ಇದು ಯಾವುದಕ್ಕೂ ಕಡಿಮೆ ಮಾಡದ ಚಿನ್ನಮ್ಮನ ಜೈಲು ದುನಿಯಾ!
ಬೆಂಗಳೂರು, ಜನವರಿ 20: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಆಪ್ತೆ, ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿ.ಕೆ.ಶಶಿಕಲಾಗೆ ರಾಜಾತಿಥ್ಯ ದೊರೆಯುತ್ತಿದೆ ಎಂಬ ಸಂಗತಿಯು ಮಾಹಿತಿ-ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಯಲ್ಲಿ ಬಯಲಾಗಿದೆ.
ಐದು ಕೋಣೆಗಳು, ಖಾಸಗಿಯಾಗಿ ಅಡುಗೆಯವರು ಮತ್ತು ಅಡುಗೆ ಮಾಡಲು ಸ್ಥಳ ಹಾಗೂ ಎಷ್ಟು ಮಂದಿ ಸಂದರ್ಶಕರು ಬೇಕಾದರೂ ಭೇಟಿ ಮಾಡಬಹುದು...ಇಂಥ ವಿಶೇಷ ಸವಲತ್ತುಗಳು ಆಕೆ ಪಾಲಿಗೆ ಇವೆ ಎಂಬ ಸಂಗತಿ ಬಯಲಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತ ನರಸಿಂಹ ಮೂರ್ತಿ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಇಷ್ಟೆಲ್ಲ ಸವಲತ್ತಿಗೆ ಭಾರೀ ದೊಡ್ಡ ಮೊತ್ತವನ್ನೇ ಲಂಚವಾಗಿ ನೀಡಿದ್ದಾರೆ ಎಂದಿದ್ದಾರೆ.
ಜೈಲು ಶಿಕ್ಷೆಯ ಆರಂಭದ ದಿನಗಳಲ್ಲಿ ಶಶಿಕಲಾರ ಹಲವು ಬೇಡಿಕೆಗಳನ್ನು ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳು ನಿರಾಕರಿಸಿದ್ದರು. ಖಾಸಗಿಯಾಗಿ ಟೀವಿ, ಮನೆಯಲ್ಲಿ ಮಾಡಿದ ಅಡುಗೆ, ಮಾಂಸಾಹಾರ ಅಡುಗೆಗಾಗಿ ಇಟ್ಟಿದ್ದ ಬೇಡಿಕೆಯನ್ನು ಅಧಿಕಾರಿಗಳು ಮುಲಾಜಿಲ್ಲದೆ ತಿರಸ್ಕರಿಸಿದ್ದರು.
ಕಂಬಿ ಹಿಂದೆ ಕುಳಿತು ಕನ್ನಡ ಕಾಗುಣಿತ ತಿದ್ದುತ್ತಿರುವ ಶಶಿಕಲಾ
ಆದರೆ, ಈಗ ಮೂರ್ತಿ ಅವರು ಆರೋಪಿಸುವ ಪ್ರಕಾರ, ಫೆಬ್ರವರಿ 14, 2017ರಂದು ಶಶಿಕಲಾ ಅವರು ಜೈಲು ತಲುಪಿದ ದಿನದಿಂದ ಮಹಿಳಾ ಕೈದಿಗಳು ಇದ್ದ ಪಕ್ಕದ ನಾಲ್ಕು ಕೋಣೆಗಳನ್ನು ಖಾಲಿ ಮಾಡಿಕೊಡಲಾಗಿದೆ. ಜೈಲಿನಲ್ಲಿ ಅಡುಗೆ ಮಾಡಿಕೊಳ್ಳುವ ಸವಲತ್ತಿಲ್ಲ. ಆದರೆ ಮಹಿಳಾ ಕೈದಿಯೊಬ್ಬರನ್ನು ಶಶಿಕಲಾಗೆ ಅಡುಗೆ ಮಾಡಲು ನೇಮಿಸಿದ್ದಾರೆ ಎನ್ನುತ್ತಾರೆ.
ಎರಡು ಕೋಟಿ ರುಪಾಯಿ ಲಂಚದ ಆರೋಪ
ಗುಂಪುಗಳಲ್ಲಿ ಜನರು ಆಕೆಯನ್ನು ಭೇಟಿ ಆಗಲು ಬರುತ್ತಾರೆ. ಆಕೆ ಇರುವ ಕೋಣೆಗೆ ನೇರವಾಗಿ ಹೋಗುತ್ತಾರೆ. ಅಲ್ಲೇ ಮೂರರಿಂದ ನಾಲ್ಕು ಗಂಟೆ ಇರುತ್ತಾರೆ ಎಂದು ನರಸಿಂಹ ಮೂರ್ತಿ ಆರೋಪಿಸುತ್ತಾರೆ. ದೊಡ್ಡ ಮೊತ್ತದ ಲಂಚ ನೀಡಿ ಇಷ್ಟೆಲ್ಲ ಸುಖವನ್ನು ಶಶಿಕಲಾ ಅನುಭವಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ರೂಪಾ ಆರೋಪಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಸವಲತ್ತು ಪಡೆಯಲು ಎರಡು ಕೋಟಿ ರುಪಾಯಿ ಲಂಚವನ್ನು ಶಶಿಕಲಾ ನೀಡಿದ್ದಾರೆ ಎಂದು ಅವರು ಆರೋಪ ಮಾಡಿದ್ದರು.
ಸಂಚಾರ ವಿಭಾಗಕ್ಕೆ ಎತ್ತಂಗಡಿ ಆಗಿದ್ದರು
ಆಕೆಯ ಮೇಲಧಿಕಾರಿಯಾಗಿದ್ದ ಸತ್ಯನಾರಾಯಣ ರಾವ್ ವಿರುದ್ಧ ರೂಪಾ ಆರೋಪ ಮಾಡಿದ್ದರು. ಆ ನಂತರ ರೂಪಾ ಅವರನ್ನು ಸಂಚಾರ ವಿಭಾಗಕ್ಕೆ ವರ್ಗಾವಣೆ ಮಾಡಲಾಯಿತು, ಇನ್ನೇನು ನಿವೃತ್ತಿ ಆಗಬೇಕಿದ್ದ ಸತ್ಯನಾರಾಯಣ ರಾವ್ ಅವರನ್ನು ರಜಾ ಮೇಲೆ ತೆರಳುವಂತೆ ಸೂಚಿಸಲಾಗಿತ್ತು.
ಸೌಲಭ್ಯ ನೀಡಿರುವುದು ಹೌದು ಎನ್ನುತ್ತಿದೆ ವರದಿ
ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರು ರೂಪಾ ಆರೋಪದ ಬಗ್ಗೆ ತನಿಖೆ ಮಾಡಿದ್ದರು. ಹೌದು, ನಿಯಮಗಳನ್ನು ಮೀರಲಾಗಿದೆ. ಶಶಿಕಲಾ ಮತ್ತು ಆಕೆಯ ಸಂಗಡಿಗರಿಗೆ ಹಲವು ಸೌಲಭ್ಯ ನೀಡಲಾಗಿದೆ ಎಂದು ವಿನಯ್ ಕುಮಾರ್ ನೇತೃತ್ವದಲ್ಲಿ ನೀಡಲಾದ ವರದಿಯಲ್ಲಿ ತಿಳಿಸಲಾಗಿದೆ.
ಹೀಗೆಲ್ಲ ಆಗಿರಲಿಕ್ಕಿಲ್ಲ: ಜಿ.ಪರಮೇಶ್ವರ
ಸಿಸಿಟಿವಿ ದೃಶ್ಯಾವಳಿಗಳು, ಜೈಲು ಅಧಿಕಾರಿಗಳು ನಿರ್ವಹಿಸುವ ನೋಂದಣಿ ಪುಸ್ತಕ ಎಲ್ಲವನ್ನೂ ತನಿಖಾ ಸಮಿತಿ ಪರಿಶೀಲಿಸಿದೆ. ಎಲ್ಲವನ್ನು ತಿದ್ದಲಾಗಿದೆ ಎಂದು ಅದರಲ್ಲಿ ಕಂಡು ಬಂದಿದೆ. ಐದು ಕೋಣೆಗಳು, ಅಜಂತಾ ಹೆಸರಿನ ಅಡುಗೆಯವರು, ಪ್ರತಿ ದಿನವೂ ಸಂದರ್ಶಕರ ಭೇಟಿ ಇವೆಲ್ಲವೂ ಕಂಡುಬಂದಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಆ ವೇಳೆ ಗೃಹ ಸಚಿವ ಸ್ಥಾನದಲ್ಲಿದ್ದ ಡಾ.ಜಿ.ಪರಮೇಶ್ವರ ಮಾತನಾಡಿ, ಹೀಗೆಲ್ಲ ಆಗಿರಲಿಕ್ಕಿಲ್ಲ ಎಂದು ಹೇಳಿದ್ದಾರೆ.