ಎಲ್ಲವೂ ಕನ್ನಡದಲ್ಲೇ ಸಿಗಬೇಕೆಂದರೆ ಕನ್ನಡಕ್ಕೆ ಡಬ್ಬಿಂಗ್ ಬೇಕು: ಬನವಾಸಿ ಬಳಗ
ಬೆಂಗಳೂರು, ಡಿಸೆಂಬರ್ 9: "ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಅನ್ನುವ ಕವಿ ನುಡಿಯನ್ನು ಕಾರ್ಯರೂಪಕ್ಕೆ ತರಲು ಡಬ್ಬಿಂಗ್ ಬೇಕು. ಆಗಲೇ ಕನ್ನಡಿಗರಿಗೆ ಎಲ್ಲವೂ ಕನ್ನಡದಲ್ಲಿ ದೊರೆಯುವಂತಾಗಲು ಸಾಧ್ಯ" ಎಂದು ಭಾನುವಾರ ಬನವಾಸಿ ಬಳಗದ ಅಧ್ಯಕ್ಷ ಆನಂದ್ ಅಭಿಪ್ರಾಯ ಪಟ್ಟರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ 'ಡಬ್ಬಿಂಗ್ ಹಕ್ಕೊತ್ತಾಯ' ಪ್ರತಿಭಟನೆ ಸಭೆಯಲ್ಲಿ ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಹತ್ತಾರು ಕನ್ನಡಪರ ಸಂಘಟನೆಗಳು ಭಾಗವಹಿಸಿದ್ದವು. ಆ ಸಭೆಯಲ್ಲಿ ಅವರು ಮಾತನಾಡಿ, ಡಬ್ಬಿಂಗ್ ಹೋರಾಟದ ಹತ್ತು ವರ್ಷಗಳ ಹಲವು ಮಜಲುಗಳ ಬಗ್ಗೆ ವಿವರಿಸಿದರು.
ಕನ್ನಡದಲ್ಲಿ ಡಬ್ಬಿಂಗ್ ಗಾಗಿ ಆಗ್ರಹಿಸಿ ಬನವಾಸಿ ಬಳಗದಿಂದ ಪ್ರತಿಭಟನೆ
ಕನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಆಂಜನಪ್ಪ ಮಾತನಾಡಿ, ಡಬ್ಬಿಂಗ್ ತಡೆಯುವುದು ಕನ್ನಡ ದ್ರೋಹದ ಕೆಲಸ. ಡಬ್ಬಿಂಗ್ ಚಿತ್ರಗಳಿಗೆ ತಡೆ ಒಡ್ಡಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿರಿಯ ನಿರ್ಮಾಪಕ ಹಾಗೂ ಸಮಗ್ರ ಕನ್ನಡ ಚಲನಚಿತ್ರ ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಅರವತ್ತರ ದಶಕದಲ್ಲಿ ಹಿರಿಯರಾದ ಅನಕೃ, ರಾಮಮೂರ್ತಿ ಅವರು ಎಳವೆಯಲ್ಲಿದ್ದ ಕನ್ನಡ ಚಲನಚಿತ್ರ ರಂಗದ ಅಭಿವೃದ್ಧಿಗಾಗಿ ಡಬ್ಬಿಂಗ್ ವಿರೋಧಿಸಿದ್ದರು. ಆದರೆ ಇಂದಿಗೆ ಚಿತ್ರರಂಗದ ಕೆಲವರು ತಮ್ಮ ಸ್ವಾರ್ಥಕ್ಕೆ ಡಬ್ಬಿಂಗ್ ತಡೆಯುತ್ತಿದ್ದಾರೆ. ಡಬ್ಬಿಂಗ್ ಬರುವುದರಿಂದ ಕನ್ನಡದ ಮಾರುಕಟ್ಟೆ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕರುನಾಡ ಯೋಧರು ತಂಡದ ಮಂಜುನಾಥ್, ಕನಾಟಕ ರಣಧೀರ ಪಡೆಯ ಅಧ್ಯಕ್ಷ ಹರೀಶ್ ಕುಮಾರ್, ಎಚ್ ಎಎಲ್ ಕನ್ನಡ ಸಂಘದ ರಾಮಸ್ವಾಮಿ ಮತ್ತಿತರ ಕನ್ನ ಡ ಸಂಘಗಳ ಪದಾಧಿಕಾರಿಗಳು ಹಾಗೂ ಕರ್ನಾಟಕದ ಮೂಲೆ ಮೂಲೆಯಿಂದ ಬಂದಿದ್ದ ಡಬ್ಬಿಂಗ್ ಪರವಾದ ನಿಲುವು ಹೊಂದಿದ ಹಲವರು ಹಾಜರಿದ್ದರು.