ರಾಜಧಾನಿಯಲ್ಲಿ ಸುರಿದ ಧಾರಾಕಾರ ಮಳೆ, ಎಲ್ಲೆಲ್ಲಿ ಅವಾಂತರ
Recommended Video
ಬೆಂಗಳೂರು, ಮೇ 8: ಬೆಂಗಳೂರಿನಲ್ಲಿ ಮಂಗಳವಾರ ಗುಡುಗು, ಸಿಡಿಲು, ಮಳೆ, ಗಾಳಿಗೆ ಜನರು ಬೆಚ್ಚಿಬಿದ್ದಿದ್ದಾರೆ.
ಸಾಕಷ್ಟು ಕಡೆಗಳಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾತ್ರಿ ಸುಮಾರು 12ರವರೆಗೂ ಮಳೆ ಸುರಿದಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು.
ಬೆಂಗಳೂರಲ್ಲಿ ಗುಡುಗು ಸಹಿತ ಮಳೆ, ಸಂಚಾರ ಅಸ್ತವ್ಯಸ್ತ
40ಕ್ಕೂ ಹೆಚ್ಚು ಕಡೆ ಮರಗಳು ಧರೆಗೆ ಉರುಳಿದ್ದು, ಹಲವು ಕಡೆಗಳಲ್ಲಿ ಕಾರು, ಬೈಕ್ಗಳ ಮೇಲೆ ಮರ ಬಿದ್ದು ವಾಹನಗಳು ಜಖಂ ಆಗಿತ್ತು. ಇದು ನದಿಯೋ ರಸ್ತೆಯೋ ಎಂಬಂತೆ ರಸ್ತೆಯಲ್ಲಿ ಅಡಿಯುದ್ದ ನೀರು ಹರಿದು, ವಾಹನ ಸವಾರರು ಪರದಾಡಿದ್ದರು.
ಯಶವಂತಪುರದಿಂದ ಮಲ್ಲೇಶ್ವರಂಗೆ ಹೋಗುವ ರಸ್ತೆಯಲ್ಲಿ ಭಾರೀ ಹೊಂಡವೊಂದು ಸೃಷ್ಟಿಯಾಗಿದೆ. ಸುಮಾರು ಮೂರ್ನಾಲ್ಕು ಅಡಿಯಷ್ಟು ದೊಡ್ಡ ಗುಂಡಿ ಬಿದ್ದಿದೆ.
ಬೆಂಗಳೂರಿನ ಎಲ್ಲೆಲ್ಲಿ ಟ್ರಾಫಿಕ್ ಜಾಮ್
ಮಲ್ಲೇಶ್ವರಂ, ವಿಜಯನಗರ, ರಾಜಾಜಿನಗರ, ಹೆಬ್ಬಾಳ, ನವರಂಗ್, ಮೆಜೆಸ್ಟಿಕ್, ಸದಾಶಿವನಗರ ಸೇರಿದಂತೆ ಹಲವು ಕಡೆ ಟ್ರಾಫಿಕ್ ಜಾಮ್ ಆಯಿತು. ಮಳೆ ಸುರಿಯುತ್ತಿದ್ದ ವೇಳೆ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿ ಆಗಿತ್ತು.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
ಸಿಡೆದಹಳ್ಳಿಯಲ್ಲಿ 90 ಮಿ.ಮೀಟರ್ ಮಳೆ, ಪೀಣ್ಯ, ಮಾದಾವರದಲ್ಲಿ 88 ಮಿ.ಮೀಟರ್ ಮಳೆ, ಸಾರಕ್ಕಿ, ಬಸವನಗುಡಿಯಲ್ಲಿ 64 ಮಿ.ಮೀಟರ್ ಮಳೆ, ಗಾಳಿ ಆಂಜನೇಯ ದೇಗುಲದ ಬಳಿ 55 ಮಿ.ಮೀ ಮಳೆಯಾಗಿದೆ. ದೊಡ್ಡಬಿದರಕಲ್ಲಿನಲ್ಲಿ ಅತಿಹೆಚ್ಚು ಅಂದರೆ 147 ಮಿಲಿಮೀಟರ್ ಮಳೆ ಆಗಿದೆ. ಚಿಕ್ಕಬಿದರಕಲ್ಲಿನಲ್ಲಿ 97 ಮಿ.ಮೀಟರ್ ಮಳೆಯಾಗಿದೆ.
ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ
ಬೆಂಗಳೂರಿನಲ್ಲಿ ಇಂದು ಹಾಗೂ ನಾಳೆ ಕೂಡ ಮಳೆ ಸಾಧ್ಯತೆ
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ನಾಳೆ ಕೂಡ ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನ ಬಿಟಿಎಂ ಲೇಔಟ್ನ 29ನೇ ಮುಖ್ಯ ರಸ್ತೆಯಲ್ಲಿ ಸೌಪರ್ಣಿಕಾ ಅಪಾರ್ಟ್ ಮೆಂಟ್ಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.
ಮಳೆಯಿಂದ ಯಾವ್ಯಾವ ಪ್ರದೇಶದಲ್ಲಿ ಎಷ್ಟು ಹಾನಿ
ಜಯನಗರದ ಸೌಥ್ ಎಂಡ್ ಸರ್ಕಲ್ ಬಳಿಯ ರಣಧೀರ ಕಂಠೀರವ ಪಾರ್ಕ್ ಮತ್ತು ಬಸವನಗುಡಿಯ ಆರ್ಮುಗಂ ಸರ್ಕಲ್ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.
ಗಾಯಿತ್ರಿ ನಗರದಲ್ಲಿ ಬೃಹತ್ ಮರ ಬಿದ್ದು ಹತ್ತಾರು ದ್ವಿಚಕ್ರ ವಾಹನಗಳು ಜಖಂ ಆಗಿವೆ. ಒಂದೇ ಕಡೆ ಮೂರು ಮರಗಳು ಬಿದ್ದು, ಅನಾಹುತ ಸಂಭವಿಸಿದೆ. ಅವಘಡದಲ್ಲಿ ಪೂಜಾ ಎನ್ನುವ ಯುವತಿ ತಲೆಗೆ ಪೆಟ್ಟು ಬಿದ್ದಿದೆ. ಪೂಜಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಮಹಿಳೆ ಸಹ ಗಾಯಗೊಂಡಿದ್ದಾರೆ. ಇನ್ನು ಮರ ಬಿದ್ದು ರಸ್ತೆ ಬಂದ್ ಆದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು.