬಂಧಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
Recommended Video
ಮೂರು ದಿನದ ಸಿಸಿಟಿವಿ ಪಡೆದು ವಿಚಾರಣೆ
ಮನೆ ಕೆಲಸಗಾರರಾದ ನೀಲಮ್ಮ ಮತ್ತು ಅನುರಾಧ ಅವರ ಮೇಲೆ ಹಲ್ಲೆ ಮಾಡಿದ ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಮತ್ತು ಡಿವಿಆರ್ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ತಲೆ ಮರೆಸಿಕೊಂಡಿರುವ ಸೌಂದರ್ಯ ಜಗದೀಶ್ ಸಂಪರ್ಕ ಸಂಖ್ಯೆ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಮನೆಯಲ್ಲಿದ್ದ ಬೌನ್ಸರ್ಸ್ ಮತ್ತು ಜೆಟ್ ಲ್ಯಾಗ್ ಪಬ್ ಸಿಬ್ಬಂದಿ ವಿಚಾರಣೆ ನಡೆದಿದೆ. ಮಲ್ಲೇಶ್ವರದ ಎಸಿಪಿ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ವಿಚಾರಣೆ ಮುಂದುವರೆದಿದೆ.