ಯಶವಂತಪುರ ಉಪ ಚುನಾವಣೆ: ಕಾಂಗ್ರೆಸ್ನಿಂದ ಮಾಜಿ ಶಾಸಕನ ಸ್ಪರ್ಧೆ?
ಬೆಂಗಳೂರು, ನವೆಂಬರ್ 11: ಅನರ್ಹ ಶಾಸಕರ ರಾಜೀನಾಮೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಬುಧವಾರ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಶಾಸಕರ ಅನರ್ಹತೆಯೇ ರದ್ದಾಗುತ್ತದೆಯೇ, ಅವರ ರಾಜೀನಾಮೆ ಅಂಗೀಕಾರವಾಗಿ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆಯೇ ಅಥವಾ ಹಿಂದಿನ ಸ್ಪೀಕರ್ ನಿರ್ಧಾರದಂತೆಯೇ ಅವರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುವ ಮೂಲಕ ಅವರು ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಅನರ್ಹ ಶಾಸಕರ ಪರ/ವಿರೋಧದ ಯಾವುದೇ ತೀರ್ಪು ಬರಲಿ, ಬಿಜೆಪಿ ಮತ್ತು ಜೆಡಿಎಸ್ ತಮ್ಮ ಎದುರು ಯಾವ ಅಭ್ಯರ್ಥಿಗಳನ್ನಾದರೂ ಕಣಕ್ಕಿಳಿಸಲಿ, ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್, 15 ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಇನ್ನು ಉಳಿದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಗೊಂದಲ ಇನ್ನೂ ಮುಂದುವರಿದಿದೆ. ಅವುಗಳ ಪೈಕಿ ಯಶವಂತಪುರ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರು ಬಹುತೇಕ ಅಂತಿಮಗೊಂಡಿದೆ. ಗೋವಿಂದರಾಜನಗರದ ಮಾಜಿ ಶಾಸಕ ಪ್ರಿಯಕೃಷ್ಣ ಅವರನ್ನು ಕಣಕ್ಕಿಳಿಸಲು ಪಕ್ಷ ಉದ್ದೇಶಿಸಿದೆ ಎಂದು ಹೇಳಲಾಗಿದೆ.
ಯಶವಂತಪುರ ಉಪ ಚುನಾವಣೆ; ಜವರಾಯಿ ಗೌಡ ಕಾಂಗ್ರೆಸ್ಗೆ?
2018ರ ಚುನಾವಣೆಯಲ್ಲಿ ಬಿಜೆಪಿಯ ವಿ. ಸೋಮಣ್ಣ ಎದುರು ಸೋಲು ಅನುಭವಿಸಿದ್ದ ಪ್ರಿಯಕೃಷ್ಣ ಅವರೇ ಯಶವಂತಪುರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಎಂದು ಕಾಂಗ್ರೆಸ್ನ ಒಂದು ಸಮುದಾಯ ಹೆಸರು ಸೂಚಿಸಿದೆ ಎಂದು ವರದಿಯಾಗಿದೆ.
ಸಭೆಯಲ್ಲಿ ಪ್ರಿಯಕೃಷ್ಣ ಹೆಸರು
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ನ ಹಿರಿಯ ನಾಯಕರ ಸಭೆ ಬಳಿಕ ಪಕ್ಷದಲ್ಲಿನ ಒಕ್ಕಲಿಗ ನಾಯಕರು ಮತ್ತೊಂದು ಪ್ರತ್ಯೇಕ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ವಿವಿಧ ಚರ್ಚೆಗಳು ನಡೆದಿದ್ದು, ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ವಿಚಾರ ಕೂಡ ಚರ್ಚೆಯಾಯಿತು. ಯಶವಂತಪುರ ಕ್ಷೇತ್ರದಲ್ಲಿ ಎಸ್ಟಿ ಸೋಮಶೇಖರ್ ಅಥವಾ ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಯ ಎದುರು ಪ್ರಿಯಕೃಷ್ಣ ಅವರನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ.
ಮಗನ ಹೆಸರಿಗೆ ತಂದೆಯ ಒಪ್ಪಿಗೆ
ಸಭೆಯಲ್ಲಿ ಹಾಜರಿದ್ದ ಮಾಜಿ ಸಚಿವ ಎಂ. ಕೃಷ್ಣಪ್ಪ, ಪಕ್ಷ ಯಾರ ಹೆಸರನ್ನು ಸೂಚಿಸುತ್ತದೆಯೋ ಒಪ್ಪುತ್ತೇವೆ. ತಮ್ಮ ಮಗ ಪ್ರಿಯ ಕೃಷ್ಣ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಹೈಕಮಾಂಡ್ ಒಪ್ಪಿದರೆ ತಮಗೆ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಪ್ರಿಯಕೃಷ್ಣ ಸ್ಪರ್ಧೆಗೆ ಹಿರಿಯ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಒಲವು ವ್ಯಕ್ತಪಡಿಸಿದ್ದಾರೆ. ಪ್ರಿಯಕೃಷ್ಣ ಹೆಸರನ್ನು ಮಾತ್ರ ಹೈಕಮಾಂಡ್ಗೆ ಕಳುಹಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.
ಒಂದೆರೆಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೊಂದಲ: ದಿನೇಶ್ ಗುಂಡೂರಾವ್
ಕ್ಷೇತ್ರ ಬದಲಿಸಲು ಪ್ರಿಯಕೃಷ್ಣ ಹಿಂದೇಟು?
ಯಶವಂತಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಗನನ್ನು ಕಣಕ್ಕಿಳಿಸಲು ಎ. ಕೃಷ್ಣಪ್ಪ ಒಪ್ಪಿಕೊಂಡರೂ ಪ್ರಿಯ ಕೃಷ್ಣ ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗಿದೆ. 2013ರಲ್ಲಿ ಗೋವಿಂದರಾಜನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಪ್ರಿಯ ಕೃಷ್ಣ, ತವರು ಕ್ಷೇತ್ರವನ್ನು ಬಿಟ್ಟು ಬೇರೆಡೆ ಸ್ಪರ್ಧಿಸಲು ಹಿಂಜರಿದಿದ್ದಾರೆ. ಈ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವಾಗ ಬೇರೆ ಕ್ಷೇತ್ರಕ್ಕೆ ಹೋಗುವುದು ಸೂಕ್ತವೆನಿಸುವುದಿಲ್ಲ. ಇದರಿಂದ ತಮ್ಮ ಕ್ಷೇತ್ರದಲ್ಲಿನ ಹಿಡಿತ ಕೈತಪ್ಪುತ್ತದೆ ಎಂದು ಅವರು ಹಿಂದೇಟು ಹಾಕಿದ್ದಾರೆ. ಆದರೆ ಎಸ್ಟಿ ಸೋಮಶೇಖರ್ ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿರುವ ಕಾಂಗ್ರೆಸ್ಗೆ ಪ್ರಿಯಕೃಷ್ಣ ಅವರೇ ಸೂಕ್ತ ಅಭ್ಯರ್ಥಿಯಾಗಲಿದ್ದಾರೆ ಎಂದು ಕೆಲವು ಮುಖಂಡರು ತೀರ್ಮಾನಿಸಿದ್ದಾರೆ.
2018ರ ಚುನಾವಣೆಯಲ್ಲಿ ಸೋಲು
2018ರ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಕೃಷ್ಣ ಅವರು ಬಿಜೆಪಿಯ ವಿ. ಸೋಮಣ್ಣ ಎದುರು ಸುಮಾರು 12 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. 2013ರ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ ಎಚ್ ರವೀಂದ್ರ ಅವರ ಎದುರು 41 ಸಾವಿರಕ್ಕೂ ಅಧಿಕ ಮತಗಳಿಂದ ಸೋಲುಕಂಡಿದ್ದರು. 2018ರ ಚುನಾವಣೆಯಲ್ಲಿ ಹನೂರು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಟ್ಟು ಹಿಡಿದಿದ್ದ ವಿ. ಸೋಮಣ್ಣ ಕೊನೆಯ ಹಂತದಲ್ಲಿ ಗೋವಿಂದರಾಜನಗರದಲ್ಲಿ ಕಣಕ್ಕಿಳಿದಿದ್ದರು.
ಉಪ ಚುನಾವಣೆ; ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಸಭೆ
ಜವರಾಯಿಗೌಡರ ಹೆಸರು
ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಜೆಡಿಎಸ್ನ ಟಿ.ಎನ್. ಜವರಾಯಿಗೌಡ ಅವರನ್ನು ಸೆಳೆದುಕೊಂಡು ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಉದ್ದೇಶಿಸಿತ್ತು. ಜವರಾಯಿ ಗೌಡ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಎಸ್ಟಿ ಸೋಮಶೇಖರ್ ಎದುರು ಸೋಲು ಅನುಭವಿಸಿದ್ದರು. ಎಸ್ಟಿ ಸೋಮಶೇಖರ್ 115273 ಮತಗಳನ್ನು ಗಳಿಸಿದ್ದರೆ, ಜವರಾಯಿ ಗೌಡ 104562 ಮತಗಳನ್ನು ಪಡೆದುಕೊಂಡಿದ್ದರು.
ನನ್ನ ನೇತೃತ್ವದಲ್ಲಿ ಸಭೆ ನಡೆದಿಲ್ಲ
ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವ ಡಿಕೆ ಶಿವಕುಮಾರ್, ಸಭೆಯ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು. ಅಲ್ಲದೆ, ಪಕ್ಷದ ನಾಯಕರ ಸಭೆ ಹೊರತುಪಡಿಸಿ ಬೇರೆ ಸಭೆ ನಡೆದಿಲ್ಲ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದೆ. ನನ್ನ ನೇತೃತ್ವದಲ್ಲಿ ಯಾವುದೇ ಸಭೆಯಾಗಿಲ್ಲ. ನಾನಿನ್ನೂ ಪಕ್ಷದ ಕಾರ್ಯಕರ್ತ ಎಂದು ಹೇಳಿದರು.